ಇಂದು ರಾಷ್ಟ್ರೀಯ ಕ್ರೀಡಾ ದಿನ: ಧ್ಯಾನ್ ಚಂದ್ ಗೆ ಶುಭ ಕೋರಿದ ಟ್ವಿಟ್ಟಿಗರು
ನವದೆಹಲಿ, ಆಗಸ್ಟ್ 29: ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಗೆ ಹೊಸ ಭಾಷ್ಯ ಬರೆದ ಕೀರ್ತಿ ಮೆಜರ್ ಧ್ಯಾನ್ ಚಂದ್ ಗೆ ಸಲ್ಲುತ್ತದೆ. 1905 ಆಗಸ್ಟ್ 29 ರಂದು ಜನಿಸಿದ ಧ್ಯಾನ್ ಚಂದ್ ಭಾರತದ ಹಾಕಿ ಕ್ಷೇತ್ರದ ಅನಭಿಷಿಕ್ತ ದೊರೆಯಾಗಿ ಮೆರೆದವರು, ದಂತಕತೆಯಾದವರು. ಇಂದು ಅವರ ಜನ್ಮದಿನ.
ಭಾರತೀಯರು ಧ್ಯಾನ್ ಚಂದ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಈ ಮೂಲಕ ಹಾಕಿಯ ದಂತಕತೆಗೆ ಕೃತಜ್ಞತೆ ಅರ್ಪಿಸುತ್ತಾರೆ. ವಿವಿಧ ಕಡೆಗಳಲ್ಲಿ ಹಾಕಿ ಪಂದ್ಯಗಳನ್ನು ನಡೆಸಿ ಧ್ಯಾನ್ ಚಂದ್ ಅವರನ್ನು ಸ್ಮರಿಸುತ್ತಾರೆ.
ಖೇಲ್ ರತ್ನ, ಅರ್ಜುನ, ದ್ರೋಣ, ಧ್ಯಾನ್ ಚಂದ್ ಪ್ರಶಸ್ತಿ ಪ್ರಕಟ
ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಜನಿಸಿದ ಧ್ಯಾನ್ ಚಂದ್ ತಂದೆ ಸಮೇಶ್ವರ್ ಸಿಂಗ್, ತಾಯಿ ಶಾರದಾ ಸಿಂಗ್. ಚಿಕ್ಕಂದಿನಿಂದಲೂ ಹಾಕಿಯ ಹುಚ್ಚು ಹಿಡಿಸಿಕೊಂದಿದ್ದ ಧ್ಯಾನ್ ಚಂದ್ ಭಾರತೀಯ ಸೇನೆಗೆ ಸೇರಿಕೊಂಡಿದ್ದರು. ಅಲ್ಲೂ ಅವರ ಹಾಕಿ ಹವ್ಯಾಸ ತಡೆಯಿಲ್ಲದೆ ಸಾಗಿತ್ತು.
1928 ರಿಂದ 1936 ರವರೆಗಿನ ಮೂರು ಒಲಿಂಪಿಕ್ಸ್ ಪಂದ್ಯಗಳಲ್ಲಿ ಭಾರತಕ್ಕೆ ಸತತ ಮೂರು ಚಿನ್ನದ ಪದಕ ತಂದುಕೊಟ್ಟ ಕೀರ್ತಿ ಧ್ಯಾನ್ ಚಂದ್ ಅವರಿಗೆ ಸಲ್ಲುತ್ತದೆ. ತಮ್ಮ ಹಾಕಿ ಕೆರಿಯರ್(ಅಂತಾರಾಷ್ಟ್ರೀಯ) ನಲ್ಲಿ 400 ಕ್ಕೂ ಹೆಚ್ಚು ಗೋಲ್ ಹೊಡೆದು ಹಾಕಿ ಮಾಂತ್ರಿಕ ಎನ್ನಿಸಿದರು. ಅವರ ಈ ಸಾಧನೆಯನ್ನು ಮನಗಂಡು, 1956 ರಲ್ಲಿ ಅವರಿಗೆ ಭಾರತದ ಉನ್ನತ ನಾಗರಿಕ ಗೌರವವಾದ ಪದ್ಮ ಭೂಷಣ ನೀಡಿ ಗೌರವಿಸಲಾಯಿತು.
ಭಾರತೀಯ ರಾಷ್ಟ್ರೀಯ ಕ್ರೀಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟ ಕಾರಣಕ್ಕೆ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಈಗಾಗಲೇ NationalSportsDay ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಹಾಕಿ ಮಾಂತ್ರಿಕನನ್ನು ನೆನಪಿಸಿಕೊಂಡು, ಶುಭಕೋರಿದ್ದಾರೆ.
|
ನರೇಂದ್ರ ಮೋದಿ
ತಮ್ಮ ಕ್ರೀಡಾ ಕೌಶಸಲ್ಯದ ಮೂಲಕ ಅದ್ಭುತಗಳನ್ನೇ ಸೃಷ್ಟಿಸಿ, ಭಾರತೀಯ ಹಾಕಿ ಲೋಕಕ್ಕೆ ಗೌರವ ತಂದುಕೊಟ್ಟ ಅನುಕರಣೀಯ ವ್ಯಕ್ತಿ ಮೇಜರ್ ಧ್ಯಾನ್ ಚಂದ್ ಅವರಿಗೆ ಅವರ ಜನ್ಮ ದಿನದಂದು ವಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
|
ಮಹಾನ್ ಹಾಕಿ ಆಟಗಾರ
ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು, ಭಾರತ ಕಂಡ ಮಹಾನ್ ಹಾಕಿ ಆಟಗಾರನನ್ನು ನೆನಪಿಸಿಕೊಳ್ಳೋಣ ಎಂದು ಕೇಂದ್ರ ಸಚಿವ ಅನಂತಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
|
ಕ್ರೀಡಾ ದಂತಕತೆ
ಒಬ್ಬ ಕ್ರೀಡಾ ದಂತಕತೆಯಾಗಿ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟ ಮೇಜರ್ ಧ್ಯಾನ್ ಚಂದ್ ಅವರಜು ಸದಾ ನೆನಪಿನಲ್ಲುಳಿಯುತ್ತಾರೆ ಎಂದು ಸಂಜಿಬ್ ಘೋಷ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಮೊಹಮ್ಮದ್ ಕೈಫ್
ಯಾವತ್ತಿಗೂ ಹಾಕಿ ಕ್ಷೇತ್ರದ ಮಹಾನ್ ಆಟಗಾರನಾಗಿ ಉಳಿದ ಧ್ಯಾನ್ ಚಂದ್ ಅವರಿಗೆ ಅವರ ಜನ್ಮ ದಿನದಂದು ಶುಭಹಾರೈಕೆಗಳು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.
|
ಅವರ ಕ್ರೀಡಾಸ್ಫೂರ್ತಿ ಮಾದರಿಯಾಗಲಿ
ತಮ್ಮ ಕ್ರೀಡಾಸ್ಫೂರ್ತಿಯಿಂದಾಗಿ ಸದಾ ನೆನಪಿನಲ್ಲುಳಿಯುವ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಕ್ರೀಡಾ ದಿನವನ್ನಾಗಿ ಆಚರಿಸುತ್ತಿದ್ದೇವೆ. ಅವರ ಕ್ರೀಡಾಸ್ಫೂರ್ತಿ, ಉತ್ಸಾಹವನ್ನೂ ನಾವೂ ಆವಾಹಿಸಿಕೊಂಡು, ಭಾರತ ಪ್ರಕಾಶಮಾನವಾಗುವಂತೆ ಮಾಡೋಣ ಎಂದು ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಟ್ವೀಟ್ ಮಾಡಿದ್ದಾರೆ.