ಮೋದಿ ಕ್ಷಮೆಯಾಚನೆಗೆ ಒತ್ತಾಯಿಸಿ ಸದನದಲ್ಲಿ ಪ್ರತಿಪಕ್ಷಗಳ ಪಟ್ಟು
ಪ್ರತಿಪಕ್ಷಗಳು ಕಾಳಧನದ ಪರವಾಗಿ ಪ್ರತಿಭಟಿಸುತ್ತಿವೆ ಎಂದು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಖಂಡಿಸಿ ಪ್ರತಿಪಕ್ಷಗಳು ಸದನದಲ್ಲಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು ಮೋದಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿವೆ.
ನವದೆಹಲಿ, ನವೆಂಬರ್, 25: 'ಕಪ್ಪು ಹಣದ ಪರವಾಗಿ ಪ್ರತಿಪಕ್ಷಗಳು ಹೋರಾಟ ನಡೆಸುತ್ತಿವೆ' ಎಂದು ಪ್ರಧಾನಿ ಮೋದಿ ನೀಡಿರುವ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿವೆ.
ಸಂವಿಧಾನ ದಿನ ಹಿನ್ನೆಲೆಯಲ್ಲಿ ಸಂಸತ್ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ "ಭಾರತೀಯ ಸಂವಿಧಾನ ರಚನೆ ಮತ್ತು ಭಾರತ ಸಂವಿಧಾನ ಪರಿಷ್ಕೃತ ಆವೃತ್ತಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.[ಸಮೀಕ್ಷೆ : ಅಪನಗದೀಕರಣದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ]
"ಸರ್ಕಾರ ಪೂರ್ವ ತಯಾರಿ ಇಲ್ಲದೆ ನೋಟು ನಿಷೇಧ ಮಾಡಿದೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ. ನೋಟು ನಿಷೇಧದ ಬಗ್ಗೆ ಪ್ರತಿಪಕ್ಷಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅವರು ಅಕ್ರಮವಾಗಿ ಕೂಡಿಟ್ಟ ಹಣವನ್ನು ಸಕ್ರಮಮಾಡಿಕೊಳ್ಳಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶಗೊಂಡಿವೆ".
"ಪ್ರತಿಪಕ್ಷಗಳ ಪ್ರತಿಭಟನೆ ಏನಿದ್ದರೂ ಕಪ್ಪು ಹಣದ ಪರವಷ್ಟೆ ಎಂದು ಮೋದಿ ಹೇಳಿಕೆ ನೀಡಿದ್ದರು". ಪ್ರಧಾನಿಯ ಈ ಹೇಳಿಕೆ ಖಂಡಿಸಿ ರಾಜ್ಯ ಸಭೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಶುಕ್ರವಾರ ಅಧಿವೇಶನದಲ್ಲಿ ಆಗ್ರಹಿಸಿದರು.
ಅಜಾದ್ ಅವರ ಆಕ್ರೋಶಕ್ಕೆ ಧ್ವನಿಗೂಡಿಸಿದ ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಅವರು "ಪ್ರಧಾನಿ ಕೂಡಲೇ ರಾಜ್ಯ ಸಭೆ ಸದನದಲ್ಲಿ ಭಾಗವಹಿಸಿ ಪ್ರತಿಪಕ್ಷಗಳಲ್ಲಿ ತಮ್ಮ ಹೇಳಿಕೆ ಕುರಿತು ಕ್ಷಮೆ ಯಾಚಿಸಬೇಕು ಎಂದು ಹೇಳಿದರು."
ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು ಸಹ ಗುರುವಾರ ನೋಟು ನಿಷೇಧದ ಬಗ್ಗೆ ಪ್ರತಿಕ್ರಿಯೆ ನೀಡಿ."ಸರ್ಕಾರದ ಈ ನಿರ್ಧಾರ ಸರಿ ಅಲ್ಲ, ಇದರಿಂದ ಕನಿಷ್ಟ ಶೆ.2ರಷ್ಟು ಜಿಡಿಪಿ ಕುಸಿಯುವ ಸಾಧ್ಯತೆ ಇದೆ" ಎಂದು ತಿಳಿಸಿದ್ದರು.
ಸಂಸತ್ ಚಳಿಗಾಲದ ಅಧಿವೇಶನ ಆರಂಭವಾದಗಿನಿಂದಲೂ ಸಹ ನೋಟು ನಿಷೇಧ ವಿರೋಧಿಸಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಪ್ರತಿಭಟನೆ ಮಾಡುತ್ತಿವೆ.
ಶುಕ್ರವಾರದಿಂದ ನಿಷೇಧಿತ ನೋಟುಗಳನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ. ಆದರೆ ಹಳೆಯ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಎಂದು ತಿಳಿಸಿದೆ.