ರೇಡಿಯೋ ಮೂಲಕ ಖಾದಿ ಮಂತ್ರ ಜಪಿಸಿದ ಮೋದಿ
ನವದೆಹಲಿ, ಅ. 3 : ಮಹಾತ್ಮಾ ಗಾಂಧೀಜಿ ಜಯಂತಿಯಂದು ಸ್ವಚ್ಛ ಭಾರತ ಅಭಿಯಾನಕ್ಕೆ ನಾಂದಿ ಹಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಮರುದಿನವೇ ಗಾಂಧೀಜಿಯವರ ಮತ್ತೊಂದು ಕನಸನ್ನು ಸಾಕಾರಮಾಡಲು ಭಾರತದ ಜನತೆಗೆ ಕರೆ ನೀಡಿದ್ದಾರೆ.
ಭಾರತದ ಜನತೆಯನ್ನು ಉದ್ದೇಶಿಸಿ ಪ್ರಥಮ ಬಾರಿಗೆ ಆಕಾಶವಾಣಿ ಮುಖಾಂತರ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಾತನಾಡಿದ ಮೋದಿ, "ಖಾದಿ ಬಳಕೆಯನ್ನು ಪ್ರೋತ್ಸಾಹಿಸಿ, ಕನಿಷ್ಠಪಕ್ಷ ಒಂದು ಖಾದಿ ಬಟ್ಟೆಯನ್ನಾದರೂ ಕೊಳ್ಳಿ. ನೀವು ಹೀಗೆ ಮಾಡಿದರೆ ಬಡವರ ಮನೆಯಲ್ಲಿ ದೀಪಾವಳಿಯಂದು ಏಳಿಗೆಯ ಹಣತೆ ಪ್ರಜ್ವಲಿಸಲಿದೆ" ಎಂದಿದ್ದಾರೆ.
ಮುಂದಿನ ಭಾನುವಾರವೂ ನಿಮ್ಮ ಜೊತೆ ಆಕಾಶವಾಣಿಯಲ್ಲಿ ಮಾತನಾಡುತ್ತೇನೆ. ಸಾಧ್ಯವಾದರೆ ಪ್ರತಿ ತಿಂಗಳು ಎರಡು ಬಾರಿ ಸಂವಾದ ನಡೆಸುತ್ತೇನೆ. ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಇದೆ ಎಂದು ಭಾವಿಸುತ್ತೇನೆ ಎಂದು ನರೇಂದ್ರ ಮೋದಿ ದೇಶದ ಜನತೆಯ ಕಿವಿಗೆ ಗಾಂಧಿ ಕನಸಿನ ಮಂತ್ರವನ್ನು ಉಸುರಿದ್ದಾರೆ.
"ನನಗೆ ಹಲವಾರು ಜನರು ದೇಶದ ಅಭಿವೃದ್ಧಿ ಕುರಿತಂತೆ ಪತ್ರ ಬರೆದಿದ್ದಾರೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ನೈಪುಣ್ಯತೆ ಕುರಿತು ತರಬೇತಿ ನೀಡಬೇಕು ಎಂದು ಒಬ್ಬರು ಸಲಹೆ ನೀಡಿದ್ದಾರೆ. ಕೆಲವರು ಪಾಲಿಥಿನ್ ಬ್ಯಾಗ್ ನಿಷೇಧಿಸಬೇಕು ಮತ್ತು ಕಸದ ಬುಟ್ಟಿ ಉಪಯೋಗಿಸಬೇಕು ಎಂದೂ ಸಲಹೆ ನೀಡಿದ್ದಾರೆ. ಇಂಥ ಸಲಹೆಗಳನ್ನು ನೀಡುತ್ತಿರಿ. ನಾವೆಲ್ಲ ಒಗ್ಗಟ್ಟಾಗಿ ಭಾರತವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗೋಣ" ಎಂದು ನುಡಿದರು.
"ನಮ್ಮಲ್ಲಿ ಶಕ್ತಿಯ ಕೊರತೆಯಿಲ್ಲ. ಆದರೆ, ಆ ಶಕ್ತಿ ಏನೆಂದು ನಾವು ಮರೆತುಬಿಟ್ಟಿದ್ದೇವೆ. ಭಾರತದ 125 ಕೋಟಿ ಜನತೆಯಲ್ಲಿ ಅಗಾಧವಾದ ನೈಪುಣ್ಯತೆ ಮತ್ತು ಶಕ್ತಿಯಿದೆ. ನಮ್ಮನ್ನು ನಾವು ಮೊದಲು ಚೆನ್ನಾಗಿ ಅರಿತುಕೊಳ್ಳಬೇಕು. ಆ ಶಕ್ತಿಯನ್ನು ಚೆನ್ನಾಗಿ ಬಳಸಿಕೊಳ್ಳುವಂತಾಗಬೇಕು. ಇದು ಜನತೆಯ ಸರಕಾರ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಒಬ್ಬ ಒಂದು ಹೆಜ್ಜೆ ಇಟ್ಟರೆ 125 ಕೋಟಿ ಜನತೆ 125 ಕೋಟಿ ಹೆಜ್ಜೆ ಇಟ್ಟಂತೆ" ಎಂದು ಮೋದಿ ಮತ್ತೊಮ್ಮೆ ಪ್ರಖರವಾಗಿ ಭಾಷಣ ಮಾಡಿದರು.
ದೂರದರ್ಶನ, ಇಂಟರ್ನೆಟ್ ಬಂದ ಮೇಲೆ ರೇಡಿಯೋ ಕೇಳುಗರು ವಿರಳವಾಗುತ್ತಿದ್ದಾರೆ. ಎಫ್ಎಂ ಚಾಲನೆಯಲ್ಲಿದೆಯಾದರೂ ಮೊದಲಿದ್ದ ಕ್ರೇಜ್ ಇಂದು ಉಳಿದಿಲ್ಲ ಎಂಬುದು ಸತ್ಯ ಮಾತು. ಅಂಥದರಲ್ಲಿ ನರೇಂದ್ರ ಮೋದಿ ಅವರು ಜನರನ್ನು ತಲುಪಲು ಆಕಾಶವಾಣಿಯನ್ನು ಬಳಸಿ, ರೇಡಿಯೋ ಬಗ್ಗೆ ಮತ್ತೊಮ್ಮೆ ಜನರಲ್ಲಿ ಮೋಹವಾಗುವಂತೆ ಮಾಡಿದ್ದಾರೆ. ಪ್ರತಿ ಭಾನುವಾರವೂ ರೇಡಿಯೋದಲ್ಲಿ ಮೋದಿ ದನಿ ಕೇಳಿಸುವಂತಾಗಲಿ.