ಅಪ್ಪುಗೆ, ಕಣ್ಣೇಟು... ರಾಹುಲ್ ವರ್ತನೆಗೆ ಸಂಸತ್ತಿನಲ್ಲಿ ಭೂಕಂಪ!
ನವದೆಹಲಿ, ಜುಲೈ 20: ರಾಹುಲ್ ಗಾಂಧಿ ಅವರ ಭಾಷಣ, ನಂತರದ ಅಪ್ಪಿಕೋ ಚಳವಳಿ, ಆಮೇಲೊಂದು ಕಣ್ಣೇಟು... ಈ ಎಲ್ಲವೂ ಸೇರಿ ಪಾರ್ಲಿಮೆಂಟಲ್ಲಿ ಇವತ್ತು ಭೂಕಂಪವಾಗಿದ್ದಂತೂ ಖರೆ ನೋಡಿ!
2016 ರ ಅಪನಗದೀಕರಣದ ಸಮಯದಲ್ಲಿ ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡಿದರೆ ಭೂಕಂಪವಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು.
ಪ್ರಿಯಾ ವಾರಿಯರ್ ರನ್ನು ಬೀಟ್ ಮಾಡಿದ ರಾಹುಲ್ ಗಾಂಧಿ!
ಅವರ ಮಾತಿನಂತೆಯೇ ಇಂದು ಅವರ ಭಾಷಣ ಮತ್ತು ನಂತರ ಗೆಶ್ಚರ್ ಗೆ ಸಂಸತ್ತು ಕಂಪಿಸಿದೆ! ಭಾಷಣದುದ್ದಕ್ಕೂ ಮೋದಿ ಸರ್ಕಾರ ವೈಫಲ್ಯಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ನಂತರ ಮೋದಿಯವರನ್ನು ಅಪ್ಪಿಕೊಂಡು ಅರೆಕ್ಷಣ ಅಧಿವೇಶನದಲ್ಲಿ ಮೌನ ಆವರಿಸುವಂತೆ ಮಾಡಿದರು.
ಕಣ್ಣಿನಲ್ಲಿ ಕಣ್ಣನಿಟ್ಟು ....
"ಮೋದಿಯವರೇ, ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ..." ಎಂದು ಕೇಳುವ ಮೂಲಕ ಭಾಷಣದ ಆರಂಭದಲ್ಲಿ ಸ್ವತಃ ಪ್ರಧಾನಿ ಮೋದಿಯವರ ಮುಖದಲ್ಲೂ ರಾಹುಲ್ ಗಾಂಧಿ ನಗೆ ಉಕ್ಕಿಸಿದ್ದರು. 'ಪ್ರಧಾನಿ ಮೋದಿಯವರಿಗೆ ತಪ್ಪು ಮಾಡಿರುವ ಅಳುಕಿದೆ. ಆದ್ದರಿಂದಲೇ ಅವರು ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು ನೋಡಲಾರರು" ಎಂದು ರಾಹುಲ್ ಗಾಂಧಿ ಹೇಳಿದ್ದರು. ಆ ಮಾತು ಕೇಳಿ ಅಧಿವೇಶನದಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಾಡಿದರು.
ಅಪ್ಪಿಕೋ ಚಳುವಳಿ..!
ಭಾಷಣದ ನಂತರ ಕ್ಷಣ ಕಾಲ ಇಡೀ ಲೋಕಸಭೆಯೂ ಕಂಪಿಸುವಂತೆ ಮಾಡಿದ್ದು ರಾಹುಲ್ ಗಾಂಧಿಯವರ ಅನಿರೀಕ್ಷಿತ ಗೆಶ್ಚರ್! 'ನೀವು ನನ್ನನ್ನು ಪಪ್ಪು ಎಂದು ಕರೆಯಬಹುದು. ಆದರೆ ನಾನು ನಿಮ್ಮನ್ನು ಗೌರವಿಸುತ್ತೇನೆ' ಎಂದು ಮಾತನ್ನು ಮುಗಿಸಿದ ರಾಹುಲ್ ಗಾಂಧಿ ಸೀದಾ ನರೇಂದ್ರ ಮೋದಿಯವರ ಬಳಿ ಹೋಗಿ ಅವರನ್ನು ತಪ್ಪಿಕೊಂಡುಬಿಟ್ಟರು! ಮೊದಲು ಸ್ವಲ್ಪ ಇರಿಸುಮುರಿಸು ಅನುಭವಿಸಿದ ಮೊದಿ, ನಂತರ ಚೇತರಿಸಿಕೊಂಡು ರಾಹುಲ್ ಗಾಂಧಿ ಅವರನ್ನು ವಾಪಸ್ ಕರೆದು ಅವರನ್ನು ಮತ್ತೊಮ್ಮೆ ಆಲಂಗಿಸಿ, ಬೆನ್ತಟ್ಟಿ ಕಳಿಸಿದರು ಈ ಘಟನೆಯನ್ನು ಲೋಕಸಭೆಯಲ್ಲಿ ಹಾಜರಿದ್ದ ಎಲ್ಲರೂ ತದೇಕಚಿತ್ತದಿಂದ ಗಮನಿಸಿದರು.
ರಾಹುಲ್ -ಮೋದಿ ಅಪ್ಪುಗೆ ಕಂಡು ಅವಾಕ್ಕಾದ ಟ್ವೀಟ್ ಲೋಕ
ಕಲ್ಲೇಟಿಗಿಂತ ಕಣ್ಣೇಟೆ ಜೋರಾಗಿ...
ಇಷ್ಟಕ್ಕೇ ಮುಗಿಯಲಿಲ್ಲ. ಮೋದಿಯವರನ್ನು ಆಲಂಗಿಸಿದ ನಂತರ ವಾಪಸ್ ಬಂದು ತಮ್ಮ ಸೀಟಿನಲ್ಲಿ ಕುಳಿತ ರಾಹುಲ್ ಗಾಂಧಿ, ಪಕ್ಕದಲ್ಲಿರುವವರೊಂದಿಗೆ ಕಣ್ಮಿಟುಕಿಸಿದರು. ಸದ್ಯಕ್ಕೆ ರಾಹುಲ್ ಗಾಂಧಿಯವರ ಅದುವರೆಗಿನ ಮಾತಿನೇಟಿಗಿಂತ ಈ ಕಣ್ಣೇಟೇ ಹೆಚ್ಚು ಸುದ್ದಿಯಾಗುತ್ತಿರುವುದಂತೂ ಸತ್ಯ! ಕಣ್ಮಿಟುಕು ಸುಂದರಿ ಪ್ರಿಯಾ ವಾರಿಯರ್ ಅನ್ನೇ ರಾಹುಲ್ ಗಾಂಧಿ ಬೀಟ್ ಮಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಅವಿಶ್ವಾಸ ನಿರ್ಣಯ LIVE: ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆ
ಭೂಕಂಪವಾಗಿದ್ದಂತೂ ಖರೆ!
ರಾಹುಲ್ ಗಾಂಧಿಯವರು ಭಾಷಣಕ್ಕೆ ಆಗಮಿಸುತ್ತಿದ್ದಂತೆಯೇ 'ಭೂಕಂಪ್ ಆನೆ ವಾಲಾ ಹೇ..' ಎಂದು ಸಂಸತ್ತಿನಲ್ಲಿ ಕೆಲವರು ಕೂಗಿದ್ದರು. ಬೆಳಗ್ಗೆಯಿಂದ ಟ್ವಿಟ್ಟರ್ ನಲ್ಲಿ ಅದೇ ಟ್ರೋಲ್. ಆದರೆ ರಾಹುಲ್ ಗಾಂಧಿ ಅವರ ಮಾತು, ನಂತರದ ಅಪ್ಪುಗೆ, ಕಣ್ಣೇಟು ಎಲ್ಲವೂ ಸೇರಿ ಇದೀಗ ಸಂಸತ್ತಿನಲ್ಲಿ ಕಂಪನ ಹುಟ್ಟಿಸಿದ್ದಂತೂ ಸತ್ಯ. ಒಟ್ಟಿನಲ್ಲಿ ಹೀಗೆ ಕಂಪನ ಹುಟ್ಟಿಸಿ, ತಾವು ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ ರಾಹುಲ್ ಗಾಂಧಿ!