ನನ್ನ ಫೋನ್ ಹ್ಯಾಕ್ ಮಾಡಲಾಗಿದೆ: ತುರ್ತು ಪರಿಸ್ಥಿತಿಗಿಂತಲೂ ಗಂಭೀರ ಸನ್ನಿವೇಶ ಎಂದ ಮಮತಾ
ನವದೆಹಲಿ, ಜುಲೈ 28: "ನನ್ನ ಫೋನ್ ಕೂಡ ಹ್ಯಾಕ್ ಆಗಿದೆ, ತುರ್ತು ಪರಿಸ್ಥಿತಿಗಿಂತಲೂ ಗಂಭೀರ ಸನ್ನಿವೇಶ ಇದೆ'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪೆಗಾಸಸ್ ಬೇಹುಗಾರಿಕೆಗೆ ಸಂಬಂಧಿಸಿದಂತೆ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮಮತಾ ಬ್ಯಾನರ್ಜಿ ಈ ಆರೋಪ ಮಾಡಿದ್ದಾರೆ.
'ಪೆಗಾಸಸ್ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ
ನನ್ನ ಫೋನ್ ಹ್ಯಾಕ್ ಆಗಿದೆ. ಅಭಿಷೇಕ್ನ ಫೋನ್ ಅನ್ನು ಸಹ ಆಗಲೇ ಹ್ಯಾಕ್ ಮಾಡಲಾಗಿದೆ. ಪ್ರಶಾಂತ್ ಕಿಶೋರ್ ಫೋನ್ ಕೂಡಾ ಹ್ಯಾಕ್ ಆಗಿದೆ. ಒಂದು ಫೋನ್ ಹ್ಯಾಕ್ ಮಾಡಿದರೆ ಸಾಕು, ಆ ಮೂಲಕ ಹಲವು ಫೋನ್ಗಳನ್ನು ಹ್ಯಾಕ್ ಮಾಡಬಹುದು ಎಂದರು.
ಪೆಗಾಸಸ್ ಬೇಹುಗಾರಿಕೆ ಕುರಿತು ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು. ನಮಗೆ ಸುಪ್ರೀಂಕೋರ್ಟ್ ಮೇಲೆ ನಂಬಿಕೆ ಇದೆ ಎಂದು ಹೇಳಿದರು. ಪೆಗಾಸಸ್ ಎಂದರೇನು?, ವೈರಸ್ಗಳಿಂದ ಭರ್ತಿಯಾಗಿರುವ ತಂತ್ರಾಂಶ, ನಮ್ಮ ಸುರಕ್ಷತೆ ಮತ್ತು ಭದ್ರತೆಗೆ ಅಪಾಯ ಎದುರಾಗಿದೆ, ಯಾರೊಬ್ಬರಿಗೂ ಸ್ವಾತಂತ್ರ್ಯ ಇಲ್ಲ ಎಂದರು.
ವಿರೋಧ ಪಕ್ಷದ ನಾಯಕರು, ಇಬ್ಬರು ಕೇಂದ್ರ ಸಚಿವರು ಮತ್ತು 40 ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಪೆಗಾಸಸ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಬೇಕು ಎಂದು ಹೇಳಿದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉತ್ತರವನ್ನು ಕೋರಿ ಈ ಪೆಗಾಸಸ್ ಹಗರಣ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯ ಹೆಸರು ಕೂಡಾ ಪೆಗಾಸಸ್ ಪಟ್ಟಿಯಲ್ಲಿದೆ ಎಂದು ಭಾರತದ ದಿ ವೈರ್ ಸೇರಿಮಂತೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಈ ಹಿನ್ನೆಲೆ ಸೋಮವಾರವಷ್ಟೇ ಮಮತಾ ಬ್ಯಾನರ್ಜಿ ಸುಪ್ರೀಂ ತನಿಖೆಗೆ ಆಗ್ರಹಿಸಿದ್ದರು.