ಸಂಸತ್ ಮಂಗಾರು ಅಧಿವೇಶನದ ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಓಂ ಬಿರ್ಲಾ
ನವದೆಹಲಿ, ಸಪ್ಟೆಂಬರ್.13: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಸಿದ್ಧತೆಗಳನ್ನು ಸ್ವತಃ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪರಿಶೀಲನೆ ನಡೆಸಿದರು.
ನವದೆಹಲಿ ಸಂಸತ್ ಭವನಕ್ಕೆ ಭೇಟಿ ನೀಡಿದ ಲೋಕಸಭಾ ಸಭಾಪತಿ ಓಂ ಬಿರ್ಲಾ, ಕೊರೊನಾವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದರು.
ಮುಂಗಾರು ಅಧಿವೇಶನ; ಸಂಸತ್ ಭವನ ಸ್ಯಾನಿಟೈಸ್ಗೆ ವಿಶೇಷ ತಂಡ
ಸಪ್ಟೆಂಬರ್.14ರಿಂದ ಸಂಸತ್ ಉಭಯ ಕಲಾಪಗಳು ಆರಂಭವಾಗಲಿದೆ. ಮೊದಲ ದಿನ ಲೋಕಸಭೆ ಕಲಾಪ ಬೆಳಗ್ಗೆ 1 ರಿಂದ 3 ಗಂಟೆವರೆಗೂ ನಡೆಯಲಿದ್ದು, ರಾಜ್ಯಸಭಾ ಕಲಾಪ ಮಧ್ಯಾಹ್ನ 3 ರಿಂದ 7 ಗಂಟೆವರೆಗೂ ನಡೆಯಲಿದೆ. ಸಪ್ಟೆಂಬರ್.14ರ ನಂತರ ರಾಜ್ಯಸಭಾ ಕಲಾಪ ಬೆಳಗ್ಗೆ 1 ರಿಂದ 3 ಗಂಟೆವರಗೂ ಹಾಗೂ ಲೋಕಸಭಾ ಕಲಾಪ ಮಧ್ಯಾಹ್ನ 3 ರಿಂದ 7 ಗಂಟೆವರೆಗೂ ನಡೆಸಲು ಸಮಯ ನಿಗದಿಗೊಳಿಸಲಾಗಿದೆ.
ಕೊರೊನಾವೈರಸ್ ನಿಯಂತ್ರಣಕ್ಕೆ ನಿಯಮ ಪಾಲನೆ:
ಪ್ರತಿನಿತ್ಯ ಕೊರೊನಾವೈರಸ್ ಸೋಂಕಿನ ನಿಯಂತ್ರಣ ಕ್ರಮಗಳೊಂದಿಗೆ ನಾಲ್ಕು ಗಂಟೆಗಳ ಕಾಲ ಸಂಸತ್ ಕಲಾಪ ನಡೆಸಲಾಗುತ್ತದೆ. ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಅಗತ್ಯವಾಗಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆರೋಗ್ಯ ಸಚಿವಾಲಯವು ಹೊರಡಿಸಿರುವ ಮಾರ್ಗಸೂಚಿಗಳೊಂದಿಗೆ ಯಾವ ರೀತಿ ಶಿಸ್ತುಕ್ರಮಗಳನ್ನು ಪಾಲನೆ ಮಾಡಬೇಕು ಎನ್ನುವುದರ ಕುರಿತು ಹಿರಿಯ ಅಧಿಕಾರಿಗಳಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಈಗಾಗಲೇ ನಿರ್ದೇಶನ ನೀಡಿದ್ದಾರೆ.
ಆರೋಗ್ಯಕರ ಚರ್ಚೆ ಬಗ್ಗೆ ಸ್ಪೀಕರ್ ವಿಶ್ವಾಸ:
Recommended Video
ಕೊರೊನಾವೈರಸ್ ಬಿಕ್ಕಟ್ಟಿನ ನಡುವೆಯೂ ಸಂಸತ್ ಮುಂಗಾರು ಅಧಿವೇಶನವನ್ನು ನಡೆಸಲಾಗುತ್ತಿದ್ದು, ಸರ್ವ ಸದಸ್ಯರು ಭಾಗಿಯಾಗುವ ನಿರೀಕ್ಷೆಯಿದೆ. ಅಧಿವೇಶನ ಸಂದರ್ಭಗಳಲ್ಲಿ ಸರ್ವಪಕ್ಷದ ಸದಸ್ಯರು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುವ ಮೂಲಕ ಆರೋಗ್ಯಕರ ಚರ್ಚೆಗೆ ಅವಕಾಶ ಮಾಡುವಂತೆ ಲೋಕಸಭಾ ಸಭಾಪತಿ ಓಂ ಬಿರ್ಲಾ ಮನವಿ ಮಾಡಿಕೊಂಡಿದ್ದಾರೆ. ಸೋಮವಾರ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬಿರುಸಿನ ಬಾಣಗಳನ್ನು ಬೀಸುವುದಕ್ಕೆ ಪ್ರತಿಪಕ್ಷಗಳೂ ಸಿದ್ಧವಾಗಿವೆ. ಭಾರತದ ಜಿಡಿಪಿ, ನಿರುದ್ಯೋಗ ಸಮಸ್ಯೆ, ಕೊವಿಡ್-19 ಬಿಕ್ಕಟ್ಟು ಮತ್ತು ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸುವುದಕ್ಕೆ ವಿರೋಧಪಕ್ಷಗಳು ಅಣಿಯಾಗಿವೆ.