ಶ್ರೀಲಂಕಾಕ್ಕೆ 3,000 ಕೋಟಿ ರೂ ಸಾಲ: ಮೋದಿ ಘೋಷಣೆ
Recommended Video
ನವದೆಹಲಿ, ನವೆಂಬರ್ 30: ಭಯೋತ್ಪಾದನೆ ವಿರುದ್ಧದ ಹೋರಾಟ, ಮೂಲಸೌಕರ್ಯ ಅಭಿವೃದ್ಧಿ ಮುಂತಾದವು ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಶ್ರೀಲಂಕಾಕ್ಕೆ 3,000 ಕೋಟಿ ($450 ಮಿಲಿಯನ್) ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಕಟಿಸಿದ್ದಾರೆ.
ಶ್ರೀಲಂಕಾದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ಭರವಸೆ ನೀಡಿದರು. ಶ್ರೀಲಂಕಾದ ನೂತನ ಅಧ್ಯಕ್ಷರನ್ನು ಆಹ್ವಾನಿಸಿದ ಮೊದಲ ದೇಶ ಭಾರತವಾಗಿದ್ದು, ಅಧ್ಯಕ್ಷ ರಾಜಪಕ್ಸ ಅವರು ತಮ್ಮ ಮೊದಲ ಅತಿಥಿಯಾಗಿ ದೇಶಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಗೆ ಅವರಿಗೆ ಆಹ್ವಾನ ನೀಡಿದರು.
ಸಿದ್ದಗಂಗಾ ಮಠದ ಶ್ರೀಗಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಶೀರ್ವಾದ
ರಾಜಪಕ್ಸ ಅವರು ಶ್ರೀಲಂಕಾದ ಅಧ್ಯಕ್ಷರಾಗಿ ನ.18ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಮರುದಿನವೇ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಕೊಲಂಬೋಗೆ ಕಳುಹಿಸಿದ್ದ ಪ್ರಧಾನಿ ಮೋದಿ, ಅವರಿಗೆ ಆಹ್ವಾನ ಪತ್ರ ನೀಡಿದ್ದರು. ಆಹ್ವಾನ ಸ್ವೀಕರಿಸಿದ ರಾಜಪಕ್ಸ, ತಮ್ಮ ಮೊದಲ ವಿದೇಶ ಭೇಟಿಯಾಗಿ ಭಾರತಕ್ಕೆ ಆಗಮಿಸಿದ್ದರು.
ಆರ್ಥಿಕ ಮತ್ತು ಭದ್ರತಾ ಸಹಕಾರ
ಉಭಯ ದೇಶಗಳ ನಾಯಕರು ಆರ್ಥಿಕ ಮತ್ತು ಭದ್ರತಾ ಸಹಕಾರ ಸೇರಿದಂತೆ ವಿವಿಧ ವಿಚಾರಗಳ ಒಪ್ಪಂದದ ಕುರಿತಾಗಿ ಸಮಾಲೋಚನೆ ನಡೆಸಿದರು. ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದವರ ಬೇಡಿಕೆಗಳನ್ನು ಈಡೇರಿಸುವುದು, ಮೀನುಗಾರರ ಸಮಸ್ಯೆಗೆ ಪರಿಹಾರ, ದ್ವಿಪಕ್ಷೀಯ ವ್ಯಾಪಾರದ ಕುರಿತು ಸಹ ಚರ್ಚಿಸಲಾಯಿತು.
ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ 350 ಕೋಟಿ ರೂ
ಶ್ರೀಲಂಕಾವು ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದಲು ಭಾರತದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಧಾನಿ ಮೋದಿ ಅವರು ರಾಜಪಕ್ಸೆಗೆ ಭರವಸೆ ನೀಡಿದರು. ಶ್ರೀಲಂಕಾದಲ್ಲಿ ಕಳೆದ ಈಸ್ಟರ್ ಹಬ್ಬದ ಸಂದರ್ಭದಲ್ಲಿ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಭಯೋತ್ಪಾದನೆ ವಿರುದ್ಧದ ಹೋರಾಟದ ತಂತ್ರಗಳನ್ನು ಕಲಿಯುವ ಸಲುವಾಗಿ ಶ್ರೀಲಂಕಾದ ಪೊಲೀಸ್ ಅಧಿಕಾರಿಗಳಿಗೆ ಭಾರತದ ಪ್ರಮುಖ ಭದ್ರತಾ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಮೋದಿ ತಿಳಿಸಿದರು. ಇದೇ ವೇಳೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಶ್ರೀಲಂಕಾಕ್ಕೆ 350 ಕೋಟಿ ರೂ. ನೆರವು ಪ್ರಕಟಿಸಿದರು.
ಮೋದಿ ಬಳಸೋದು 5 ಸ್ಟಾರ್ ಹೋಟೆಲ್ ಅಲ್ಲ, ಮತ್ತೆ ಯಾವುದು?
ತಮಿಳು ಸಮುದಾಯದವರಿಗೆ ಮನೆ
ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಶ್ರೀಲಂಕಾಕ್ಕೆ 50 ಮಿಲಿಯನ್ ಡಾಲರ್ ನೀಡಲಾಗುವುದು. ಅದರ ಜತೆಗೆ ಶ್ರೀಲಂಕಾದ ಆರ್ಥಿಕತೆಯನ್ನು ಬಲಪಡಿಸಲು $400 ಮಿಲಿಯನ್ ಸಹಾಯ ನೀಡಲಾಗುವುದು ಎಂದು ಮೋದಿ ಹೇಳಿದರು. ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದ ಜನರಿಗಾಗಿ ಮನೆಗಳನ್ನು ನಿರ್ಮಿಸಲು ಭಾರತ ಗೃಹ ನಿರ್ಮಾಣ ಯೋಜನೆ ಆರಂಭಿಸಿದೆ. ಈಗಾಗಲೇ ಶ್ರೀಲಂಕಾದಲ್ಲಿ 46,000 ಮನೆಗಳನ್ನು ನಿರ್ಮಿಸಲಾಗಿದ್ದು, 14,000 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಮೀನುಗಾರರ ದೋಣಿ ಬಿಡುಗಡೆ
ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ರಾಜಪಕ್ಸ, ಶ್ರೀಲಂಕಾವು ವಶಪಡಿಸಿಕೊಂಡ ಭಾರತೀಯ ಮೀನುಗಾರರ ದೋಣಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಈ ವರ್ಷದ ಏಪ್ರಿಲ್ನಲ್ಲಿ ನಮಗೆ ಆಗಿರುವ ಅನುಭವದಂತೆ ನಾವು ನಮ್ಮ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರಗಳನ್ನು ಪರಾಮರ್ಶೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಭಾರತ ನಮಗೆ ಸಹಾಯ ಮಾಡಲು ಮುಂದಾಗಿರುವುದು ಮೆಚ್ಚುವಂಥದ್ದು ಎಂದು ಹೇಳಿದರು.