ದೆಹಲಿಯಲ್ಲಿ AAP-ಕಾಂಗ್ರೆಸ್ ದೋಸ್ತಿಗೆ ಪವಾರ್ ಮಧ್ಯಸ್ಥಿಕೆ!
ನವದೆಹಲಿ, ಮಾರ್ಚ್ 19: ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಮೈತ್ರಿಗೆ ಸಂಬಂಧಿಸಿದಂತೆ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯಲು ಎನ್ ಸಿಪಿ ನಾಯಕ ಶರದ್ ಪವಾರ್ ಮುಂದಾಗಿದ್ದಾರೆ.
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಮಧ್ಯಸ್ಥಿಕೆ ವಹಿಸಲು ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಅವರಲ್ಲಿ ಖುದ್ದು ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳೇ ಮನವಿ ಮಾಡಿವೆ.
ಎಎಪಿ ಜೊತೆ ಮೈತ್ರಿಗೆ ದೆಹಲಿ ಕಾಂಗ್ರೆಸ್ ಘಟಕದ ಕೆಲವು ಹಿರಿಯರೇ ಸಿದ್ಧರಿಲ್ಲದ ಕಾರಣ ಶರದ್ ಪವಾರ್ ಅವರು ಮಧ್ಯಸ್ಥಿಕೆ ವಹಿಸಿ ಬಂಡಾಯ ಶಮನ ಮಾಡುವಂತೆ ಉಭಯ ಪಕ್ಷಗಳೂ ಮನವಿ ಮಾಡಿವೆ.
ಎಎಪಿ ಸಹವಾಸ ಬೇಡ... ರಾಹುಲ್ ಗಾಂಧಿಗೆ ಶೀಲಾ ದೀಕ್ಷಿತ್ ಪತ್ರ
ಯಾವುದೇ ಕಾರಣಕ್ಕೂ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಏರ್ ಸ್ಟ್ರೈಕ್ ನಂತರ ಚಿತ್ರ ಬದಲು
ಫೆಬ್ರವರಿ 14 ರಂದು ನಡೆದ ಸಿಆರ್ ಪಿಎಫ್ ಯೋಧರ ಮೇಲಿನ ದಾಳಿ ಮತ್ತು ನಂತರದ ಏರ್ ಸ್ಟ್ರೈಕ್, ಅಭಿನಂದನ್ ವರ್ಧಮಾನ್ ಪ್ರಕರಣಗಳ ನಂತರ ಕಾಂಗ್ರೆಸ್ ನ ಕಾರ್ಯತಂತ್ರದಲ್ಲಿ ಬದಲಾವಣೆಯಾಗಿದೆ. ಅದುವರೆಗೂ ಸ್ವತಂತ್ರವಾಗಿಯೇ ಸ್ಪರ್ಧಿಸಿ ದೆಹಲಿಯಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್, ಎಎಪಿಯೇ ಮೈತ್ರಿಯ ಬೇಡಿಕೆ ಇಟ್ಟಿದ್ದರೂ ಒಲ್ಲೆ ಎಂದಿತ್ತು.
ದೆಹಲಿಯಲ್ಲಿ ಮತ್ತೆ ಚಿಗುರಿದ ಕನಸು! 'ಪೊರಕೆ' ಹಿಡಿಯೋಕೆ 'ಕೈ' ರೆಡಿ?
ಬಿಜೆಪಿ ಪರ ವಾತಾವರಣ
ರಾಜಧಾನಿಯಲ್ಲಿ ಏರ್ ಸ್ಟ್ರೈಕ್ ನಂತರ ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿರುವುದರಿಂದ ಆತಂಕಗೊಂಡ ಕಾಂಗ್ರೆಸ್ ಇದೀಗ ಮೈತ್ರಿಗೆ ಮುಂದಾಗಿದೆ. ಅದೂ ಅಲ್ಲದೆ, 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯ ಏಳಕ್ಕೆ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿತ್ತು. ಎಎಪಿ ಮತ್ತು ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದರೆ ಮತಗಳು ಒಡೆದು, ಅದರ ಲಾಭವನ್ನು ಪಡೆಯುವವುದು ಬಿಜೆಪಿ ಎಂಬುದು ಕಾಂಗ್ರೆಸ್ಸಿಗೆ ಈಗ ಅರ್ಥವಾದಂತಿದೆ.
ಬಂಡಾಯಕ್ಕೆ ಕಾರಣವಾಗಬಹುದು
ದೆಹಲಿಯಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿ ಮಾಡಿಕೊಳ್ಳುತ್ತಿರುವುದು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೇರಿದಂತೆ ಹಲವು ನಾಯಕರಿಗೆ ಇಷ್ಟವಿಲ್ಲ. ಅಕಸ್ಮಾತ್ ಹಿರಿಯ ನಾಯಕರ ಮನವಿಯನ್ನೂ ಮೀರಿ ಕಾಂಗ್ರೆಸ್ ಮೈತ್ರಿಗೆ ಮುಂದಾದರೆ ಬಂಡಾಯದ ಬಾವುಟ ಹಾರಬಹುದು. ಅದೂ ಅಲ್ಲದೆ ಇತ್ತೀಚೆಗಷ್ಟೇ ಶೀಲಾ ದೀಕ್ಷಿತ್ ಅವರು, 'ಭಯೋತ್ಪಾದನೆಯನ್ನು ಹತ್ತಿಕ್ಕುವ ವಿಷಯದಲ್ಲಿ ಮನಮೋಹನ್ ಸಿಂಗ್ ಅವರಿಗಿಂತ ಮೋದಿಯೇ ಹೆಚ್ಚು ಶಕ್ತಿಶಾಲಿ' ಎಂಬ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಎಪಿ ಅಭ್ಯರ್ಥಿ ಘೋಷಣೆ
ಎಎಪಿ ಈಗಾಗಲೇ ದೆಹಲಿಯ ಏಳರಲ್ಲಿ ಆರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಅಕಸ್ಮಾತ್ ಈಗ ಕಾಂಗರೆಸ್ ಜೊತೆ ಮೈತ್ರಿ ಮಾಡಿಕೊಂಡರೆ, ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಪಡೆಯಬೇಕಾಗಬಹುದು. ಇದರಿಂದ ಎಎಪಿಯಲ್ಲೂ ಅಸಮಾಧಾನ ಹುಟ್ಟಿಕೊಂಡರೆ ಅಚ್ಚರಿಯಿಲ್ಲ.