ಲಂಚ ತೆಗೆದುಕೊಂಡವರಿಗಷ್ಟೇ ಅಲ್ಲ, ಕೊಟ್ಟವರಿಗೂ ಕಠಿಣ ಶಿಕ್ಷೆ
ನವದೆಹಲಿ, ಜುಲೈ 25: ಲಂಚ ತೆಗೆದುಕೊಳ್ಳುವವರಷ್ಟೇ ಅಲ್ಲ, ಕೊಡುವವರೂ ಶಿಕ್ಷಾರ್ಹರು! ಇನ್ನು ಮೇಲೆ ನೀವೇನಾದರೂ ಲಂಚ ನೀಡಿದರೆ ಕಂಬಿ ಎಣಿಸಬೇಕಾದೀತು, ಹುಷಾರು!
ಲೋಕಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಮಂಗಳವಾರ 'ಭ್ರಷ್ಟಾಚಾರ ನಿರ್ಮೂಲನೆ(ತಿದ್ದುಪಡಿ) ಮಸೂದೆ- 2018' ಅನ್ನು ಜಾರಿಗೆ ತರಲು ನಿರ್ಧರಿಸಲಾಯಿತು.
ಸರ್ಕಾರಿ ಕಚೇರಿಯಲ್ಲಿ ಹಣ ಕೇಳಿದ್ರೆ ಹುಷಾರ್: ಎಸಿಬಿಯಿಂದ ಸಭೆ
ಈ ಮಸೂದೆಯ ಪ್ರಕಾರ, ಯಾವುದೇ ಸರ್ಕಾರಿ ಅಧಿಕಾರಿಗೆ ಲಂಚ ನೀಡಿದರೆ, ಲಂಚ ಪಡೆದ ಅಧಿಕಾರಿಗೂ ಮತ್ತು ಲಂಚ ನೀಡಿದವರಿಗೂ ಶಿಕ್ಷೆ ನೀಡಬಹುದಾಗಿದೆ. ಇಬ್ಬರೂ ಅಪರಾಧದಲ್ಲಿ ಸಮಾನ ಪಾಲಿದಾರರೆಂದು ನಿರ್ಧರಿಸಿ, ಈ ಅಪರಾಧಕ್ಕೆ ಕನಿಷ್ಠ 6 ತಿಂಗಳಿನಿಂದ 3 ರಿಂದ 7 ವರ್ಷದ ವರೆಗೆ ಜೈಲುಶಿಕ್ಷೆ ನೀಡಬಹುದಾಗಿದೆ. ಜೊತೆಗೆ ದಂಡ ಸಹ. ಒಮ್ಮೆ ಲಂಚ ನೀಡಿದ್ದು, ಅಥವಾ ಪಡೆದಿದ್ದು ಸಾಬೀತಾಗಿ ಜೈಲಿಗೆ ಹೋಗಿ ಬಂದ ನಂತರವೂ ಮತ್ತೆ ಅದೇ ತಪ್ಪನ್ನು ಮಾಡಿದರೆ ಅಂಥವರಿಗೆ 5 ರಿಂದ 10 ವರ್ಷದವರೆಗೆ ಶಿಕ್ಷೆ ನೀಡಲಾಗುತ್ತದೆ.
ಈ ಮಸೂದೆಯನ್ನು ಈಗಾಗಲೇ ರಾಜ್ಯ ಸಭೆಯಲ್ಲಿ ಮಂಡಿಸಲಾಗಿದೆ. ಇದರೊಟ್ಟಿಗೆ ಸ್ವಹಿತಕ್ಕಾಗಿ ಬೇರೆಯವರಿಗೆ ನೀಡುವ 'ಉಡುಗೊರೆ' ಸಹ ಭ್ರಷ್ಟಾಚಾರದ ಪಟ್ಟಿಗೇ ಸೇರುತ್ತವೆ ಎನ್ನಲಾಗಿದೆ.
ಲೋಕಸಭೆಯಲ್ಲಿ ನಡೆಯುತ್ತಿರುವ 18 ದಿನಗಳ ಮುಂಗಾರು ಅಧಿವೇಶನ ಜು.18 ರಿಂದ ಆರಂಭವಾಗಿದ್ದು ಆಗಸ್ಟ್ 10 ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹಲವು ಮಹತ್ವದ ಮಸೂದೆಗಳು ಜಾರಿಗೆ ಬರುವ ಸಾಧ್ಯತೆ ಇದೆ.