ಮೋದಿಗೆ ಸಿಹಿ ತಿನ್ನಿಸಿದ ಪ್ರಣಬ್ ಮುಖರ್ಜಿ, ಏನೇನೋ ಊಹಾಪೋಹ!
ಕೋಲ್ಕತ್ತಾ, ಮೇ 28: ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದು, ಮುಖರ್ಜಿ ಅವರು ಮೋದಿ ಅವರಿಗೆ ಸಿಹಿ ತಿನ್ನಿಸುತ್ತಿರುವ ಚಿತ್ರ ಸಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಮುಖರ್ಜಿ ಅವರು ಅಭಿನಂದನೆ ಸಲ್ಲಿಸಿದ್ದು, ಮೋದಿ ಮತ್ತು ಪ್ರಣಬ್ ದಾ ಅವರ ಭೇಟಿ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಕಳೆದ ವರ್ಷ ಆರೆಸ್ಸೆಸ್ ಸಭೆಯಲ್ಲಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸಿದ್ದು ಸುದ್ದಿಯಾಗಿತ್ತು. ನಂತರ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದು, ಮೊನ್ನೆ ಮೊನ್ನೆ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಚುನಾವಣಾ ಆಯೋಗವನ್ನು ಹೊಗಳಿದ್ದು.... ಇತ್ಯಾದಿ ನಡೆಗಳು ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ ಎಂಬೆಲ್ಲ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಮತ್ರಿ ಮಮತಾ ಬ್ಯಾನರ್ಜಿ ಅವರು ನರೇಂದ್ರ ಮೋದಿ ಅವರಿಗೆ ರಸಗುಲ್ಲಾ ಬದಲು ಕಲ್ಲು-ಮಣ್ಣಿನ ಸಿಹಿ ಕಳಿಸುವುದಾಗಿ ಹೇಳಿದ್ದರು. ಆದರೆ ಬಂಗಾಳಿಯವರೇ ಆದರೂ ಪ್ರಣಬ್ ಮುಖರ್ಜಿ ಅವರು ಪ್ರಧಾನಿ ಅವರನ್ನು ನಡೆಸಿಕೊಂಡ ರೀತಿಗೂ, ದೀದಿ ನಡೆಸಿಕೊಂಡ ರೀತಿಗೂ ಎಷ್ಟು ವ್ಯತ್ಯಾಸ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದೆ.
ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಪ್ರಣಬ್ ಮುಖರ್ಜಿ ಹೇಳಿಕೆ
|
ಆಶೀರ್ವಾದ ಪಡೆದ ಮೋದಿ
ಪ್ರಣಬ್ ಮುಖರ್ಜಿ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡುವುದು ಒಂದು ಸೌಭಾಗ್ಯ. ಅವರ ಜ್ಞಾನ ಮತ್ತು ಅಂತಃದೃಷ್ಟಿಗೆ ಸಾಟಿ ಇಲ್ಲ. ನಮ್ಮ ದೇಶದಲ್ಲೆ ಅಮೂಲ್ಯ ಕೊಡುಗೆ ನೀಡಿದ ವ್ಯಕ್ತಿ ಅವರು. ಅವರನ್ನು ಭೇಟಿ ಮಾಡಿ ಇಂದು ಅವರ ಆಶೀರ್ವಾದ ಪಡೆದೆ" ಎಂದಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲಾಂ
"ನಾವು ಯಾವುದೇ ಸಾಂವಿಧಾನಿಕ ಸಂಸ್ಥೆಯನ್ನು ಬಲಾಡ್ಯಗೊಳಿಸಬೇಕಾದರೆ ಅದರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ಇಂದು ಭಾರತದಲ್ಲಿ ಚುನಾವಣೆಗಳು ಯಶಸ್ವಿಯಾಗುತ್ತಿವೆ ಎಂದರೆ ಅದಕ್ಕೆ ಕಾರಣ ಚುನಾವಣಾ ಆಯುಕ್ತರು. ಸುಕುಮಾರ್ ಸೇನ್ ಅವರಿಂದ ಹಿಡಿದು ಪ್ರಸ್ತುತ ಚುನಾವಣಾ ಆಯುಕ್ತರವರೆಗೂ ಎಲ್ಲರೂ ತಮ್ಮ ಕೆಲಸನ್ನು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ಅವರನ್ನು ಟೀಕಿಸುವುದು ಸರಿಯಲ್ಲ. ಈ ಚುನಾವಣೆಯೂ ಪರಿಪೂರ್ಣವಾಗಿದೆ" ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು. ಅತ್ತ ಕಾಂಗ್ರೆಸ್ ಮತ್ತು ವಿಪಕ್ಷಗಳ ಮುಖಂಡರು ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಇವಿಎಂ ದೋಷದ ಬಗ್ಗೆ ದೂರು ಸಲ್ಲಿಸಿದ್ದರು!
ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್ ದಾ
2018 ರ ಜೂನ್ ತಿಂಗಳಿನಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮವೊಂದರಲ್ಲಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸಿ, ಕಾಂಗ್ರೆಸ್ಸಿಗರು ಹುಬ್ಬೇರಿಸುವಂತೆ ಮಾಡಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಬಂದ ಪ್ರಣಬ್ ಅವರ ನಡೆಯನ್ನು ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ ಅವರು ಸಮಕಾಲಿನ ಇತಿಹಾಸದಲ್ಲೇ ಮಹತ್ವದ ನಡೆ ಎಂದು ಕರೆದಿದ್ದರು.
ತುರ್ತು ಪರಿಸ್ಥಿತಿ ಬಗ್ಗೆ
ಎನ್ ಡಿಟಿವಿಯ ಸೋನಿಯಾ ಸಿಂಗ್ ಅವರು ಬರೆದ 'Defining India: Through Their Eyes' ಎಂಬ ಪುಸ್ತಕದಲ್ಲಿ ಪ್ರಣಬ್ ಮುಖರ್ಜಿ ಅವರ ಸಂದರ್ಶನ ಪ್ರಕಟವಾಗಿದ್ದು, ಈ ಸಂದರ್ಶನದಲ್ಲಿ ಅವರು, "1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದೇ ಇರಬಹುದಿತ್ತು" ಎಂದಿದ್ದರು. ಅವರ ಈ ಹೇಳಿಕೆಯನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದ್ದು, ಕಾಂಗ್ರೆಸ್ ನಾಯಕರಿಗೆ ಮುಜುಗರವನ್ನುಂಟು ಮಾಡಿತ್ತು. "ತುರ್ತು ಪರಿಸ್ಥಿತಿಯನ್ನು ಹೇರುವುದಕ್ಕೆ ಸಂವಿಧಾನ ಅಧಿಕಾರ ನೀಡಿದ್ದು ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಮಾತ್ರ. ಆದರೆ ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಅವರಿಂದ ಜನರ ಹಕ್ಕನ್ನು ಕಸಿದಂತಾಗುತ್ತದೆ. 1975 ರಲ್ಲಿ ತುರ್ತು ಪರಿಸ್ಥಿತಿ ಹೇರದಂತೆ ತಡೆಯಲು ಸಾಧ್ಯವಿತ್ತು" ಎಂದು ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ಹೇಳಿದ್ದರು.