ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ: ರೈತರ ಜಮೀನನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್
ನವದೆಹಲಿ, ಡಿಸೆಂಬರ್ 27: ಕನಿಷ್ಠ ಬೆಂಬಲ ಬೆಲೆ ಮುಂದುವರೆಯಲಿದೆ ಹಾಗೂ ರೈತರ ಜಮೀನನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ತಂದಿರುವ ನೂತನ ಮೂರು ಕೃಷಿ ಕಾಯ್ದೆಗಳು ರೈತರ ಪರವಾಗಿದೆ. ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ವ್ಯವಸ್ಥೆಯನ್ನು ಅಥವಾ ರೈತರ ಜಮೀನುಗಳನ್ನು ಅವರಿಂದ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ರೈತ ಸಂಘಟನೆಗಳ ಜೊತೆ ಮುಕ್ತ ಮನಸ್ಸಿನಿಂದ ಮಾತುಕತೆಗೆ ಸಿದ್ದವಿದೆ ಎಂದರು.
ಕೃಷಿ ಕಾಯ್ದೆ; ಸರ್ಕಾರದ ಜೊತೆ ಮಾತುಕತೆಗೆ ದಿನ ನಿಗದಿ ಮಾಡಿದ ರೈತಸಂಘ
ವಿರೋಧ ಪಕ್ಷಗಳು ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ರೈತರ ಹಾದಿ ತಪ್ಪಿಸುತ್ತಿದೆ. ಕನಿಷ್ಠ ಬೆಂಬಲ ವ್ಯವಸ್ಥೆ ಹಾಗೆಯೇ ಮುಂದುವರಿಯುತ್ತದೆ ಎಂದು ನಾನು ಈ ಸಂದರ್ಭದಲ್ಲಿ ರೈತ ಬಾಂಧವರಿಗೆ ಖಾತರಿಪಡಿಸುತ್ತಿದ್ದೇನೆ ಎಂದರು.
ಕೃಷಿ ಏನೆಂಬುದನ್ನೇ ಅರಿಯದವರಿಗೆ ಜಮೀನನ್ನು ಕೊಡಲು ಹೇಗೆ ಸಾಧ್ಯ, ಕೇಂದ್ರ ಸರ್ಕಾರವು ಎಂದಿಗೂ ಕನಿಷ್ಠ ಬೆಂಬಲ ಬೆಲೆಯನ್ನು ನಿಲ್ಲಿಸಬೇಕು ಎಂದು ಯೋಚಿಸಿಲ್ಲ, ಮುಂದೆ ಕೂಡ ಯೋಚಿಸುವುದಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ 9 ಕೋಟಿಗೂ ಅಧಿಕ ರೈತರಿಗೆ ಇಂದು ಪ್ರಧಾನಿ ಮುಂದಿನ ಕಂತಿನ 18 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಅವರು ನಿಜವಾಗಿಯೂ ರೈತರ ಉದ್ಧಾರಕ್ಕಾಗಿ ಕೆಲಸ ಮಾಡುತ್ತಿರುವ ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಹೇಳಿದರು.
ಕೃಷಿ ಕಾಯ್ದೆಗಳ ಕುರಿತು ಮಾತುಕತೆಗೆ ಪ್ರಧಾನಿ ಮೋದಿ ಕರೆಗೆ ಉತ್ತರಿಸಿರುವ ರೈತ ಸಂಘಟನೆಗಳು, ಮಾತುಕತೆಗೆ ದಿನಾಂಕ ನಿಗದಿ ಮಾಡಿವೆ. ಡಿ.29ರಂದು ಮಾತುಕತೆ ನಡೆಸಬಹುದು ಎಂದು ಸರ್ಕಾರಕ್ಕೆ ಪತ್ರ ಬರೆದಿವೆ.
ಶುಕ್ರವಾರ ರೈತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಬಿಕ್ಕಟ್ಟು ಕೊನೆಗೊಳಿಸಲು ಮಾತುಕತೆಗೆ ಆಹ್ವಾನ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಶನಿವಾರ ಮಧ್ಯಾಹ್ನ ರೈತ ಸಂಘ ಸಭೆ ನಡೆಸಿದ್ದು, ಆರನೇ ಸುತ್ತಿನ ಮಾತುಕತೆಗೆ ಡಿ. 29ಕ್ಕೆ ದಿನಾಂಕ ಮಾಡಿವೆ.
ಮನೆಮನೆ ಮಾತಾದ ಗೋಲ್ಡ್ ವಿನ್ನರ್ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ
"ಆರನೇ ಸುತ್ತಿನ ಮಾತುಕತೆ ನಡೆಸಲು ಸರ್ಕಾರದ ಮುಂದೆ ಪ್ರಸ್ತಾವ ಇಟ್ಟಿದ್ದೇವೆ. ಡಿ.29ರ ಮಂಗಳವಾರ, ಬೆಳಿಗ್ಗೆ 11 ಗಂಟೆಗೆ ಮಾತುಕತೆ ನಡೆಸಬಹುದು ಎಂದು ತಿಳಿಸಿದ್ದೇವೆ" ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಸರ್ಕಾರದೊಂದಿಗೆ ಕಾಯ್ದೆ ಕುರಿತು ನಾಲ್ಕು ಅಂಶಗಳನ್ನು ಮುಂದಿನ ವಾರ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.