ಬಡವರ ಬಗ್ಗೆ ಹೇಳಿಕೆ:ಕೇಂದ್ರ ಸಚಿವರ ಬೆಂಡೆತ್ತಿದ ಮೋದಿ
ನವದೆಹಲಿ / ಗ್ವಾಲಿಯರ್, ನ 23: ಬಡವರ ಬದುಕಿನ ಶೈಲಿ ನಿಮಗೆ ಆಷ್ಟು ತಾತ್ಸಾರವೇ? ಬಡವರನ್ನು ಹೀಯಾಳಿಸುವ ನಿಮ್ಮ ಹೇಳಿಕೆ ಖಯಾಲಿಗೋ ಅಥವಾ ಪ್ರಚಾರ ಗಿಟ್ಟಿಸಲೋ? ಕೇಂದ್ರ ಸಚಿವರಾಗಿ ನಿಮಗೆ ಜವಾಬ್ದಾರಿ ಬೇಡವೇ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.
ಮಧ್ಯಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, ಯುಪಿಎ ಸರಕಾರದಲ್ಲಿರುವ ನೀವು ಮಹಾನ್ ಜ್ಞಾನಿ ಮಿನಿಸ್ಟರ್. ನಿಮ್ಮಂತಹ ಜವಾಬ್ದಾರಿಯುತ ಸಚಿವರ ಬಾಯಿಂದ ಬರುವ ಮಾತೇ ಇದು. ಜನ ನಿಮ್ಮನ್ನು ಮತ್ತು ನಿಮ್ಮ ಸರಕಾರವನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ ಎಂದು ಟೀಕಿಸಿದ್ದಾರೆ.
ಈ ಹಿಂದೆ ನಿಮ್ಮದೇ ಪಕ್ಷದ ನಾಯಕರು ಐದು ರೂಪಾಯಿ ಮತ್ತು ಹತ್ತು ರೂಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಬಹುದೆಂದು ಹೇಳಿಕೆ ನೀಡಿದ್ದರು. ಸಚಿವರಾಗಿ ನಿಮಗೆ ಮತ್ತು ನಿಮ್ಮ ಸಚಿವರುಗಳಿಗೆ ಧವಸ ದಾನ್ಯಗಳ ಬೆಲೆ ಎಷ್ಟಿದೆ ಎಂದು ತಿಳಿದಿದೆಯೇ?
ಈರುಳ್ಳಿ ಬೆಲೆ ಏರಿಕೆಗೆ ಗುಜರಾತಿನ ಕಛ್ ಭಾಗದಲ್ಲಿ ಈರುಳ್ಳಿ ಬೆಳೆಯುವುದು ಕಮ್ಮಿಯಾಗಿದೆ ಎಂದು ಹೇಳಿಕೆ ನೀಡುವ ನಿಮಗೆ, ಕಛ್ ಒಂದು ಮರುಭೂಮಿ ಅನ್ನೋ ವಿಚಾರ ತಿಳಿಯದ 'ಕೇಂದ್ರ ಸರಕಾರದ ಮಹಾನ್ ಜ್ಞಾನಿ ಸಚಿವ'ರು ನೀವು ಎಂದು ಲೇವಡಿ ಮಾಡಿದ ಮೋದಿ, ರೂಪಾಯಿ ಅಪಮೌಲ್ಯ ಮತ್ತು ಪದಾರ್ಥಗಳ ಬೆಲೆ ಗಗನಕ್ಕೇರಲು ಕಾರಣರಾಗಿರುವ ಯುಪಿಎ ಸರಕಾರಕ್ಕೆ ಬಡವರ ಮತ್ತು ಬಡತನದ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೇ ಪ್ರಶ್ನಿಸಿದ್ದಾರೆ.
ಬಡವರು ಎರಡು ಪಲ್ಯ ತಿನ್ನುತ್ತಿದ್ದಾರೆ: ಅಗತ್ಯ ವಸ್ತುಗಳ ಬೆಲೆ ಏರಲು ಕೇಂದ್ರ ಸರಕಾರವನ್ನು ದೂರಿದರೆ ಏನು ಪ್ರಯೋಜನ? ಬಡವರ ಬದುಕಿನ ಶೈಲಿ ಬದಲಾಗಿದೆ. ಒಂದು ಪಲ್ಯ ತಿನ್ನುತ್ತಿದ್ದವರು ಈಗ ಎರಡು ಪಲ್ಯ ತಿನ್ನಲಾರಂಭಿಸಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಉಡಾಫೆಯ ಹೇಳಿಕೆಯನ್ನು ನೀಡಿದ್ದರು.
ಈ ಹಿಂದೆ ಬಡವರು ರೋಟಿ ಅಥವಾ ಅನ್ನದ ಜೊತೆ ಒಂದು ಪಲ್ಯ ತಿನ್ನುತ್ತಿದ್ದರು. ಈಗ ಅವರ ಆದಾಯ ಜಾಸ್ತಿಯಾಗಿದೆ, ಕಿಸೆಯಲ್ಲಿ ದುಡ್ಡು ಜಾಸ್ತಿಯಿದೆ. ಒಂದು ಪಲ್ಯದ ಬದಲು ಎರಡು ಪಲ್ಯ ತಿನ್ನಲಾರಂಭಿಸಿದ್ದಾರೆ.
ರೈತರು ಸರಿಯಾಗಿ ತರಕಾರಿ ಬೆಳೆಯುತ್ತಿಲ್ಲ. ಹಾಗಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ ಎಂದು ಕಪಿಲ್ ಸಿಬಲ್ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.