ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 15: ಭಾರತೀಯ ಸೇನೆಯನ್ನು ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರ ಹೊಸ ಹುದ್ದೆಯೊಂದನ್ನು ಸೃಷ್ಟಿಸಲಾಗಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ಗುರುವಾರ 73ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾಹಿತಿ ನೀಡಿದರು.
73rd Independence Day 2019 LIVE: ಜನಸಂಖ್ಯಾ ನಿಯಂತ್ರಣ ನಿಯಮದ ಮುನ್ಸೂಚನೆ ನೀಡಿದ ಮೋದಿ
''ನಮ್ಮ ಸೇನಾ ಪಡೆ ದೇಶದ ಹೆಮ್ಮೆ. ಈ ಪಡೆಗಳ ನಡುವೆ ಹೆಚ್ಚಿನ ಸಮನ್ವಯ ಸಾಧಿಸುವ ದೃಷ್ಟಿಯಿಂದ ನಾನು ಕೆಂಪುಕೋಟೆಯಿಂದ ಪ್ರಮುಖ ನಿರ್ಧಾರವನ್ನು ಪ್ರಕಟಿಸುತ್ತಿದ್ದೇನೆ. ಭಾರತವು ಇನ್ನು ಮುಂದೆ ಮುಖ್ಯ ಸೇನಾ ಸಿಬ್ಬಂದಿ (ಸಿಡಿಎಸ್) ಹೊಂದಲಿದೆ. ಇದರಿಂದ ನಮ್ಮ ಸೇನಾಪಡೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ'' ಎಂದು ಹೇಳಿದರು.
ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ಹಬ್ಬದ ಸಂಭ್ರಮ: ಚಿತ್ರಗಳು
ಮುಖ್ಯ ಸೇನಾ ಸಿಬ್ಬಂದಿಯು ಸೇನಾಪಡೆ, ನೌಕಾಪಡೆ ಅಥವಾ ವಾಯುಪಡೆಯ ನಾಲ್ಕು ತಾರಾ ಶ್ರೇಣಿಯ ಅಧಿಕಾರಿಗಳಲ್ಲಿನ ಸೇವೆಯಲ್ಲಿನ ಹಿರಿಯ ಮುಖ್ಯಸ್ಥರಲ್ಲಿ ಒಬ್ಬರಾಗಿರುತ್ತಾರೆ. ಇವರು ನೇರವಾಗಿ ಸಶಸ್ತ್ರ ಪಡೆಗಳು ಮತ್ತು ಪ್ರಧಾನಿ ನಡುವಿನ ನೇರ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತಾರೆ. ಭಾರತದ ರಾಷ್ಟ್ರೀಯ ಭದ್ರತೆಯ ಅವಶ್ಯಕತೆಗಳನ್ನು ತಲುಪಲು ಬಳಸುವ ರಕ್ಷಣಾ ವಿನಿಯೋಗದ ಆದ್ಯತೆ ಹಾಗೂ ರೂಪುರೇಷೆಯನ್ನು ನಿಯಂತ್ರಿಸುತ್ತಾರೆ.
ಸಿಡಿಎಸ್ಗೆ ಶಿಫಾರಸು ಮಾಡಿದ್ದ ಸಮಿತಿ
1999ರ ಕಾರ್ಗಿಲ್ ಯುದ್ಧದ ಬಳಿಕ ರಚಿಸಲಾಗಿದ್ದ ಸಮಿತಿಯೊಂದು ಸೇನಾಪಡೆಯ ಒಟ್ಟಾರೆ ಚಟುವಟಿಕೆಗಳನ್ನು ಗಮನಿಸಲು ಮುಖ್ಯ ಸೇನಾ ಸಿಬ್ಬಂದಿ ಹುದ್ದೆ ಸೃಷ್ಟಿಗೆ ಶಿಫಾರಸು ಮಾಡಿತ್ತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಪಡೆಗಳು ಭಾರತದ ಗಡಿಯೊಳಗೆ ನುಸುಳಿ ಕಾರ್ಗಿಲ್ನ ಪ್ರಮುಖ ಎತ್ತರದ ಪರ್ವತ ಶಿಖರಗಳನ್ನು ಆಕ್ರಮಿಸಿದ್ದವು. ಹೀಗಾಗಿ ಯುದ್ಧದ ಬಳಿಕ ಭದ್ರತೆಯಲ್ಲಿ ಉಂಟಾದ ಲೋಪಗಳ ಬಗ್ಗೆ ಪರಿಶೀಲನೆ ನಡೆಸಲು ಈ ಸಮಿತಿಯನ್ನು ರಚಿಸಲಾಗಿತ್ತು.
ರಕ್ಷಣಾ ಸಚಿವರಿಗೆ ಏಕ ವ್ಯಕ್ತಿ ಸೇನಾ ಸಲಹೆಗಳನ್ನು ನೀಡಲು ಸೇನಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆಯ ಅಗತ್ಯವಿದೆ ಎಂದು ಸಮಿತಿ ವರದಿಯಲ್ಲಿ ಹೇಳಿತ್ತು. ಈ ಪರಿಕಲ್ಪನೆಯನ್ನು ಹಿಂದಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಬಲವಾಗಿ ಬೆಂಬಲಿಸಿದ್ದರು.
ಆಕ್ಷೇಪದಿಂದ ಹಿನ್ನಡೆಯಾಗಿತ್ತು
ಕಾರ್ಗಿಲ್ ಪರಾಮರ್ಶನಾ ಸಮಿತಿ ನೀಡಿದ್ದ ವರದಿಯನ್ನು ಉಪ ಪ್ರಧಾನಿ ಎಲ್ಕೆ ಅಡ್ವಾಣಿ ನೇತೃತ್ವದ ಸಚಿವರ ತಂಡವೊಂದು ಪರಿಶೀಲನೆ ನಡೆಸಿ ಮೂರು ಪಡೆಗಳ ಜಂಟಿ ಯೋಜನಾ ಸಿಬ್ಬಂದಿ ಕಚೇರಿಯಲ್ಲಿ ಸಿಡಿಎಸ್ ಹುದ್ದೆಗಾಗಿ ಸಲಹೆ ನೀಡಿತ್ತು. ಆದರೆ, ವರ್ಷಗಳು ಉರುಳಿದರೂ ಅದು ಮುಂದುವರಿದಿರಲಿಲ್ಲ. ರಾಜಕೀಯ ಕಾರಣಗಳು, ಸೇನಾಪಡೆಗಳ ಕೆಲವು ವಿಭಾಗಗಳು ಹಾಗೂ ಆಡಳಿತವರ್ಗದ ಆಕ್ಷೇಪಗಳಿಂದ ಈ ಉದ್ದೇಶ ನನೆಗುದಿಗೆ ಬಿದ್ದಿತ್ತು.
ಮತ್ತೊಂದು ದಿಟ್ಟ ನಿರ್ಧಾರದ ಮುನ್ಸೂಚನೆ ಕೊಟ್ಟ ಮೋದಿ
ಸಿಡಿಎಸ್ ನೇಮಕ ಪ್ರಕ್ರಿಯೆ
ಏರ್ ಚೀಫ್ ಮಾರ್ಷಲ್ ಬಿರೇಂದರ್ ಸಿಂಗ್ ಧನೋವಾ ಅವರು ಈಗಿನ ಸೇನಾ ರಚನೆ ಪ್ರಕಾರ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಆದರೆ, ಸಿಎಎಸ್ನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಮುಖ್ಯ ಸೇನಾ ಸಿಬ್ಬಂದಿ ನೇಮಕದ ವಿಚಾರದಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
ಮಾಜಿ ಸೇನಾ ಮುಖ್ಯಸ್ಥರ ಸ್ವಾಗತ
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ನಿವೃತ್ತ ಸೇನಾ ಮುಖ್ಯಸ್ಥ, ಜನರಲ್ ವೇದ್ ಪ್ರಕಾಶ್ ಮಲಿಕ್ ಅವರು ಪ್ರಧಾನಿ ಮೋದಿ ಅವರ ಘೋಷಣೆಯನ್ನು ಸ್ವಾಗತಿಸಿದ್ದಾರೆ.
'ಸಿಡಿಎಸ್ಅನ್ನು ಸ್ಥಾಪಿಸುವ ಐತಿಹಾಸಿಕ ಹೆಜ್ಜೆಯ ಘೋಷಣೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಈ ನಿರ್ಧಾರವು ನಮ್ಮ ರಾಷ್ಟ್ರೀಯ ಭದ್ರತೆಯನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಹೆಚ್ಚು ಆರ್ಥಿಕವಾಗಿಸಲಿದೆ. ಇದರಿಂದ ಉತ್ತಮ ಜಂಟಿ ಕಾರ್ಯಾಚರಣೆ ಮತ್ತು ಬಹುಶಿಸ್ತೀಯ ಸಮನ್ವಯ ಸಾಧ್ಯವಾಗಲಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.