ಕೊನೆಗೂ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ
ನವದೆಹಲಿ, ಜೂನ್ 21: ವಿವಾದಾತ್ಮಕ ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಮಸೂದೆಯನ್ನು ಲೋಕಸಭೆಯ ಮುಂಗಾರು ಅಧಿವೇಶನದ ಐದನೇ ದಿನವಾದ ಇಂದು(ಜೂನ್ 21) ಮಂಡನೆ ಮಾಡಲಾಗಿದ್ದು, ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್ ಅವರು ಮಸೂದೆಯನ್ನು ಪರಿಚಯಿಸಿದರು.
"ಜನರು ನಮ್ಮನ್ನು ಆಯ್ಕೆ ಮಾಡಿದ್ದು ಕಾನೂನು ಮಾಡಲು. ಕಾನೂನಿಂದ ತ್ರಿವಳಿ ತಲಾಖ್ ಸಂತ್ರಸ್ಥರಿಗೆ ನ್ಯಾಯ ದೊರಕುತ್ತದೆ. ಈ ಮಸೂದೆಯ ಮೂಲಕ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗುತ್ತದೆ, ಮತ್ತು ಅವರಿಗೆ ನ್ಯಾಯ ನೀಡಲು, ಸಬಲೀಕರಣದತ್ತ ಕೊಂಡೊಯ್ಯುವ ಸಾಧನ ಇದಾಗಿದೆ" ಎಂದು ರವಿಶಂಕರ್ ಪ್ರಸಾದ್ ಅವರು ಈ ಸಂದರ್ಭದಲ್ಲಿ ಹೇಳಿದರು.
ತ್ರಿವಳಿ ತಲಾಖ್ ನಿಷೇಧಕ್ಕೆ ಹೊಸ ಮಸೂದೆ: ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ
ಈ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗಷ್ಟೇ ಒಪ್ಪಿಗೆ ಸೂಚಿಸಿತ್ತು.
ಗುರುವಾರವಷ್ಟೇ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ತ್ರಿವಳಿ ರಲಾಖ್ ನಂಥ ಪದ್ಧತಿಯನ್ನು ನಿಷೇಧಿಸುವುದರಿಂದ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಿದಂತಾಗುತ್ತದೆ ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಮಸೂದೆ ಕುರಿತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ವಿರೋಧ ವ್ಯಕ್ತಪಡಿಸಿದ್ದು, ಲೋಕಸಭೆಯಲ್ಲಿ ವಿವಿಧ ಸಚಿವರು ಮಸೂದೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ತ್ರಿವಳಿ ತಲಾಖ್ ಮಸೂದೆಗೆ ಹೆಚ್ಚಿನ ಸಂಸದರು ಅನುಮೋದನೆ ನೀಡಿದ ಕಾರಣ ಮಸೂದೆ ಅಂಗೀಕಾರವಾಗಿದೆ.
ತ್ರಿವಳಿ ತಲಾಕ್ : ಮುಸ್ಲಿಂ ಮಹಿಳೆ ರಕ್ಷಣಾ ಮಸೂದೆಯಲ್ಲೇನಿದೆ?
ಹದಿನಾರನೇ ಲೋಕಸಭೆಯಲ್ಲೂ ತ್ರಿವಳಿ ತಲಾಖ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತಾದರೂ ಲೋಕಸಭೆಯ ಅವಧಿ ಮುಕ್ತಾಯವಾಗಿದ್ದರಿಂದ ಮತ್ತು ರಾಜ್ಯ ಸಭೆಯಲ್ಲೂ ಈ ಮಸೂದೆಗೆ ಅಂಗೀಕಾರ ಸಿಗದ ಕಾರಣ ಅದು ಮಂಡನೆಯಾಗಿರಲಿಲ್ಲ.
ಯಾವುದೇ ಲಿಖಿತ ದಾಖಲೆಗಳಿಲ್ಲದೆ ವಿಚ್ಛೇದನ ನೀಡುವ ಈ ಪದ್ಧತಿಯನ್ನು 2018 ರ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನಲ್ಲಿ ಅಪರಾಧ ಮತ್ತು ಅಸಾಂವಿಧಾನಿಕ ಎನ್ನಲಾಗಿತ್ತು. ನಂತರ ಈ ಕುರಿತು ಕಾನೂನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಲೋಕಸಭೆಯಲ್ಲಿ ಈ ಮಂಡನೆಗೆ ಅಂಗೀಕಾರ ದೊರೆತಿತ್ತಾದರೂ ರಾಜ್ಯ ಸಭೆಯಲ್ಲಿ ದೊರೆತಿರಲಿಲ್ಲ. ಅಷ್ಟರಲ್ಲೇ ಹಿಂದಿನ ಲೋಕಸಬೆಯ ಅವಧಿ ಮುಗಿದಿದ್ದರಿಂದ ಅದು ಜಾರಿಗೆ ಬಂದಿರಲಿಲ್ಲ.
ತ್ರಿವಳಿ ತಲಾಖ್ ಲೋಕಸಭೆಯಲ್ಲಿ ಪಾಸ್, ಮುಂದೇನು?
ಇದೀಗ ಮಂಡನೆಯಾಗಬೇಕಿರುವ ತಿದ್ದುಪಡಿ ಮಸೂದೆಯ ಪ್ರಕಾರ ಮುಸ್ಲಿಂ ಪತಿ ತ್ರಿವಳಿ ತಲಾಖ್ ನೀಡಿದರೆ ಆತನ ವಿರುದ್ಧ ಪತ್ನಿ ಅಥವಾ ಯಾವುದೇ ಹತ್ತಿರದ ಬಂಧುಗಳು ದೂರು ನೀಡಬಹುದು, ಪತಿ ಸಂಧಾನಕ್ಕೆ ಬಂದರೆ ಅಥವಾ ರಾಜಿ ಮಾಡಿಕೊಳ್ಳಲು ಒಪ್ಪಿದರೆ ಆಕೆ ದೂರನ್ನು ವಾಪಸ್ ಪಡೆಯುವುದಕ್ಕೆ ಅವಕಾಶವಿದೆ, ಪತಿಯನ್ನು ತ್ರಿವಳಿ ತಲಾಖ್ ಪ್ರಕರಣದಲ್ಲಿ ಜೈಲಿಗಟ್ಟಬಹುದು ಮತ್ತು ಆತನಿಗೆ ಜಾಮೀನು ನೀಡಬೇಕೋ ಬೇಡವೋ ಎಂಬುದನ್ನು ಪತ್ನಿಯೊಂದಿಗೆ ಮಾತುಕತೆ ನಡೆಸಿಯೇ ಮ್ಯಾಜಿಸ್ಟ್ರೇಟ್ ತೀರ್ಪು ನೀಡಬೇಕು, ಮೌಖಿಕವಾಗಿ ತಲಾಖ್ ಹೇಳುವುದು ಅಥವಾ ವಾಟ್ಸಾಪ್, ಟೆಲಿಫೋನ್, ಪತ್ರ ಯಾವುದೇ ತಂತ್ರಜ್ಞಾನವನ್ನು ಬಳಸಿಕೊಂಡು ತಲಾಖ್ ಸಂದೇಶ ಕಳಿಸಿ ವಿಚ್ಛೇದನ ಪಡೆಯುವುದನ್ನೂ ಈ ಕಾಯ್ದೆ ಅಪರಾಧವೆಂದಿದೆ.