ವಿಪತ್ತು ನಿರ್ವಹಣಾ ಯೋಜನೆ ಮೋದಿಯಿಂದ ಬಿಡುಗಡೆ
ನವದೆಹಲಿ, ಜೂನ್ 01 : ನೈಸರ್ಗಿಕ ಅವಘಡ ಸಂಭವಿಸಿದಾಗ ಆಗುವ ಸಾವು, ನೋವು ಕಡಿಮೆ ಮಾಡುವ, ಮತ್ತು ಆಸ್ತಿಪಾಸ್ತಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಮೊಟ್ಟಮೋದಲ ಬಾರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಿಡುಗಡೆ ಮಾಡಿದರು.
ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2015ರಲ್ಲಿ ಅನುಮೋದಿಸಿರುವ 15 ವರ್ಷಗಳ ಒಪ್ಪಂದ 'ಸೆಂಡೈ ಫ್ರೇಮ್ವರ್ಕ್'ನಂತೆ ವಿಕೋಪ ನಿರ್ವಹಣೆಯ ಎಲ್ಲ ಆಯಾಮಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ಈ ಯೋಜನೆಯಲ್ಲಿ ತಾಲೂಕು ಪಂಚಾಯತ್ ಸೇರಿದಂತೆ ಸರಕಾರಿ ಸಂಸ್ಥೆಗಳು ನಿರ್ವಹಿಸಬೇಕಾದ ಪಾತ್ರ ಮತ್ತು ಜವಾಬ್ದಾರಿಯನ್ನು ಕೂಲಂಕಷವಾಗಿ ವಿವರಿಸಲಾಗಿದೆ. [ವರವಾಗಿ ಬಂದ ಮಳೆರಾಯ ಯಮನಾಗಿ ಕಂಡ!]
ದುರ್ಘಟನೆಯ ಮುನ್ಸೂಚನೆ, ಮಾಹಿತಿ ರವಾನೆ, ವೈದ್ಯಕೀಯ ಕಾಳಜಿ, ಇಂಧನ ಪೂರೈಕೆ, ವಾಹನ ಸಾಗಾಟ, ಸಂಕಷ್ಟದಲ್ಲಿರುವವರನ್ನು ಹುಡುಕುವ, ರಕ್ಷಿಸುವ, ಜನರನ್ನು ಸ್ಥಳಾಂತರಿಸುವ ಎಲ್ಲ ಪ್ರಮುಖ ಕಾರ್ಯಾಚರಣೆಗಳು ಯಾವ ರೀತಿ ಇರಬೇಕು ಎಂಬ ಕುರಿತು ಈ ವಿಪತ್ತು ನಿರ್ವಹಣೆ ಯೋಜನೆಯಲ್ಲಿ ತಿಳಿಸಲಾಗಿದೆ.
ವಿಕೋಪ ಎದುರಾದಾಗ ಗೊಂದಲಕ್ಕೊಳಗಾಗದಂತೆ ಜನರು ಯಾವ ರೀತಿ ಅದನ್ನು ಎದುರಿಸಬೇಕು, ಮಾಹಿತಿ ಯಾವ ರೀತಿ ರವಾನಿಸಬೇಕು, ವಿಪತ್ತಿನ ಬಗ್ಗೆ ಜನರಲ್ಲಿ ಯಾವ ರೀತಿ ಜಾಗೃತಿ ಮೂಡಿಸಬೇಕು ಮತ್ತು ಸಮುದಾಯ ಹೇಗೆ ಇದರಲ್ಲಿ ಭಾಗವಹಿಸಬೇಕು ಎಂಬ ಕುರಿತು ಕೂಡ ಇದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. [ಆಪತ್ತು ನಿರ್ವಹಣೆ : ನಮ್ಮಲ್ಲೆಷ್ಟಿದೆ ಜಾಗೃತಿ?]