ಅನಂತಕುಮಾರ್ ಹೆಗಡೆ ವಿರುದ್ಧ ಲೋಕಸಭೆಯಲ್ಲಿ ತೀವ್ರ ಆಕ್ರೋಶ
Recommended Video
ನವದೆಹಲಿ, ಫೆಬ್ರವರಿ 4: ಮಹಾತ್ಮಾ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಬಿಜೆಪಿ ಹೈಕಮಾಂಡ್ ಹಾಗೂ ಗಾಂಧಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸಂಸದ ಅನಂತಕುಮಾರ್ ಹೆಗಡೆ ಉಲ್ಟಾ ಹೊಡೆದಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಗಡೆ, ""ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನಾನು ಮಹಾತ್ಮಾ ಗಾಂಧಿ ಬಗ್ಗೆ ಏನೂ ಮಾತನಾಡಿಲ್ಲ. ಸ್ವಾತ್ರಂತ್ರ್ಯ ಹೋರಾಟದ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಆದರೆ, ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ'' ಎಂದು ಹೇಳಿದ್ದಾರೆ.
ಸಂಸದ ಅನಂತಕುಮಾರ್ ಹೆಗಡೆಗೆ ನಿಷೇಧ ಹೇರಿದ ಬಿಜೆಪಿ ಹೈಕಮಾಂಡ್ !
""ಸಮಾರಂಭದಲ್ಲಿ ಸಹಜವಾಗಿ ನಾನು ಸ್ವಾತಂತ್ರ್ಯ ಹೋರಾಟದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ. ಆದರೆ, ಕೆಲವರು ಬೇಕು ಅಂತಾನೇ ನನ್ನ ಹೇಳಿಕೆಯನ್ನು ತಿರುಚಿ ವಿವಾದ ಮಾಡಿದ್ದಾರೆ. ಮಾಡದ ತಪ್ಪಿಗೆ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ'' ಎಂದು ಹೆಗಡೆ ಹೇಳಿದ್ದಾರೆ.
ಪ್ರತಿಪಕ್ಷಗಳಿಂದ ನಿಲುವಳಿ ಸೂಚನೆ
ಸಂಸತ್ನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಪಕ್ಷಗಳು ಕೆಂಡಾಮಂಡಲವಾಗಿವೆ. ಲೋಕಸಭೆಯಲ್ಲಿ ಸಂಸದ ಅನಂತಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ನಿಲುವಳಿ ಸೂಚನೆ ಮಂಡಿಸಿವೆ.
ಅಧೀರ್ ರಂಜನ್ ಚೌದರಿ ಆಕ್ರೋಶ
ಜಗತ್ತೇ ಪೂಜಿಸುವ ಮಹಾತ್ಮಾ ಗಾಂಧೀಜಿ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿರುವ ಬಿಜೆಪಿ ಸಂಸದನನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಎದುರು ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾತ್ಮಾ ಗಾಂಧಿ ಬಗ್ಗೆ ಬಿಜೆಪಿಗೆ ಎಂತಹ ಅಭಿಪ್ರಾಯ ಇದೆ ಎಂಬುದನ್ನು ಬಿಜೆಪಿ ಸಂಸದರೇ ತೋರಿಸಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಲೋಕಸಭೆಯಲ್ಲಿ ಕಿಡಿಕಾರಿದ್ದಾರೆ.
ಗಾಂಧಿ ಉಪವಾಸ ಸತ್ಯಾಗ್ರಹವನ್ನು ದೊಡ್ಡ ಡ್ರಾಮಾ: ಅನಂತ್ ಹೆಗಡೆ
ಹೆಗಡೆ ವಿರುದ್ಧ ವ್ಯಾಪಕ ಆಕ್ರೋಶ
ಇತ್ತ ರಾಜ್ಯದಲ್ಲೂ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಗಾಂಧಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಮನಬಂದಂತೆ ಹೇಳಿಕೆ ನೀಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಹುಚ್ಚು ಹಿಡಿದಿದ್ದರೆ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಿ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ. ಅನಂತಕುಮಾರ್ ಹೆಗಡೆ ಅವರ ಮಾತುಗಳನ್ನು ಗಮನಿಸಿದರೆ ಅವರ ಮಾನಸಿಕ ಆರೋಗ್ಯ ಸರಿ ಇದ್ದಂತೆ ಕಾಣಿಸುವುದಿಲ್ಲ.ಅದು ಸತ್ಯವೇ ಆಗಿದ್ದರೆ, ಸಂವಿಧಾನದ ಕಾನೂನಿನ ಪ್ರಕಾರ ಅವರು ಸಂಸದರಾಗಿ ಮುಂದುವರಿಯುವಂತಿಲ್ಲ ಎಂಬುದಾಗಿ ಬ್ರಿಜೇಶ್ ಕಾಳಪ್ಪ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ ಖಾರವಾಗಿ ಹೇಳಿದ್ದಾರೆ.
ಅನಂತಕುಮಾರ್ ಹೇಳಿದ್ದೇನು?
ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಗಾಂಧೀಜಿ ಅವರ ನಿರಶನ ಮತ್ತು ಸತ್ಯಾಗ್ರಹ ಕಾರಣ ಎಂದು ಬಿಂಬಿಸಲಾಗಿದೆ. ಆದರೆ, ಇದು ನಿಜವಾದ ಸ್ವಾತಂತ್ರ್ಯ ಹೋರಾಟವೇ ಅಲ್ಲ. ಬ್ರಿಟಿಷರ ಅನುಮತಿಯೊಂದಿಗೆ ಮಾಡಿರುವ ಹೋರಾಟದ ನಾಟಕ ಎಂದು ಅನಂತ್ ಕುಮಾರ್ ಹೆಗಡೆ ಭಾನುವಾರ ಬೆಂಗಳೂರಿನಲ್ಲಿ ನಡೆದಿದ್ದ ಖಾಸಗಿ ಸಮಾರಂಭವೊಂದರಲ್ಲಿ ಟೀಕಿಸಿದ್ದರು.