'ಸರ್ಜಿಕಲ್ ಸ್ಟ್ರೈಕ್ ನಿಜ, ಆದರೆ 56 ಇಂಚಿನ ಎದೆ ಇದರ ಲಾಭ ಪಡೆಯಬಾರದು!'
ನವದೆಹಲಿ, ಜೂನ್ 28: 'ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಸುಳ್ಳು ಎಂದು ನಾನೆಂದಿಗೂ ಹೇಳಿಲ್ಲ' ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ಮಾಜಿ ಮುಖಂಡ ಅರುಣ್ ಶೌರಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಸೈಫುದ್ದಿನ್ ಸೋಜ್ ಅವರ 'Kashmir: Glimpses of History and the Story of Struggle' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ ಶೌರಿ, ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಸುಳ್ಳು, ಹಾಗೊಮ್ಮೆ ನಡೆದಿದ್ದರೆ ಕಾಶ್ಮೀರದ ಸ್ಥಿತಿ ಹೀಗಿರುತ್ತಿರಲಿಲ್ಲ. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹತೋಟಿಗೆ ಬರಬೇಕಿತ್ತು. ಆದರೆ ಬಿಜೆಪಿ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ಬಳಸಿಕೊಳ್ಳುತ್ತಿದೆ' ಎಂಬ ಹೇಳಿಕೆ ನೀಡಿದ್ದಾರೆಂದು ವರದಿಯಾಗಿತ್ತು.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅರುಣ್ ಶೌರಿ ಅಚ್ಚರಿಯ ಹೇಳಿಕೆ
ಬಿಜೆಪಿಯ ಮಾಜಿ ಮುಖಂಡ, ಸಾಕಷ್ಟು ಪಾಂಡಿತ್ಯ ಹೊಂದಿರುವ ಶೌರಿ ಅವರ ಈ ಮಾತು ಸಂಚಲನ ಮೂಡಿಸಿತ್ತು. ಆದರೆ ತಾನು ಈ ರೀತಿ ಹೇಳಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಅವರು ಇದೀಗ ಸಮಜಾಯಿಷಿ ನೀಡಿದ್ದಾರೆ.
ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ!
'ಉತ್ತರ ಭಾರತದ ಇಬ್ಬರು ವರದಿಗಾರರು ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿಸದ್ದಾರೆ. ನಾನು ಎಂದಿಗೂ ಸೈನಿಕರ ಸೇವೆಯನ್ನು ಅಪಹಾಸ್ಯ ಮಾಡಿಲ್ಲ. ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಸುಳ್ಳು ಎಂದಿಲ್ಲ. ಆದರೆ ನಮ್ಮ ಸೇನೆಯ ತ್ಯಾಗ, ಧೈರ್ಯದಿಂದ ನಡೆದ ಈ ಕಾರ್ಯಾಚರಣೆಯನ್ನು ಕೆಲವರು ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ನಾಟಕೀಯತೆ ಎನ್ನಿಸುತ್ತದೆ ಎಂದು ನಾನು ಹೇಳಿದ್ದೇನಷ್ಟೆ' ಎಂದು ಶೌರಿ ಸಮಜಾಯಿಷಿ ನೀಡಿದ್ದಾರೆ.
ಲಾಭ ಪಡೆದುಕೊಳ್ಳುತ್ತಿರುವ 56 ಇಂಚಿನ ಎದೆ
ಈ ಕಾರ್ಯಾಚರಣೆ ನಡೆದಿದೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಆದರೆ ಇದನ್ನು ಪ್ರಚಾರಕ್ಕಾಗಿ ಬಳಸುವುದು, ಮತ್ತು 'ನನ್ನ 56 ಇಂಚಿನ ಎದೆ'ಯಿಂದಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದೇನು ಎಂಬುದು ಸರಿಯಲ್ಲ. ಇದನ್ನು ನಾನು ಒಪ್ಪುವುದಿಲ್ಲ ಎಂದು ಶೌರಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೊದಿಯವರಿಗೆ ಟಾಂಗ್ ನೀಡಿದರು.
ಅಟಲ್ ಜೀ ಪ್ರತಿಕ್ರಿಯೆ ಹೇಗಿರುತ್ತಿತ್ತು?
'ಅಕಸ್ಮಾತ್ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಈ ಘಟನೆ ನಡೆದಿದ್ದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಜನರು, ನಿಮ್ಮ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿತಾ ಎಂದು ಕೇಳಿದರೆ, ಅವರು ಹುಬ್ಬು ಏರಿಸಿ, ನಿಜಕ್ಕೂ ಅದು ನಡೆಯಿತಾ? ಎಂದು ಜನರನ್ನೇ ಕೇಳುತ್ತಿದ್ದರು. ವಿಶ್ವಾಸಾರ್ಹತೆ ಎಂದರೆ ಅದು. ಆದರೆ ಗೌಪ್ಯತೆಯನ್ನು ನಿರ್ವಹಿಸುವುದು ಬಿಟ್ಟು ವಿಡಿಯೋ ಪ್ರೂಫ್ ನೀಡುವುದು ಯಾವ ಪರಿಯ ವಿಶ್ವಾಸಾರ್ಹತೆ?' ಎಂದು ಶೌರಿ ಪ್ರಶ್ನಿಸಿದ್ದಾರೆ.
ಏನಿದು ಸರ್ಜಿಕಲ್ ಸ್ಟ್ರೈಕ್?
2016 ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ಹೋಗಿ ಅಲ್ಲಿನ ಉಗ್ರರ ನೆಲೆಯನ್ನು ಧ್ವಂಸ ಮಾಡಿತ್ತು. ಈ ಘಟನೆಯಲ್ಲಿ ಸಾಕಷ್ಟು ಉಗ್ರರು ಹತರಾದರು. ಉರಿಯಲ್ಲಿ ಸೇನಾ ಶಿಬಿರದ ಮೇಲೆ ಅದಕ್ಕೂ ಮುನ್ನ ಉಗ್ರರು ನಡೆಸಿದ್ದ ದಾಳಿಯಲ್ಲಿ ಭಾರತೀಯ ಸೇನೆಯ 20 ಸೈನಿಕರು ಹುತಾತ್ಮರಾಗಿದ್ದರು. ಉಗ್ರರ ಈ ಹೇಯ ಕೃತ್ಯಕ್ಕೆ ಭಾರತ ಸೇನೆ ಈ ರೀತಿ ಪ್ರತೀಕಾರ ತೀರಿಸಿಕೊಂಡಿತ್ತು. ಇದೇ ಸರ್ಜಿಕಲ್ ಸ್ಟ್ರೈಕ್. ಆದರೆ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಸುಳ್ಳು ಎಂದು ಕೆಲವರು ವಾದಿಸಿ, ಸಾಕ್ಷಿ ನೀಡುವಂತೆ ಕೇಳಿದ್ದರು. ಇದೀಗ ಕೆಲವು ಚಾನೆಲ್ ಗಳು ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋ ಬಿಡುಗಡೆ ಮಾಡಿದ್ದು ವಿವಾದ ಸೃಷ್ಟಿಸಿದೆ.