ಬಿಜೆಪಿಯಿಂದ ಅಮಾನತಾದ ಕೀರ್ತಿ ಆಜಾದ್ ಇನ್ನು ಕಾಂಗ್ರೆಸ್ನಲ್ಲಿ ಬ್ಯಾಟಿಂಗ್!
ನವದೆಹಲಿ, ಫೆಬ್ರವರಿ 18: ಬಿಜೆಪಿಯಿಂದ ಮೂರು ವರ್ಷಗಳ ಹಿಂದೆ ಅಮಾನತಾಗಿದ್ದ ಮಾಜಿ ಕ್ರಿಕೆಟಿಗ, ಸಂಸದ ಕೀರ್ತಿ ಆಜಾದ್, ಲೋಕಸಭೆ ಚುನಾವಣೆಗೆ ತಿಂಗಳುಗಳು ಇರುವಂತೆಯೇ ಸೋಮವಾರ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸ್ವಾಗತಿಸಿದರು. ಬಳಿಕ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಜಾದ್, ಒಪ್ಪಂದದಲ್ಲಿ ಏನೋ ತಪ್ಪಾಗಿದೆ ಎಂಬ ಅನುಮಾನ ಬಿಜೆಪಿ ಸಂಸದರಲ್ಲಿಯೂ ಇದೆ ಎಂದು ಹೇಳಿದ್ದಾರೆ.
ಡಿಡಿಸಿಎ ಭ್ರಷ್ಟಾಚಾರ: ವಿಡಿಯೋ ಸಾಕ್ಷ್ಯ ಬಹಿರಂಗ
ಬಿಹಾರದ ದರ್ಭಾಂಗಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಆಜಾದ್, 26 ವರ್ಷ ಕಾಲ ಬಿಜೆಪಿಯಲ್ಲಿದ್ದರು. ಇದೇ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದಾರೆ. ಆದರೆ, ಅವರನ್ನು ದೆಹಲಿಯಿಂದ ಕಣಕ್ಕಿಳಿಸಲು ಕಾಂಗ್ರೆಸ್ ಬಯಸಿದೆ ಎನ್ನಲಾಗಿದೆ.
'ನಾನೀಗ ಮನೆಗೆ ಮರಳಿದ್ದೇನೆ. 1952ರಲ್ಲಿ ನನ್ನ ತಂದೆಯನ್ನು 26ನೇ ವಯಸ್ಸಿನಲ್ಲಿ ಜವಾಹರಲಾಲ್ ನೆಹರೂ ಸಂಸದರನ್ನಾಗಿ ಮಾಡಿದ್ದರು' ಎಂಬುದನ್ನು ಅಜಾದ್ ನೆನಪಿಸಿಕೊಂಡರು.
1983ರ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್, ಬಿಜೆಪಿಯಿಂದ ರಾಜಕೀಯ ಯಾನ ಆರಂಭಿಸಿದ್ದರು. ಕಾಂಗ್ರೆಸ್ನಲ್ಲಿದ್ದ ಅವರ ತಂದೆ ಭಗವತ್ ಝಾ ಆಜಾದ್, ಬಿಹಾರದ ಮುಖ್ಯಮಂತ್ರಿಯೂ ಆಗಿದ್ದರು.
ಬೆಂಗಳೂರು ಸೆಂಟ್ರಲ್: ಐದಕ್ಕೇರಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕೀರ್ತಿ ಆಜಾದ್, ಸಚಿವ ಅರುಣ್ ಜೇಟ್ಲಿ ವಿರುದ್ಧ ನೇರ ಆರೋಪ ಮಾಡಿದ್ದರು. ಇದರಿಂದ 2015ರಲ್ಲಿ ಬಿಜೆಪಿ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು.