ನವಜೋತ್ ಸಿಧು ದೆಹಲಿ ಅಧ್ಯಕ್ಷ: ವದಂತಿ ತಳ್ಳಿಹಾಕಿದ ಕಾಂಗ್ರೆಸ್
ನವದೆಹಲಿ, ಆಗಸ್ಟ್ 01: ದೆಹಲಿಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ನಿಧನಾನಂತರ ತೆರವಾಗಿರುವ ಪಕ್ಷಾಧ್ಯಕ್ಷ ಹುದ್ದೆಗೆ ನವಜೋತ್ ಸಿಂಗ್ ಸಿಧು ಅವರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ವದಂತಿಯನ್ನು ಕಾಂಗ್ರೆಸ್ ತಳ್ಳಿಹಾಕಿದೆ.
"ಹಲವು ವಿವಾದಗಳಿಂದಲೇ ಹೆಸರಾಗಿರುವ ನವಜೋತ್ ಸಿಂಗ್ ಸಿಧು ಅವರನ್ನು ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಸಲಹೆಗಳು ಬರುತ್ತಿರುವುದು ಸತ್ಯ. ಆದರೆ ಈ ಬಗ್ಗೆ ಪಕ್ಷ ಇದುವರೆಗೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷರನ್ನು ಆರಿಸಿದ ನಂತರವೇ ದೆಹಲಿ ಘಟಕಕ್ಕೂ ಅಧ್ಯಕ್ಷರನ್ನು ಆರಿಸಲಾಗುತ್ತದೆ. ಅದಕ್ಕಿನ್ನೂ ಸಮಯವಿದೆ" ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ದಿಲ್ಲಿ ಗದ್ದುಗೆ ಏರಿದ್ದ ಕಪೂರ್ತಲದ ಕುವರಿ: ಶೀಲಾ ದೀಕ್ಷಿತ್ ಅಪರೂಪದ ವ್ಯಕ್ತಿಚಿತ್ರ
"ನವಜೋತ್ ಸಿಂಗ್ ಸಿಧು ಅವರನ್ನೇ ಪಕ್ಶಃದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಕುರಿತು ಇದುವರೆಗೂ ಪಕ್ಷದ ವರಿಷ್ಟರ್ಯಾರೂ ಚರ್ಚೆ ನಡೆಸಿಲ್ಲ" ಎಂದು ದೆಹಲಿ ಕಾಂಗ್ರೆಸ್ ಇನ್ ಚಾರ್ಜ್ ಪಿಸಿ ಚಾಕೋ ಹೇಳಿದ್ದಾರೆ.
ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿದ್ದ ನವಜೋತ್ ಸಿಂಗ್ ಸಿಧು ಅವರು ಆ ರಾಜ್ಯದ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಮಂತ್ರಿಸ್ಥಾನ ತ್ಯಜಿಸಿದ್ದರು. ಹಲವು ಸಂದರ್ಭದಗಳಲ್ಲಿ ಪಾಕ್ ಪರ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿದ್ದರು. ಇದೀಗ ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಅವರ ಹೆಸರು ಕೇಳಿಬರುತ್ತಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಪಕ್ಷದ ತೀರ್ಮಾನ ಹೊರಬೀಳಲಿದೆ.
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನ
ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರು ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷ ವಯಸ್ಸಿನ ದೀಕ್ಷಿತ್, ಜುಲೈ 20 ರಂದು ಹೃದಯಾಘಾತದಿಂದ ಮರಣ ಹೊಂದಿದ್ದರು. ಅವರ ಮರಣಾನಂತರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟ ನಡೆದಿದೆ.