ಸಂಸದೀಯ ಸಭೆಯಲ್ಲಿ 'ಮೋದಿ ಮತ್ತೊಮ್ಮೆ' ಅನುಮೋದನೆ
ನವದೆಹಲಿ, ಮೇ 25: ಬಿಜೆಪಿ ನೇತೃತ್ವದ ಎನ್ಡಿಎಯ ಮೊದಲ ಸಂಸದೀಯ ಸಭೆಯಲ್ಲಿ ಮೋದಿ ಅವರನ್ನು ಸಂಸತ್ನಲ್ಲಿ ಎನ್ಡಿಎ ಮುಖ್ಯಸ್ಥರಾಗಿ ಮತ್ತು ಮುಂದಿನ ಪ್ರಧಾನಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬಿಜೆಪಿ ಮತ್ತು ಎನ್ಡಿಎಯ ಎಲ್ಲ ಸಂಸದರು ಇಂದು ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಸಭೆ ಸೇರಿದ್ದರು. ಎನ್ಡಿಎ ಮುಖಂಡರು ಸಭೆಯಲ್ಲಿ ಹಾಜರಿದ್ದರು. ಅಮಿತ್ ಶಾ ಅವರು ಬಿಜೆಪಿ ಪಕ್ಷದ ಸಂಸದರ ವತಿಯಿಂದ ಮೋದಿ ಅವರನ್ನು ಪ್ರಧಾನಿಯನ್ನಾಗಿ ಸೂಚಿಸಿದರು.
ಎನ್ಡಿಎಯ ಮೈತ್ರಿ ಪಕ್ಷಗಳಾದ, ಅಕಾಲಿ ದಳ, ಎಐಡಿಎಂಕೆ, ಶಿವಸೇನೆ, ಜೆಡಿಯು, ಲೋಕಜನಶಕ್ತಿ ದಳ ಇನ್ನೂ ಹಲವು ಪಕ್ಷಗಳ ಮುಖಂಡರು ಸಾಲಾಗಿ ತಮ್ಮ ಬೆಂಬಲವನ್ನು ಮೋದಿ ಅವರಿಗೆ ಸೂಚಿಸಿದರು. ಸಂಸದರೆಲ್ಲರೂ ಎರಡೂ ಕೈಎತ್ತಿ ಪ್ರಧಾನಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಒಪ್ಪಿಗೆ ಸೂಚಿಸಿದರು.
ಒಪ್ಪಿಗೆಯ ನಂತರ ಬಿಜೆಪಿಯ ಹಿರಿಯರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರುಗಳು ಮೋದಿ ಅವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಎನ್ಡಿಎಯ ಎಲ್ಲ ಮುಖಂಡರು ಮೋದಿ ಅವರಿಗೆ ಅಭಿನಂದಿಸಿದರು. ಸಂಸದರು ಸಹ ಎದ್ದು ನಿಂತು ಟೇಬಲ್ ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಮೋದಿ ಅವರು ಕೈಮುಗಿದು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಹಳೆಯ ನೆನಪಿಗೆ ಜಾರಿಗೆ ಅಮಿತ್ ಶಾ
ಆಯ್ಕೆಯ ನಂತರ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, 2014 ರಲ್ಲಿ ಮೋದಿ ಅವರನ್ನು ಆಯ್ಕೆ ಮಾಡಿದ ಗಳಿಗೆಯನ್ನು ನೆನಪಿಸಿಕೊಂಡು, ಮೋದಿ ಅವರು ಕಳೆದ ಐದು ವರ್ಷದಲ್ಲಿ ಮಾಡಿದ ಕಾರ್ಯವನ್ನು ಮತ್ತೊಮ್ಮೆ ಸರಳವಾಗಿ ಉಲ್ಲೇಖಿಸಿದರು. ಜನರು ಮೋದಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣಗಳನ್ನು ವಿಶ್ಲೇಷಿಸಿದರು. ಬಡವರ ಜೀವನ ಉನ್ನತೀಕರಣ ಮಾಡಿದ ಕಾರಣದಿಂದಲೇ ಅವರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಸಂವಿಧಾನಕ್ಕೆ ತಲೆ ಬಾಗಿ ನಮಿಸಿದ ಮೋದಿ
ಸಂವಿಧಾನಕ್ಕೆ ತಲೆ ಬಾಗಿ ನಮಸ್ಕರಿಸಿ ಮಾತು ಪ್ರಾರಂಭಿಸಿದ ನರೇಂದ್ರ ಮೋದಿ, ತಮ್ಮನ್ನು ಸಂಸತ್ನ ಎನ್ಡಿಎ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿದ ಎಲ್ಲ ಬಿಜೆಪಿಯ ಸಂಸದರಿಗೆ ಮತ್ತು ಎನ್ಡಿಎ ಸದಸ್ಯರಿಗೆ ಅಭಿನಂದನೆಗಳನ್ನು ಮೋದಿ ಸಲ್ಲಿಸಿದರು. ಲಾಲ್ಕೃಷ್ಣ ಅಡ್ವಾಣಿ ಮತ್ತು ಮುರಳಿಮನೋಹರ ಜೋಷಿ ಅವರ ಕಾಲಿಗೆ ಮೋದಿ ನಮಸ್ಕರಿಸಿದರು.
ಹೊಸ ಸಂಸದರಿಗೆ ಮೋದಿ ಅಭಿನಂದನೆ
ಎಲ್ಲ ಸಂಸದರಿಗೆ ಶುಭಾಶಯ ಹೇಳಿದ ಮೋದಿ ಅವರು, ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರಿಗೆ ಅಭಿನಂದನೆಗಳನ್ನು ಹೇಳಿದರು. ಭಾರತವು ಇಂದು ವಿಜಯೋತ್ಸವ ಆಚರಿಸುತ್ತಿದೆ. ವಿದೇಶದಲ್ಲಿರುವ ಭಾರತದ ಪ್ರೇಮಿಗಳು ಸಹ ವಿಜಯೋತ್ಸವ ಆಚರಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.
'ಭಾರತದ ಮತದಾರ ಅಧಿಕಾರ ಲಾಲಸೆ ಸಹಿಸುವುದಿಲ್ಲ'
ಈ ಪ್ರಚಂಡ ವಿಜಯ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಭಾರತದ ಪ್ರಜಾಪ್ರಭುತ್ವವನ್ನು ನಮಗೆ ಅರ್ಥ ಮಾಡಿಕೊಳ್ಳಬೇಕಿದೆ. ಇದರ ವಿವೇಕವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಯಾವ ಮಾನದಂಡವೂ ಅದನ್ನು ಅಳೆಯಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ನಮ್ಮ ಪ್ರಜಾಪ್ರಭುತ್ವ ಹೆಚ್ಚು ಪ್ರೌಢವಾಗುತ್ತಿದೆ. ಅದನ್ನು ಇನ್ನಷ್ಟೂ ಗಟ್ಟಿಗೊಳಿಸಬೇಕಿದೆ. ಅಧಿಕಾರದ ಲಾಲಸೆಯನ್ನು ಭಾರತದ ಮತದಾರರು ಸ್ವೀಕಾರ ಮಾಡುವುದಿಲ್ಲ ಎಂದು ಮೋದಿ ಹೇಳಿದರು.
'ಅಧಿಕಾರದಲ್ಲಿದ್ದರೂ ಅದರ ಲಾಲಸೆಯಿಂದ ದೂರ ಉಳಿಯಿರಿ'
ಅಧಿಕಾರದಲ್ಲಿದ್ದರೂ ಸಹ ಅಧಿಕಾರ ಲಾಲಸೆಯಿಂದ ನಾವು ದೂರ ಉಳಿಯಬೇಕಿದೆ. ಜನಸೇವೆಯನ್ನು ನಾವು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೆ ಅಧಿಕಾರ ಲಾಲಸೆಯಿಂದ ನಾವು ದೂರ ಉಳಿಯುತ್ತೇವೆ ಎಂದು ತಮ್ಮ ಸಂಸದರಿಗೆ ಮೋದಿ ಹೇಳಿದರು. ಈ ಸೇವಾ ಭಾವವೇ ರಾಷ್ಟ್ರದ ಅಭಿವೃದ್ಧಿಗೆ ಬೇಕಾಗಿದೆ. ಅದಕ್ಕಿಂತಲೂ ಪ್ರಮುಖ ಮಾರ್ಗದರ್ಶನ ಮತ್ತೊಂದು ಇಲ್ಲ ಎಂದು ಮೋದಿ ಹೇಳಿದರು.