ಹಲ ವೇಷಧಾರಿಯಾಗಿ ನಾರಮಲ್ಲಿ ಶಿವಪ್ರಸಾದ್ ಪ್ರತಿಭಟನೆ
ನವದೆಹಲಿ, ಜುಲೈ 31: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯೊಂದಿಗೆ ಇಲ್ಲಿನ ಸಂಸದ ನಾರಮಲ್ಲಿ ಶಿವಪ್ರಸಾದ್ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನಕ್ಕೆ ದಿನವೂ ತರಹೇವಾರಿ ವೇಷದಲ್ಲಿ ಬಂದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ರೈತ, ಮುಸ್ಲಿಂ, ವಿದ್ಯಾರ್ಥಿ, ಸಂತ, ಡಾ.ಬಿ.ಆರ್.ಅಂಬೇಡ್ಕರ್... ಹೀಗೆ ಪ್ರತಿದಿನ ಒಬ್ಬೊಬ್ಬರ ವೇಷದಲ್ಲಿ ಬಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತೆಲುಗು ನಟರಾಗಿದ್ದ ಶಿವಪ್ರಸಾದ್ ನಂತರ ರಾಜಕಾರಣಿಯಾಗಿ, 2009 ಮತ್ತು 2014 ರಲ್ಲಿ ಆಂಧ್ರಪ್ರದೇಶದ ಚಿತ್ತೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಸಂಸದರಾದರು.
ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿದ ಟಿಡಿಪಿ
ಕುಬೇರುಲು, ತುಳಸಿ, ಲಕ್ಷ್ಮಿ, ಅಯ್ಯಾರೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಇವರು ಪ್ರೇಮ ತಪಸ್ಸು, ಟೋಪಿ ರಾಜಾ, ಸ್ವೀಟಿ ರೋಜಾ ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಸಂಸತ್ತಿನೆದುರಲ್ಲಿ ಅವರ ತರಹೇವಾರಿ ಭಂಗಿಗಳು ಹೇಗಿವೆ ನೋಡಿ.
ಡಾ.ಬಿ ಆರ್ ಅಂಬೇಡ್ಕರ್ ವೇಷದಲ್ಲಿ
ಸಂಸತ್ತಿನೆದುರಲ್ಲಿ, ಭಾರತೀಯ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ವೇಷ ಧರಿಸಿ ಎಲ್ಲರ ಗಮನ ಸೆಳೆಯುತ್ತಿರುವ ಶಿವಪ್ರಸಾದ್.
ರೈತನಾಗಿ ಶಿವಪ್ರಸಾದ್
ಹೆಗಲ ಮೇಲೊಂದು ಕೋಲಿಟ್ಟು ಅದರ ಎರಡೂ ತುದಿಯಲ್ಲಿ ಹಗ್ಗ ಕಟ್ಟಿ ಅದಕ್ಕೆ ಮಡಿಕೆ ಕಟ್ಟಿ ರೈತನಂತೇ ತಲೆಗೆ ರುಮಾಲ್ ರೀತಿಯಲ್ಲಿ ಟವಲ್ ಕಟ್ಟಿಕೊಂಡು ಸಂಸತ್ತಿಗೆ ಬಂದ ಶಿವಪ್ರಸಾದ್ ಅವರನ್ನು ಎಸ್ಪಿ ಮುಖಂಡ ಮುಲಾಯಂ ಸಿಂಗ್ ನೋಡಿದ್ದು ಹೀಗೆ!
ಮುಸ್ಲಿಂ ವೇಷದಲ್ಲಿ
ಮುಸ್ಲಿಮರಂತೆ ವೇಷ ಧರಿಸಿಕೊಂಡು, ಹಾಡು ಹೇಳುತ್ತ ಸಂಸತ್ತಿನೆದುರು ಶಿವಪ್ರಸಾದ್ ಪ್ರತಿಭಟನೆ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.
ಬಟ್ಟೆಯ ಮೂಟೆ ಹೊತ್ತ ಅಗಸ
ಅಗಸನ ಹಾಗೆ ವೇಷ ತೊಟ್ಟ ಶಿವಪ್ರಸಾದ್ ಅವರನ್ನು ಕಾವೇರಿ ನಿರ್ವಹಣಾ ಮಂಡಳಿ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ತಮಿಳುನಾಡಿನ ಎಐಎಡಿಎಂಕೆ ಸದಸ್ಯರು ಕುತೂಹಲದಿಂದ ನೋಡಿದರು.
ಪೂಜಾರಿಯಾಗಿ ಶಿವಪ್ರಸಾದ್
ಹಿಂದು ಪೂಜಾರಿಯಂತೆ ವೇಷ ಧರಿಸಿ, ಪಾರ್ಲಿಮೆಂಟಿನೆದುರು ಫೋಟೋಕ್ಕೆ ಶಿವಪ್ರಸಾದ್ ಪೋಸು ನೀಡಿದ್ದು ಹೀಗೆ.
ರಾಜನ ವೇಷದಲ್ಲಿ
ರಾಜನ ವೇಷ ಧರಿಸಿ, ಖಡ್ಗ ಹಿಡಿದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿರುವ ಶಿವಪ್ರಸಾದ್. ಛಾಯಾಗ್ರಾಹಕರ ಪಾಲಿಗೆ ಶಿವಪ್ರಸಾದ್ ಈ ಬಾರಿಯ ಮುಂಗಾರು ಅಧಿವೇಶನದ ಕೇಂದ್ರಬಿಂದುವಾಗಿದ್ದಾರೆ.