ಮೋದಿಯವರ 'ಮನ್ ಕಿ ಬಾತ್' ಪುಸ್ತಕದ ರೂಪದಲ್ಲಿ
ಪ್ರಧಾನಿಯವರ ಧ್ವನಿಯಲ್ಲಿ ಮೂಡಿಬರುತ್ತಿದ್ದ 'ಮನ್ ಕಿ ಬಾತ್' ಇದೀಗ ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದು, ನಾಳೆ (ಮೇ 26, ಶುಕ್ರವಾರ) ಲೋಕಾರ್ಪಣೆಗೊಳ್ಳಲಿದೆ. ತನ್ನಿಮಿತ್ತ, ಮನ್ ಕಿ ಬಾತ್ ನಡೆದು ಬಂದ ಹಾದಿಯ ಕುರಿತು ಕಿರು ಅವಲೋಕನ ಇಲ್ಲಿದೆ.
ನವದೆಹಲಿ, ಮೇ 25: ಪ್ರಧಾನಿಯವರ ಧ್ವನಿಯಲ್ಲಿ ಮೂಡಿಬರುತ್ತಿದ್ದ 'ಮನ್ ಕಿ ಬಾತ್' ಇದೀಗ ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದು, ನಾಳೆ (ಮೇ 26, ಶುಕ್ರವಾರ) ಲೋಕಾರ್ಪಣೆಗೊಳ್ಳಲಿದೆ. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ಮಧ್ಯಾಹ್ನ 12 ಗಂಟೆಗೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ತನ್ನಿಮಿತ್ತ, ಮನ್ ಕಿ ಬಾತ್ ನಡೆದು ಬಂದ ಹಾದಿಯ ಕುರಿತು ಕಿರು ಅವಲೋಕನ ಇಲ್ಲಿದೆ.
ಸರ್ಕಾರ ಮತ್ತು ಜನತೆ ಬೇರೆ ಬೇರೆ ದ್ವೀಪವಾದರೆ ರಾಷ್ಟ್ರದ ಅಭಿವೃದ್ಧಿಯೂ ನಡೆಗಡ್ಡೆಯಲ್ಲಿ ನಿಲ್ಲುತ್ತದೆ. ಅದಕ್ಕೆಂದೇ ಸರ್ಕಾರ ಮತ್ತು ಜನರ ನಡುವಲ್ಲಿ ಬಂಧ ಬೆಸೆಯಲ್ಪಡಬೇಕು. ಸರ್ಕಾರ ಮತ್ತು ಜನರ ನಡುವಲ್ಲಿ ಸಂವಹನ ಏರ್ಪಡದೆ ಪ್ರಜಾಪ್ರಭುತ್ವ ಯಶಸ್ವಿವಾಗುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಆರಂಭಿಸಿದ ಕಾರ್ಯಕ್ರಮ ಮನ್ ಕಿ ಬಾತ್.[ಬಸವಣ್ಣ, ರಾಮಾನುಜರ ನೆನೆದು ಬೇಸಿಗೆಗೆ ತಂಪೆರೆದ ಮನ್ ಕೀ ಬಾತ್]
2014, ಅಕ್ಟೋಬರ್ 03 ಅಂದರೆ ವಿಜಯ ದಶಮಿಯ ಶುಭದಿನದಂದು ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ರೂಪದಲ್ಲಿ ತಮ್ಮ ಮನದಿಂಗಿತವನ್ನು ಸಮಸ್ತ ಭಾರತೀಯ ಮುಂದಿಟ್ಟಿದ್ದರು. ನಂತರ ಪ್ರತಿ ತಿಂಗಳೂ ನಡೆಯುತ್ತಿದ್ದ ಮನ್ ಕಿ ಬಾತ್ ನಲ್ಲಿ ನಮ್ಮ ಬಸವಣ್ಣ, ಕೊಪ್ಪಳದ ಮಲ್ಲಮ್ಮ, ಅಜಬ್ ಪುರದ ಗಾಯತ್ರಿ ಸಿಂಗ್ ಮಾತ್ರವಲ್ಲದೆ ಇಸ್ರೋದ ಕ್ಷಿಪಣಿಗಳೂ ಹಾದುಹೋಗಿವೆ!
ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ಕಾದು ಕುಳಿತುಕೊಳ್ಳುವ ಮಟ್ಟಿಗೆ ಆ ಕಾರ್ಯಕ್ರಮ ಪ್ರಸಿದ್ಧಿ ಪಡೆಯುವುದಕ್ಕೆ ಕಾರಣ, ಅದು ದೇಶದ ಉದ್ದಗಲವನ್ನೂ ಸುಲಭವಾಗಿ ತಲುಪಿದ್ದು. ಶಿಕ್ಷಣ ಮತ್ತು ನೈರ್ಮಲ್ಯಗಳನ್ನು ಮೂಲ ಗುರಿಯನ್ನಾಗಿಸಿಕೊಂಡು ಆರಂಭವಾದ ಮನ್ ಕಿ ಬಾತ್ ಕಾರ್ಯಕ್ರಮ ಜನಪ್ರಿಯತೆಗಳಿಸುತ್ತಿದ್ದಂತೆಯೇ ತನ್ನ ಆಯಾಮವನ್ನು ಹೆಚ್ಚೆಚ್ಚು ವಿಸ್ತರಿಸಿಕೊಳ್ಳುತ್ತಾ ಹೋಯ್ತು.
ರೇಡಿಯೋನೇ ಯಾಕೆ?
ಇಂದಿಗೂ ಭಾರತ ಎಷ್ಟೋ ಹಳ್ಳಿಗಳಿಗೆ ವಿದ್ಯುತ್ ಇಲ್ಲ, ಟಿವಿಯ ಪರಿಚಯವೂ ಇಲ್ಲ, ವೃತ್ತ ಪತ್ರಿಕೆ ಓದುವುದಕ್ಕೆ ಬರುವುದಿಲ್ಲ. ಅಂಥವರಿಗೆಲ್ಲ ಮನರಂಜನೆ ಎಂದಿದ್ದರೆ ಅದು ರೇಡಿಯೋ ಮಾತ್ರ. ಈ ವಿಷಯವನ್ನು ಮನಗಂಡಿದ್ದ ಸರ್ಕಾರ, ಮನ್ ಕಿ ಬಾತ್ ಗೆ ರೇಡಿಯೋವನ್ನೇ ಆರಿಸಿಕೊಂಡಿತು. ರೇಡಿಯೋ ಮೂಲಕ ಮಾತ್ರವೇ ದೇಶದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಬಹುದು ಎಂಬ ಸರ್ಕಾರದ ನಂಬಿಕೆ ಸುಳ್ಳಾಗಲಿಲ್ಲ.
ಸಲಹೆ-ಸೂಚನೆಗಳು
ಆರಂಭವಾದ ಎರಡೂವರೆ ವರ್ಷಗಳಲ್ಲಿ ಮನ್ ಕಿ ಬಾತ್ ವೆಬ್ ಸೈಟ್ ಗೆ ಶಿಕ್ಷಣ ಮತ್ತು ನೈರ್ಮಲ್ಯ ಕಳಕಳಿಯ ಕುರಿತು 61,000 ಕ್ಕೂ ಹೆಚ್ಚು ಸಲಹೆ-ಸೂಚನೆಗಳು ಬಂದಿದ್ದವು, ಹೊಸ ಯೋಜನೆಗಳ ಬಗ್ಗೆ ಕ್ರಿಯಾಶೀಲ ಉಪಾಯಗಳನ್ನು ಹಲವರು ಹಂಚಿಕೊಂಡಿದ್ದರು. ಶ್ರೋತೃಗಳ 1.43 ಧ್ವನಿಮುದ್ರಿಕೆಗಳನ್ನೂ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಲಾಗಿತ್ತು.['ಮನ್ ಕಿ ಬಾತ್' ನಲ್ಲಿ ಮೋದಿ ಹೊಗಳಿದ ಬಾಲಕಿ ಯಾರು?]
ಸಾಮಾನ್ಯರ ಅಸಾಮಾನ್ಯ ಸಾಧನೆ
ಪುಟ್ಟ ಕುಗ್ರಾಮವೊಂದರಲ್ಲಿ ಶೌಚಾಲಯ ಕಟ್ಟಿಸುವುದಕ್ಕಾಗಿ ಹೋರಾಡಿದ ವೃದ್ಧೆ, ತನ್ನೂರಿನ ಮಕ್ಕಳಿಗೆ ಶಿಕ್ಷಣ ಸಿಗಬೇಕೆಂದು ಹೋರಾಡಿದ ಯುವಕ, ಇಂಥ ಸಾಮಾನ್ಯ ಜನರ ಅಸಾಮಾನ್ಯ ಸಾಧನೆಗಳನ್ನು ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿ ತಮ್ಮ ಮಾತುಗಳಲ್ಲಿ ಉಲ್ಲೇಖಿಸಿ, ಅವರಲ್ಲಿ ಪುಳಕವನ್ನುಂಟುಮಾಡಿದರು. ಪ್ರಧಾನಿಯವರ ಭಾಷಣದಲ್ಲಿ ಉಲ್ಲೇಖಗೊಳ್ಳಬೇಕೆಂದೇ ಹಲವರು ಇಂಥ ಸೇವಾಕಾರ್ಯದಲ್ಲಿ ತೊಡಗಿದ್ದರೂ ಅಚ್ಚರಿಯೇನಿಲ್ಲ! ಹಾಗಿದ್ದು ಮೋದಿ ಚಾರ್ಮ್!
ಅರಿವು ಮೂಡುವ ಯತ್ನ
ಡಿಜಿಧನ್, ಭೀಮ್ ಆಪ್, ಜನಧನ್ ಮುಂತಾದ ಯೋಜನೆಗಳ ಬಗ್ಗೆ ಸ್ವತಃ ಪ್ರಧಾನಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ದೇಶದ ಪ್ರಗತಿಗಾಗಿ ಹಲವರು ನೀಡಿದ ಉತ್ತಮ ಸಲಹೆಗಳನ್ನು, ಕಳಕಳಿಯ ನುಡಿಗಳನ್ನು ಆರಿಸಿ ಮನ್ ಕಿ ಬಾತ್ ನಲ್ಲಿ ಪ್ರಸಾರವನ್ನೂ ಮಾಡಲಾಯ್ತು. ಇದು ಈ ಕಾರ್ಯಕ್ರಮ ಮತ್ತಷ್ಟು ಪ್ರಸಿದ್ಧಿ ಪಡೆಯುವುದಕ್ಕೆ ಕಾರಣವಾಯ್ತು.[ಮೋದಿ ಮನ್ ಕಿ ಬಾತ್ ನಲ್ಲಿ ಇಸ್ರೋ, ಕ್ಷಿಪಣಿ, ಡಿಜಿಟಲ್ ಮನಿ, ಕೃಷಿ]
ಒಬಾಮಾ-ಮೋದಿ ಜುಗಲ್ ಬಂಧಿ
2015, ಜನವರಿ 27 ರಂದು ಪ್ರಸಾರವಾದ ಮನ್ ಕಿ ಬಾತ್ ಗೆ ಅಮೆರಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಸಹ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮದ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದ್ದರು.
|
ರೇಡಿಯೋ ಮೂಲಕ ಸಾಮಾಜಿಕ ಕ್ರಾಂತಿ
ರೇಡಿಯೋ ಮೂಲಕ ಸಾಮಾಜಿಕ ಕ್ರಾಂತಿ ಹುಟ್ಟುಹಾಕಿದ್ದ ಪ್ರಧಾನಿಯವರ ಮನ್ ಕಿ ಬಾತ್ ಪುಸ್ತಕದ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.[ಕೊಪ್ಪಳದ ಮಲ್ಲಮ್ಮ ಬಗ್ಗೆ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಮೋದಿ]