ವಾಜಪೇಯಿ ಭಾವಚಿತ್ರದ 100 ರೂ. ನಾಣ್ಯ ಬಿಡುಗಡೆ ಮಾಡಿದ ಮೋದಿ
ನವದೆಹಲಿ, ಡಿಸೆಂಬರ್ 13: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರವಿರುವ 100 ರೂ. ಮುಖಬೆಲೆಯ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮದಿನೋತ್ಸವದ ಮುನ್ನಾದಿನವಾದ ಸೋಮವಾರ ಅವರ ಸ್ಮರಣಾರ್ಥ 100 ರೂ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ.
ವಾಜಪೇಯಿ ಅವರ ದೀರ್ಘಕಾಲದ ನಿಕಟವರ್ತಿ, ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಾಜಪೇಯಿ ಭಾವಚಿತ್ರದೊಂದಿಗೆ ಬರಲಿದೆ 100 ರೂ. ನಾಣ್ಯ
ವಾಜಪೇಯಿ ಅವರ 94ನೇ ಜನ್ಮದಿನವಾದ ಡಿ. 25ರ ಮಂಗಳವಾರ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ವಾಜಪೇಯಿ ಅವರು ತೋರಿದ ದಾರಿ ಮತ್ತು ಅವರ ಸಿದ್ಧಾಂತಗಳಿಗೆ ಬದ್ಧನಾಗಿರುವುದನ್ನು ಪುನರುಚ್ಚರಿಸಲಿರುವುದಾಗಿ ಮೋದಿ ತಿಳಿಸಿದರು.
ಪ್ರಜಾಪ್ರಭುತ್ವವೇ 'ಸುಪ್ರೀಂ'
'ಪ್ರಜಾಪ್ರಭುತ್ವವೇ ಪ್ರಭುವಾಗಿರಬೇಕು ಎಂದು ಅಟಲ್ ಜಿ ಬಯಸಿದ್ದರು. ಅವರು ಜನಸಂಘ ಕಟ್ಟಿದರು. ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಸನ್ನಿವೇಶ ಬಂದಾಗ ಅವರು ಜನತಾ ಪಾರ್ಟಿ ಸೇರಿಕೊಂಡರು. ಅಧಿಕಾರದಲ್ಲಿ ಇರುವುದು ಮತ್ತು ಸಿದ್ಧಾಂತದೊಂದಿಗೆ ರಾಜಿಯಾಗುವ ನಡುವಿನ ಆಯ್ಕೆ ಬಂದಾಗ ಜನತಾ ಪಾರ್ಟಿ ತೊರೆದು ಬಿಜೆಪಿ ಸ್ಥಾಪಿಸಿದರು' ಎಂದು ಪ್ರಧಾನಿ ಸ್ಮರಿಸಿದರು.
ಹಿಮಾಲಯದ ತುದಿಯೊಂದಕ್ಕೆ ಅಟಲ್ ಜೀ ಹೆಸರು?!
Array |
ಅಧಿಕಾರ ಆಮ್ಲಜನಕದಂತೆ
'ಅಧಿಕಾರ ಎನ್ನುವುದು ಆಮ್ಲಜನಕವಿದ್ದಂತೆ. ಅದಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ರಾಷ್ಟ್ರದ ಹಿತಾಸಕ್ತಿಗಾಗಿ ಪ್ರಶ್ನೆಗಳನ್ನು ಎತ್ತುತ್ತಾ ಅವರು ತಮ್ಮ ರಾಜಕೀಯ ಬದುಕಿನ ಸುದೀರ್ಘ ಕಾಲವನ್ನು ವಿರೋಧ ಪಕ್ಷದ ಬೆಂಚಿನಲ್ಲಿ ಕಳೆದರು. ಬಳಿಕವೂ ಅವರು ಪಕ್ಷದ ಸಿದ್ಧಾಂತಗಳೊಂದಿಗೆ ರಾಜಿಯಾಗಿರಲಿಲ್ಲ' ಎಂದರು.
'ಈ ಪಕ್ಷವು ಅಟಲ್ಜಿ ಅವರು ಒಂದೊಂದೇ ಇಟ್ಟಿಗೆ ಪೇರಿಸಿ ಸ್ಥಾಪಿಸಿರುವುದು. ಈಗ ಅದು ಅತಿ ದೊಡ್ಡ ರಾಜಕೀಯ ಪಕ್ಷಗಳಲ್ಲಿ ಒಂದಾಗಿ ಬೆಳೆದಿದೆ. ಅವರಲ್ಲಿನ ಭಾಷಣಕಾರನಿಗೆ ಸರಿಸಾಟಿಯಿಲ್ಲ. ಅವರು ಮಾತನಾಡಿದಾಗ ರಾಷ್ಟ್ರವೇ ಮಾತನಾಡುತ್ತಿತ್ತು. ಅವರು ಮಾತನಾಡಿದಾಗ ಇಡೀ ದೇಶ ಕೇಳುತ್ತಿತ್ತು' ಎಂದು ಹೇಳಿದರು.
ದೆಹಲಿಯ ರಾಮಲೀಲಾ ಮೈದಾನಕ್ಕೆ ಅಟಲ್ ಜೀ ಹೆಸರು?
Array |
ಇಂದಿಗೂ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ
'ವಾಜಪೇಯಿ ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬುದನ್ನು ಮನಸ್ಸು ಇಂದಿಗೂ ಒಪ್ಪಿಕೊಳ್ಳುತ್ತಿಲ್ಲ. ಅವರು ಅನಾರೋಗ್ಯದಿಂದಾಗಿ ಸಾರ್ವಜನಿಕರ ನಂಟಿನಿಂದ ದಶಕದಿಂದ ದೂರವಿದ್ದರೂ ಅವರ ಕೊನೆಯ ದಿನ ಜನಸ್ತೋಮ ನೀಡಿದ ವಿದಾಯವು ಅವರು ಜನರ ಮನಸಿನಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಮೂಡಿಸಿದ್ದರು ಎಂಬುದಕ್ಕೆ ಸಾಕ್ಷಿ' ಎಂದರು.
ಛತ್ತೀಸ್ ಗಢದ ಹೊಸ ರಾಜಧಾನಿಯ ಹೆಸರು ಅಟಲ್ ನಗರ!
35 ಗ್ರಾಂ ತೂಕದ ನಾಣ್ಯ
100 ರೂ. ಮುಖಬೆಲೆಯ 35 ಗ್ರಾಂ ತೂಕದ ನಾಣ್ಯದ ಇನ್ನೊಂದು ಬದಿಯಲ್ಲಿ ವಾಜಪೇಯಿ ಅವರ ಭಾವಚಿತ್ರ ಹೊಂದಿದೆ. ದೇವನಾಗರಿ ಲಿಪಿ ಮತ್ತು ಇಂಗ್ಲಿಷ್ನಲ್ಲಿ ಅವರ ಹೆಸರನ್ನು ಮುದ್ರಿಸಲಾಗಿದೆ. ಭಾವಚಿತ್ರದ ಕೆಳಗೆ ಅವರು ಬದುಕಿದ ಇಸವಿಯಾದ 1924-2018 ಅನ್ನು ಟಂಕಿಸಲಾಗಿದೆ.
ನಾಣ್ಯದ ಮೇಲ್ಭಾಗದಲ್ಲಿ ಅಶೋಕ ಸ್ಥಂಭದ ಸಿಂಹದ ಲಾಂಛನ ಮತ್ತು ಮಧ್ಯಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 'ಸತ್ಯಮೇವ ಜಯತೇ' ಸಾಲು ಬರೆಯಲಾಗಿದೆ.
|
ಸಿಂಹ ಲಾಂಛನದ ಕೆಳಗೆ ರೂಪಾಯಿ
ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 'ಭಾರತ್' ಮತ್ತು ಬಲಭಾಗದಲ್ಲಿ ಇಂಗ್ಲಿಷ್ನಲ್ಲಿ 'ಇಂಡಿಯಾ' ಎಂದು ಬರೆಯಲಾಗಿದೆ. ಸಿಂಹದ ಲಾಂಛನದ ಕೆಳಗೆ ರೂಪಾಯಿ ಚಿಹ್ನೆ ಹಾಗೂ 100 ರೂ. ಎಂದು ಟಂಕಿಸಲಾಗಿದೆದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16ರಂದು ತಮ್ಮ 93ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು.
ವಾಜಪೇಯಿ ಅವರ ಸ್ಮರಣಾರ್ಥ ಡೆಹರಾಡೂನ್ ವಿಮಾನ ನಿಲ್ದಾಣಕ್ಕೆ ಅಟಲ್ಜಿ ಅವರ ಹೆಸರಿಡಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಹಾಗೆಯೇ ಲಕ್ನೋದ ಪ್ರಸಿದ್ಧ ಹಜರತ್ ಗಂಜ್ ಚೌರಾಹಾವನ್ನು 'ಅಟಲ್ ಚೌಕ್' ಎಂದು ಬದಲಿಸಲು ತೀರ್ಮಾನಿಸಲಾಗಿದೆ.