NDA ಮೈತ್ರಿಕೂಟದ ಬಗ್ಗೆ So 'SAD' ಎಂದ ಸುಖ್ಬೀರ್ ಬಾದಲ್!
ನವದೆಹಲಿ, ಸಪ್ಟೆಂಬರ್.28: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) ಅನ್ನುವುದು ಕೇವಲ ಹೆಸರಿಗೆ ಮಾತ್ರವಷ್ಟೇ ಸೀಮಿತವಾಗಿದೆ ಎಂದು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಬಾದಲ್ ದೂಷಿಸಿದ್ದಾರೆ.
ಕೃಷಿ ಸಂಬಂಧಿತ ಕಾಯ್ದೆ ಜಾರಿಗೊಳಿಸುವುದಕ್ಕೂ ಮೊದಲು ಎನ್ ಡಿಎ ಮೈತ್ರಿಕೂಟದಲ್ಲೇ ಗುರುತಿಸಿಕೊಂಡಿದ್ದ ಯಾವ ಪಕ್ಷಗಳ ಜೊತೆಗೂ ಚರ್ಚೆ ನಡೆಸಿರಲಿಲ್ಲ. ಎನ್ ಡಿಎ ಒಕ್ಕೂಟವು ಮೊದಲಿನ ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ ಎಂದು ಬಾದಲ್ ಕಿಡಿ ಕಾರಿದ್ದಾರೆ.
ರೈತರನ್ನು ಕೆರಳಿಸಿದ ಕೃಷಿ ಮಸೂದೆ ಮತ್ತು ರಾಜ್ಯಗಳ ವಿರೋಧದ ವಿವರ
ಕಳೆದ 7, 8, 10 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಈಚೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್ನುವುದು ಕೇವಲ ಹೆಸರಾಗಿ ಉಳಿದುಕೊಂಡಿದೆ. ಎನ್ ಡಿಎನಲ್ಲಿ ಮೊದಲಿನಂತೆ ಏನೂ ಉಳಿದಿಲ್ಲ. ಯಾವುದೇ ಚರ್ಚೆಯಿಲ್ಲ, ಯಾವುದೇ ಯೋಜನೆಯಿಲ್ಲ, ಯಾವುದೇ ಸಭೆಗಳಿಲ್ಲ ಎಂದಿದ್ದಾರೆ.
ಅಟಲ್ ಜೀ ಕಾಲದಲ್ಲಿನ ಬಾಂಧವ್ಯ ಉಳಿದಿಲ್ಲ
ಇತ್ತೀಚಿನ 10 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಿದ ಹಲವು ಕಾಯ್ದೆಗಳು ಮತ್ತೆ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ನಮ್ಮೊಂದಿಗೆ ಚರ್ಚೆ ನಡೆಸಿದ್ದೇ ನೆನಪಿಲ್ಲ. ಮಿತ್ರಪಕ್ಷಗಳು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿರಬಾರದು. ಇದಕ್ಕೂ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಮಿತ್ರಪಕ್ಷಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂದು ಸ್ಮರಿಸಿಕೊಂಡರು. ನಮ್ಮ ತಂದೆ ಕಾಲದಲ್ಲಿ ಶಿರೋಮಣಿ ಅಕಾಲ ದಳವು ಎನ್ ಡಿಎ ಮೈತ್ರಿಕೂಟದ ಜೊತೆಗೆ ಸೇರಿಕೊಂಡಿದ್ದೆವು. ಆದರೆ ಒಕ್ಕೂಟದಲ್ಲಿ ಅಂದಿನ ಚಿತ್ರಣವೇ ಬೇರೆ, ಇಂದಿನ ಚಿತ್ರಣವೇ ಬೇರೆಯಾಗಿದೆ ಎಂದು ಬಾದಲ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದೆವು
ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿ ದಳವು ಸದಾ ಬಿಜೆಪಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದೆವು. "ನನ್ನ ತಂದೆ ಪ್ರಕಾಶ್ ಸಿಂಗ್ ಬಾದಲ್ ಮಾಡಿದ ರೀತಿಯಲ್ಲೇ ಮೈತ್ರಿ ಮಾಡಿಕೊಳ್ಳಬೇಕು. ಪ್ರತಿ ನಿರ್ಧಾರಕ್ಕೂ ಅವರು ಬಿಜೆಪಿಯನ್ನು ಕರೆಯುತ್ತಿದ್ದರು. ಯಾವುದೇ ಮನವಿ ಪತ್ರ ಸಲ್ಲಿಸಲು ನಾವು ರಾಜ್ಯಪಾಲರ ಬಳಿಗೆ ಹೋದಾಗಲೆಲ್ಲಾ ಬಿಜೆಪಿಯನ್ನು ನಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದೆವು. ರಾಜ್ಯದಲ್ಲಿ ನಾವು ಬಹುಸಂಖ್ಯಾತ ಪಾಲುದಾರರಾಗಿದ್ದು, ಅಲ್ಪಸಂಖ್ಯಾತ ಪಾಲುದಾರ ಬಿಜೆಪಿಗರನ್ನು ನಾವು ಎಲ್ಲ ಸಂದರ್ಭಗಳಲ್ಲೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದವೆವು," ಎಂದು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಬಾದಲ್ ತಿಳಿಸಿದ್ದಾರೆ.
ಬಿಜೆಪಿಗೆ ಮೈತ್ರಿ ಉಳಿಸಿಕೊಳ್ಳುವ ಬದ್ಧತೆ ಇರಲಿಲ್ಲ
"ಕೃಷಿ ಸಂಬಂಧಿತ ಕಾಯ್ದೆ ಜಾರಿಗೊಳಿಸುವಲ್ಲಿ ಬಿಜೆಪಿ ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಂಡಿದೆ. ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕೇಂದ್ರ ಸಚಿವೆ ಸ್ಥಾನಕ್ಕೆ ಹರ್ ಸ್ಮಿರತ್ ಬಾದಲ್ ರಾಜೀನಾಮೆ ಸಲ್ಲಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದಿಂದ ಹೊರ ಬಂದಾಗಲೂ, ಬಿಜೆಪಿಯು ಮೈತ್ರಿ ಉಳಿಸಿಕೊಳ್ಳುವ ಬದ್ಧತೆ ತೋರಿಸಲಿಲ್ಲ. ಆ ಬಳಿಕವೇ ಎನ್ ಡಿಎ ಮೈತ್ರಿಕೂಟದಿಂದ ಹೊರ ಬರುವುದಕ್ಕೆ ಶಿರೋಮಣಿ ಅಕಾಲಿ ದಳವು ತೀರ್ಮಾನಿಸಿತು. ಪಕ್ಷದ ಸಭೆಯ ಬಳಿಕ ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡು ಮೈತ್ರಿಕೂಟವನ್ನು ಬಿಡಲಾಗಿದೆ" ಎಂದು ಬಾದಲ್ ತಿಳಿಸಿದ್ದಾರೆ.
"ಒಂದು ಮಾರುಕಟ್ಟೆ ಪದ್ಧತಿ ಜಾರಿ ಒಳ್ಳೆಯದ್ದೇ"
ರಾಜ್ಯದಲ್ಲಿ ಪ್ರಧಾನ ಮಾರುಕಟ್ಟೆ ಘೋಷಿಸುವ ಕ್ರಮವನ್ನು ನಾವೂ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ನಾವಿರುವುದೇ ನಮ್ಮ ರೈತರಿಗಾಗಿ. ರೈತರ ವಿಚಾರದಲ್ಲಿ ಆಟ ಆಡುವುದರಲ್ಲಿ ನಮಗೆ ಆಸಕ್ತಿಯಿಲ್ಲ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರವು ರೈತರಿಗಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ, ಮುಂದೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ವೇಳೆ ರೈತರಿಗೆ ಅಗತ್ಯವಾಗಿ ನೆರವಾಗುವಂತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸುಖ್ಬೀರ್ ಬಾದಲ್ ತಿಳಿಸಿದ್ದಾರೆ.