ಮುಸ್ಲಿಮರು ಗೋಮಾಂಸ ತಿನ್ನಬಾರದು ಎಂದ ಮುಸ್ಲಿಂ ಮುಖಂಡ
ನವದೆಹಲಿ, ಜುಲೈ 24: ಮುಸ್ಲಿಮರು ಗೋಮಾಂಸ ತಿನ್ನುವುದನ್ನು ನಿಲ್ಲಿಸಬೇಕು ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಹೇಳಿದ್ದಾರೆ.
ಇಸ್ಲಾಂನಲ್ಲಿಯೂ ಗೋಮಾಂಸ ನಿಷೇಧಿಸಲಾಗಿದೆ. ಆದ್ದರಿಂದ ಮಾಂಸಕ್ಕಾಗಿ ಗೋವನ್ನು ಸಾಯಿಸುವವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗೋಹತ್ಯೆ ನಿಂತರೆ ಗುಂಪು ಹತ್ಯೆಯೂ ನಿಲ್ಲುತ್ತದೆ: ಆರೆಸ್ಸೆಸ್ ಮುಖಂಡನ ವಿವಾದ
"ಮುಸ್ಲಿಮರು ಗೋಮಾಂಸ ತಿನ್ನುವುದನ್ನು ನಿಲ್ಲಿಸಬೇಕು. ಹಸುಗಳನ್ನು ಸಾಯಿಸುವುದು ನಿಲ್ಲಬೇಕು. ಗುಂಪುಕಟ್ಟಿಕೊಂಡು ಸಾಯಿಸುವ ಜನರನ್ನು ತಡೆಯುವುದಕ್ಕೆ ಸಾಧ್ಯವಾಗದಿರುಬಹುದು. ಏಕೆಂದರೆ ಎಲ್ಲಾ ಕಡೆಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುವದಕ್ಕಾಗುವುದಿಲ್ಲ. ಆದರೆ ಯಾರೂ ಸಹ ಗೋಮಾಂಸ ಭಕ್ಷಣೆ ಮಾಡದಂಥ ಕಠಿಣ ಕಾನೂನನ್ನು ಜಾರಿಗೆ ತರಬೇಕು" ಎಂದು ರಿಜ್ವಿ ಹೇಳಿದ್ದಾರೆ.
'ತಾಯಿಯಂತೆ ಕಾಣುವ ಗೋವುಗಳನ್ನು ಕೊಲ್ಲಬಾರದು' ಎಂದು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ ಹೇಳಿಕೆಗಳನ್ನೇ ಪುನರುಚ್ಛರಿಸಿದ ರಿಜ್ವಿ, 'ನಮ್ಮ ತಾಯಿ ಎಂದು ಪೂಜಿಸುವವರನ್ನು ಸಾಯಿಸುವುದಕ್ಕೆ ಹೇಗೆ ಸಾಧ್ಯ?' ಎಂದು ಕೇಳಿದರು.
ದೇಶದೆಲ್ಲೆಡೆ ತಲೆನೋವಾಗಿ ಪರಿಣಮಿಸಿರುವ ಗೋಕಳ್ಳರ ಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್, 'ಗೋ ಹತ್ಯೆಯ ಪಾಪಗಳು ಅಂತ್ಯಗೊಂಡರೆ ಗುಂಪು ಹತ್ಯೆಯ ಸಮಸ್ಯೆಯೂ ಅಂತ್ಯಗೊಳ್ಳುತ್ತದೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.