ವಿಪತ್ತಿನಲ್ಲಿದ್ದ ಆರ್ಥಿಕತೆಯನ್ನು ಸರ್ಕಾರ ರಕ್ಷಿಸಿದೆ: ಪ್ರಧಾನಿ ಮೋದಿ
Recommended Video
ನವದೆಹಲಿ, ಡಿಸೆಂಬರ್ 21: ಕಳೆದ ಐದಾರು ವರ್ಷಗಳ ಹಿಂದೆ ದುರಂತದ ಹಾದಿಯಲ್ಲಿದ್ದ ಭಾರತದ ಆರ್ಥಿಕತೆಯನ್ನು ಕೇಂದ್ರ ಸರ್ಕಾರ ರಕ್ಷಿಸಿದೆ. ಆರ್ಥಿಕತೆಯನ್ನು ಸ್ಥಿರಗೊಳಿಸಿರುವುದು ಮಾತ್ರವಲ್ಲದೆ, ಅದನ್ನು ಶಿಸ್ತುಬದ್ಧಗೊಳಿಸಲು ಕೂಡ ಸರ್ಕಾರ ಪ್ರಯತ್ನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
'ಅಸ್ಸೋಚಾಂ 100 ವರ್ಷ'ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, 'ಐದು-ಆರು ವರ್ಷಗಳ ಹಿಂದೆ ನಮ್ಮ ಆರ್ಥಿಕತೆ ವಿಪತ್ತಿನತ್ತ ಸಾಗಿತ್ತು. ನಮ್ಮ ಸರ್ಕಾರ ಅದನ್ನು ಸ್ಥಿರಗೊಳಿಸಿದ್ದು ಮಾತ್ರವಲ್ಲದೆ, ಅದಕ್ಕೆ ಶಿಸ್ತು ನೀಡಲು ಸಹ ಪ್ರಯತ್ನಿಸಿದೆ. ಕೈಗಾರಿಕಾ ವಲಯದ ಹಲವು ದಶಕಗಳಷ್ಟು ಹಳೆಯದಾದ ಬೇಡಿಕೆಗಳನ್ನು ಈಡೇರಿಸಲು ನಾವು ಗಮನ ಹರಿಸಿದ್ದೇವೆ' ಎಂದು ತಿಳಿಸಿದರು.
'ಇಂದು ನಾವು ಕೇಂದ್ರದಲ್ಲಿ ರೈತರು, ಕಾರ್ಮಿಕರು ಮತ್ತು ಕೈಗಾರಿಕೆಗಳ ಅಹವಾಲುಗಳನ್ನು ಕೇಳುವ ಸರ್ಕಾರವನ್ನು ಹೊಂದಿದ್ದೇವೆ. ಭಾರತದ ಆರ್ಥಿಕತೆಯನ್ನು ಆಧುನೀಕರಣಗೊಳಿಸಲು ಮತ್ತು ಅದಕ್ಕೆ ಸ್ಪಷ್ಟ ರೂಪ ನೀಡಲು ನಮ್ಮ ಸರ್ಕಾರ ಬಯಸಿದೆ' ಎಂದು ಹೇಳಿದರು.
ಸರ್ಕಾರದ ಪ್ರಯತ್ನದ ಫಲವಾಗಿ ಇಂದು 13 ಬ್ಯಾಂಕ್ಗಳು ಪುನಃ ಲಾಭ ಗಳಿಸಲು ಆರಂಭಿಸಿವೆ. ಆರು ಬ್ಯಾಂಕ್ಗಳು ಈಗ ಪಿಸಿಎದಿಂದ (ಕ್ಷಿಪ್ರ ದೋಷ ಪರಿಹಾರ ಕ್ರಮ) ಹೊರಗೆ ಬಂದಿವೆ. ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಸಹ ನಾವು ಚುರುಕುಗೊಳಿಸಿದ್ದೇವೆ. ಇಂದು ಬ್ಯಾಂಕುಗಳು ದೇಶದಾದ್ಯಂತ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುತ್ತಿವೆ ಮತ್ತು ತಮಗೆ ಜಾಗತಿಕ ಮನ್ನಣೆ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆದಿದೆ ಎಂದರು.
ಆಟೋಮೊಬೈಲ್ ಮಾರಾಟ ಕುಸಿದಿದ್ದರೆ ಟ್ರಾಫಿಕ್ ಜಾಮ್ ಆಗೋದು ಹೇಗೆ?: ಬಿಜೆಪಿ ಸಂಸದನ ತರ್ಕ
'ನಾನು $5 ಟ್ರಿಲಿಯನ್ ಆರ್ಥಿಕತೆ ಗುರಿ ಬಗ್ಗೆ ಮಾತನಾಡಿದಾಗ ಅದರ ವಿರುದ್ಧ ನಕಾರಾತ್ಮಕ ಪ್ರಚಾರ ಮಾಡುತ್ತಾರೆ ಎಂಬುದು ತಿಳಿದಿತ್ತು. $5 ಟ್ರಿಲಿಯನ್ ಆರ್ಥಿಕತೆಯು ನಿಂತ ಜಾಗದಲ್ಲಿಯೇ ಆಗಿಬಿಡುವುದಿಲ್ಲ. ಅದು ಐದು ವರ್ಷಗಳಿಂದಲೂ ಚರ್ಚೆಯಲ್ಲಿದೆ. 2014ರಲ್ಲಿ ನಾನು ಭಾರತವನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡುವ ಗುರಿ ಹೊಂದಿದ್ದೆ. ಅದನ್ನು ಸಾಧಿಸಲು ದೇಶವು ಪ್ರಯತ್ನಿಸಿದೆ' ಎಂದು ಹೇಳಿದರು.
ನಿರ್ಮಲಾ ಸೀತಾರಾಮನ್ಗೆ ಯಾವ ಅರ್ಥಶಾಸ್ತ್ರವೂ ಗೊತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ
ಸತತ ಏಳು ತ್ರೈಮಾಸಿಕ ಅವಧಿಗಳಲ್ಲಿ ಭಾರತದ ಜಿಡಿಪಿ ಕುಸಿತ ಕಂಡಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇ 4.5ಕ್ಕೆ ಕುಸಿದಿದೆ. ಉದ್ಯಮಗಳಲ್ಲಿನ ನಷ್ಟ, ನಿರುದ್ಯೋಗದ ಸಮಸ್ಯೆಗಳು ವ್ಯಾಪಕವಾಗಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿದ್ದಾರೆ.