'ಅಫ್ಘಾನಿಗಳಿಗೆ ಸಹಾಯ ಮಾಡಲು ದಾರಿ ಹುಡುಕಬೇಕು': ಜೈಶಂಕರ್
ನವದೆಹಲಿ, ಡಿಸೆಂಬರ್ 19: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ನಡೆಸುತ್ತಿದೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಆರ್ಥಿಕ ಸಂಕಷ್ಟಗಳು ಉಂಟಾಗಿ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಿಂದಾಗಿ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡುವ ಬಗ್ಗೆ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ಉಲ್ಲೇಖ ಮಾಡಿದ್ದಾರೆ.
ಭಾರತದ ನೇತೃತ್ವದಲ್ಲಿ ಮೂರನೇ ಭಾರತ-ಮಧ್ಯ ಏಷ್ಯಾ ಸಭೆಯು ನಡೆದಿದೆ. ನವದೆಹಲಿಯಲ್ಲಿ ಈ ಸಭೆಯು ನಡೆದಿದ್ದು, ಈ ಸಭೆಯಲ್ಲಿ ಖಜಕಿಸ್ತಾನ, ಕಿರ್ಗಿಜ್ ರಿಪಬ್ಲಿಕ್, ತಕಜಿಸ್ತಾನ, ಟರ್ಮನಿಸ್ತಾನ, ಉಜೇಕಿಸ್ತಾನದ ಸಚಿವರುಗಳು ಹಾಜರಾಗಿದ್ದಾರೆ. ಸಭೆಯಲ್ಲಿ ಮಾತನಾಡಿದ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್, "ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯ ಮಾಡುವ ಅವಶ್ಯಕತೆ ಇದೆ," ಎಂದು ಹೇಳಿದ್ದಾರೆ.
ಅಫ್ಘಾನ್ನಲ್ಲಿ ವಿದೇಶಿ ನೆರವಿಲ್ಲದೆ ಬಜೆಟ್ ಮಂಡಿಸಲು ತಾಲಿಬಾನ್ ಸಜ್ಜು
""ನಾವೆಲ್ಲರೂ ಅಫ್ಘಾನಿಸ್ತಾನದೊಂದಿಗೆ ಐತಿಹಾಸಿಕ ಹಾಗೂ ನಾಗರಿಕ ಸಂಬಂಧಗಳನ್ನು ಮುಂದುವರಿಸುತ್ತೇವೆ. ಆ ದೇಶದ ಮೇಲೆ ಕಾಳಜಿ, ಉದ್ದೇಶ ಒಂದೇ ಆಗಿದೆ," ಎಂದು ತಿಳಿಸಿದ್ದಾರೆ. ಇನ್ನು ಈ ವೇಳೆಯಲ್ಲೇ ಸರ್ಕಾರದ ಬಗ್ಗೆ ಉಲ್ಲೇಖ ಮಾಡಿದ್ದಾರೆ, ಹಾಗೆಯೇ ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಹೋರಾಟ, ಮಾನವೀಯ ನೆರವು ಮತ್ತು ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ಅಫ್ಘಾನಿಸ್ತಾನದಲ್ಲಿ ಆದ್ಯತೆ ನೀಡಬೇಕಾಗಿದೆ, ಈ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂಬ ಪ್ರಮುಖ ವಿಚಾರವನ್ನು ಕೂಡಾ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ಪ್ರಸ್ತಾಪ ಮಾಡಿದ್ದಾರೆ.
"ನಾವು ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ದಾರಿಯನ್ನು ಹುಡುಕಬೇಕಾಗಿದೆ. ಭಾರತವು ಮಧ್ಯ ಏಷ್ಯಾದ ದೇಶಗಳೊಂದಿಗೆ ನಟ್ಟನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ," ಎಂದು ಜೈ ಶಂಕರ್ ತಿಳಿಸಿದರು.
"ಫೋರ್ ಸಿ" ಪ್ರಸ್ತಾಪ ಮಾಡಿದ ಜೈ ಶಂಕರ್
ಇನ್ನು ಈ ವೇಳೆಯಲ್ಲೇ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ "ಫೋರ್ ಸಿ" ವಿಧಾನವನ್ನು ಪ್ರಸ್ತಾಪ ಮಾಡಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ, ಸಂಪರ್ಕವನ್ನು ಇನ್ನಷ್ಟು ವಿಸ್ತಾರ ಮಾಡುವ ಹಿನ್ನೆಲೆಯಿಂದಾಗಿ ಈ "ಫೋರ್ ಸಿ" ವಿಧಾನವನ್ನು ಜೈ ಶಂಕರ್ ಪ್ರಸ್ತಾಪ ಮಾಡಿದ್ದಾರೆ. "ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿ ಬದಲಾವಣೆ ಆಗುತ್ತಿರುವ ನಡುವೆಯೇ ನಾವು ಈ ಸಭೆಯನ್ನು ನಡೆಸಿದ್ದೇವೆ. ಜಾಗತಿಕ ಆರೋಗ್ಯ ಹಾಗೂ ಜಾಗತಿಕ ಆರ್ಥಿಕತೆಗೆ ಕೊರೊನಾ ವೈರಸ್ ಸೋಂಕು ಭಾರೀ ಪರಿಣಾಮವನ್ನು ಉಂಟು ಮಾಡಿದೆ. ಕೋವಿಡ್ ಸಮಾಜ, ಸರಬರಾಜು ವ್ಯವಸ್ಥೆ ಹಾಗೂ ಆಡಳಿತ ವ್ಯವಸ್ಥೆಯನ್ನೇ ಬದಲಾವಣೆ ಮಾಡಿದೆ. ಹಾಗೆಯೇ ಹೊಸ ಬೆದರಿಕೆಯನ್ನು ಎದುರಿಸುವ ನಿಟ್ಟಿನಲ್ಲಿ ಬಲ ತುಂಬಿದೆ," ಎಂದರು.
ಅಫ್ಘಾನ್ ಮಹಿಳಾ ಫುಟ್ಬಾಲ್ ಆಟಗಾರರು ತಾಲಿಬಾನ್ನಿಂದ ಹೇಗೆ ತಪ್ಪಿಸಿಕೊಂಡರು?
ಕಳೆದ ಕೆಲವು ವರ್ಷಗಳಲ್ಲಿ, ಭಾರತವು ತನ್ನ ನೆರೆಹೊರೆಯ ರಾಷ್ಟ್ರದೊಂದಿಗೆ ಸಂಪರ್ಕವನ್ನು ಹೆಚ್ಚು ಮಾಡುತ್ತಿದೆ. ಇಂಧನ-ಸಮೃದ್ಧ ಮಧ್ಯ ಏಷ್ಯಾದ ದೇಶಗಳೊಂದಿಗೆ ಒಟ್ಟಾರೆ ಸಹಕಾರವನ್ನು ವಿಸ್ತರಿಸುವತ್ತ ಗಮನಹರಿಸುತ್ತಿದೆ. ಜುಲೈ 2015 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಐದು ದೇಶಗಳ ಪ್ರವಾಸದ ಬಳಿಕ ಭಾರತದೊಂದಿಗೆ ಈ ದೇಶಗಳ ದ್ವಿಮುಖ ಸಂಬಂಧದ ವಿಸ್ತರಣೆಗೆ ಕಾರಣವಾಗಿದೆ.
ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮಧ್ಯ ಏಷ್ಯಾದ ರಾಷ್ಟ್ರಗಳ ಪ್ರಾಮುಖ್ಯತೆಯ ಕಡೆಗೆ ಭಾರತ ಗಮನ ಹರಿಸುವಂತೆ ಮಾಡಿದೆ. ಈ ಪೈಕಿ ಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಜೊತೆ ಭಾರತವು ಗಡಿ ಭಾಗವನ್ನು ಹಂಚಿಕೊಳ್ಳುತ್ತಿದೆ. ಎಲ್ಲಾ ಐದು ಮಧ್ಯ ಏಷ್ಯಾ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ನವೆಂಬರ್ 10 ರಂದು ಅಫ್ಘಾನಿಸ್ತಾನದ ಕುರಿತು ಭಾರತ ಆಯೋಜಿಸಿದ ಪ್ರಾದೇಶಿಕ ಸಂವಾದದಲ್ಲಿ ಭಾಗವಹಿಸಿದ್ದರು. ರಷ್ಯಾ ಮತ್ತು ಇರಾನ್ನ ಎನ್ಎಸ್ಎಗಳು ಕೂಡಾ ಈ ಸಭೆಯಲ್ಲಿ ಭಾಗಿಯಾಗಿದ್ದರು. ಭಾರತ-ಮಧ್ಯ ಏಷ್ಯಾ ಸಂವಾದದ ಎರಡನೇ ಸಭೆಯನ್ನು ಭಾರತವು ಕಳೆದ ವರ್ಷ ಅಕ್ಟೋಬರ್ನಲ್ಲಿ ಡಿಜಿಟಲ್ ವಿಡಿಯೋ ಕಾನ್ಫರೆನ್ಸ್ ರೂಪದಲ್ಲಿ ಆಯೋಜಿಸಿತ್ತು. (ಒನ್ಇಂಡಿಯಾ ಸುದ್ದಿ)