ರಂಜಾನ್ ಪ್ರಾರ್ಥನೆ ಕುರಿತು ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ ಸರ್ಕಾರ
ದೆಹಲಿ, ಏಪ್ರಿಲ್ 21: ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಜನರು ಗುಂಪು ಸೇರಬಾರದು ಹಾಗೂ ಧಾರ್ಮಿಕ ಪ್ರಾರ್ಥನಾಕೂಟಗಳಿಗೆ ಅವಕಾಶ ಇರುವುದಿಲ್ಲ. ಆದರೂ, ಕೆಲವು ಕಡೆ ಪೊಲೀಸರ ಕಣ್ಣು ತಪ್ಪಿಸಿ ಮಸೀದಿಯಲ್ಲಿ ನಮಾಜ್ ಮಾಡಿರುವ ಘಟನೆ ವರದಿಯಾಗಿದೆ.
ಇದೀಗ, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಚ್ಚರಿಸಿದೆ. ಗುರುವಾರದಿಂದ ರಂಜಾನ್ ಹಬ್ಬ ಆರಂಭವಾಗುತ್ತಿದೆ. ಹಾಗಾಗಿ, ಎಲ್ಲಿಯೂ ಸಾಮೂಹಿಕ ಪ್ರಾರ್ಥನೆಗಳು ನಡೆಯದಂತೆ ಎಚ್ಚರ ವಹಿಸಿ ಎಂದು ಸೂಚಿಸಿದೆ.
ಭಾರತವು ಮುಸ್ಲಿಮರಿಗೆ "ಸ್ವರ್ಗ'ವಿದ್ದಂತೆ, ಅವರ ಹಕ್ಕುಗಳೂ ಸುರಕ್ಷಿತ: ನಖ್ವಿ
ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ರಂಜಾನ್ ಹಬ್ಬದಲ್ಲೂ ಜನರು ಮನೆಯಲ್ಲಿ ಇದ್ದು ಪ್ರಾರ್ಥನೆ ಮಾಡಿಕೊಳ್ಳಬೇಕು ಎಂದು ಮುಸ್ಲಿಂ ಮುಖಂಡರ ಮೂಲಕ ಜನರಿಗೆ ಮನವರಿಕೆ ಮಾಡಿ ಕೊಡಲು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸಲಹೆ ನೀಡಿದೆ.
ಮುಸ್ಲಿಂ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡು, ಸಾಮೂಹಿಕ ಪ್ರಾರ್ಥನೆಗಳಿಗೆ ಅವಕಾಶ ಕೊಡದಂತೆ ಗಮನ ಹರಿಸಿ ಎಂದು ಸರ್ಕಾರ ನಿರ್ದೇಶಿಸಿದೆ.
ರಂಜಾನ್: ಲಾಕ್ಡೌನ್ ನಿಯಮ ಪಾಲಿಸಲು ಜಮೈತ್ ಮುಸ್ಲಿಂ ಸಂಘಟನೆ ಮನವಿ
ರಂಜಾನ್ ಆರಂಭವಾದ ಮೇಲೆ ಕೆಲವು ಕಡೆ, ಮಸೀದಿಗೆ ತೆರಳಿ ಸಮೂಹಿಕ ಪ್ರಾರ್ಥನೆ ಸಲ್ಲಿಸುವ ಸಾಧ್ಯತೆ ಇದೆ ಎಂಬ ಮಾಹಿತಿ, ಕೇಂದ್ರ ಸರ್ಕಾರಕ್ಕೆ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯಗಳು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.
ಈಗಾಗಲೇ ಕೇಂದ್ರ ಸರ್ಕಾರ ಹೊರಡಿಸಿರುವ ಲಾಕ್ಡೌನ್ ಮಾರ್ಗಸೂಚಿ ಪ್ರಕಾರ, ಮೇ 3ರ ತನಕ ಯಾವುದೇ ಧಾರ್ಮಿಕ ಸಭೆ, ಕಾರ್ಯಕ್ರಮಗಳು ನಡೆಸುವಂತಿಲ್ಲ ಎಂದು ಗೃಹ ಇಲಾಖೆ ಆದೇಶ ನೀಡಿದೆ.