'ಮೋದಿ ಸರಕಾರದ ವೈಫಲ್ಯ ಮುಚ್ಚಲು ಏಕರೂಪ ನಾಗರಿಕ ಸಂಹಿತೆ'
ನವದೆಹಲಿ, ಅಕ್ಟೋಬರ್ 13: ಎಲ್ಲ ಮುಸ್ಲಿಮರು ಇದಕ್ಕೆ ಪ್ರತಿಕ್ರಿಯಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಆಂತರಿಕ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ. ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕಾಗಿ ಕಾನೂನು ಆಯೋಗ ವಿತರಿಸಿರುವ ಪ್ರಶ್ನಾವಳಿಗಳನ್ನು ಮಂಡಳಿ ತಿರಸ್ಕರಿಸಿದೆ.
ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಕಾನೂನು ಆಯೋಗದ ಪ್ರಶ್ನೆಗಳಿಗೆ ಉತ್ತರಿಸದಿರಲು ಹಾಗೂ ಆಯೋಗವನ್ನು ಬಹಿಷ್ಕರಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್) ತೀರ್ಮಾನ ಕೈಗೊಂಡಿದೆ.[ಇನ್ನು ಮುಂದೆ ಪ್ರತಿ ವರ್ಷ ಟಿಪ್ಪು ಜಯಂತಿ, ನವೆಂಬರ್ 10 ದಿನ ನಿಗದಿ]
ವಿಭಜನೆ ಉದ್ದೇಶ: ಟ್ರಿಪಲ್ ತಲಾಖ್, ನಿಖಾ ಹಲಾಲ್ ಹಾಗೂ ಬಹುಪತ್ನಿತ್ವ ಇಸ್ಲಾಮ್ ಗೆ ಅವಿಭಾಜ್ಯ ಪದ್ಧತಿಯಲ್ಲ ಹಾಗೂ ಧಾರ್ಮಿಕ ಆಚರಣೆಗೆ ಅವು ಮುಖ್ಯವಲ್ಲ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿದ ಮರು ದಿನ ಈ ನಿರ್ಧಾರ ಹೊರಬಿದ್ದಿದೆ. ಏಕರೂಪ ನಾಗರಿಕ ಸಂಹಿತೆಯೂ ವಿಭಜನೆ ಉದ್ದೇಶ ಹೊಂದಿದೆ. ಇದರಿಂದ ಅಶಾಂತಿ ಉದ್ಭವಿಸುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರೆಹ್ಮಾನಿ ಹೇಳಿದ್ದಾರೆ.
ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು. ಯಾವುದೇ ನಾಗರಿಕರ ಸಂಸ್ಕೃತಿ ಹಾಗೂ ಧರ್ಮದ ಆಚರಣೆಗೆ ಸಂವಿಧಾನ ಅವಕಾಶ ನೀಡಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆಯಿಂದ ಈ ದೇಶಕ್ಕೆ ಒಳಿತಾಗುವುದಿಲ್ಲ. ಈ ದೇಶದಲ್ಲಿ ಅನೇಕ ಸಂಸ್ಕೃತಿಗಳಿವೆ. ಎಲ್ಲವನ್ನೂ ಗೌರವಿಸಬೇಕು ಎಂದು ಅವರು ಹೇಳಿದ್ದಾರೆ.[ಬೆಂಗಳೂರಲ್ಲಿ ಉದ್ಘಾಟನೆಗೆ ಸಜ್ಜಾದ ಹಜ್ ಘರ್ : ಸಚಿವ ಬೇಗ್]
ಆಡಳಿತ ವೈಫಲ್ಯ ಮುಚ್ಚುವ ಯತ್ನ: ಮೋದಿ ಸರಕಾರವು ಮೂವತ್ತು ತಿಂಗಳ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಗಡಿಯ ರಕ್ಷಣೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅದರ ಬದಲು ಆಂತರಿಕವಾಗಿ ಅಶಾಂತಿ ತರಲು ಯತ್ನಿಸುತ್ತಿದ್ದಾರೆ. ಇಡೀ ದೇಶದ ಮೇಲೆ ಒಂದು ಸಿದ್ಧಾಂತವನ್ನು ಹೇರಲು ಸರಕಾರ ಯತ್ನಿಸುತ್ತಿದೆ ಎಂದು ರೆಹ್ಮಾನಿ ಕಿಡಿ ಕಾರಿದ್ದಾರೆ.
ಅಕ್ಟೋಬರ್ 7ರಂದು ಕಾನೂನು ಆಯೋಗ ಬಿಡುಗಡೆ ಮಾಡಿರುವ ಪ್ರಶ್ನಾವಳಿಯಲ್ಲಿ ಹದಿನಾರು ಪ್ರಶ್ನೆಗಳಿವೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೆಹ್ಮಾನಿ, ಕಾನೂನು ಆಯೋಗವು ಕಾನೂನುಬಾಹಿರ ಕೆಲಸ ಮಾಡುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವೈಯಕ್ತಿಕ ಕಾನೂನುಗಳಿವೆ ಹಾಗೂ ಚೆನ್ನಾಗಿ ಕೆಲಸ ಮಾಡುತ್ತಿವೆ. ಆ ರೀತಿ ಕಾನೂನುಗಳಿಂದ ಯಾರಿಗಾದರೂ ಏನು ತೊಂದರೆ ಎಂದು ಅವರು ಪ್ರಶ್ನಿಸಿದ್ದಾರೆ.[ಝಾಕೀರ್ ನಾಯ್ಕ್ ತಲೆಗೆ ಬೆಲೆ ಕಟ್ಟಿದ ಸಾಧ್ವಿ ಪ್ರಾಚಿ]
ಹಿಂದೂಗಳಲ್ಲಿ ವಿಚ್ಛೇದನ ಹೆಚ್ಚು: ಇಂಥ ನಡೆಗಳು ಮುಸ್ಲಿಮರ ಮೇಲೆ ದಾಳಿ ನಡೆಸುವ ಉದ್ದೇಶದಿಂದಲೇ ಕೈಗೊಂಡವು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರವನ್ನು ಕಡಿಮೆ ಎಂಬಂತೆ ಚಿತ್ರಿಸಲಾಗಿದೆ. ಟ್ರಿಪಲ್ ತಲಾಖ್ ಗೆ ಸಂಬಂಧಿಸಿದಂತೆ ಹೇಳುವುದಾದರೆ, ಹಿಂದೂಗಳಲ್ಲಿ ವಿವಾಹ ವಿಚ್ಛೇದನದ ಪ್ರಮಾಣ ಹೆಚ್ಚಾಗಿದೆ ಎಂದು ರೆಹ್ಮಾನಿ ಹೇಳಿದ್ದಾರೆ.
ಮುಸ್ಲಿಮ್ ವೈಯಕ್ತಿಕ ಕಾನೂನು ಕುರ್ ಆನ್ ಹಾಗೂ ಹದೀಸ್ ಮೇಲೆ ಆಗಿರುವಂಥದ್ದು. ಅದನ್ನು ಮಾರ್ಪಾಟು ಮಾಡುವುದಕ್ಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮೋದೀಜಿ, ಸರ್ವಾಧಿಕಾರ ಹೇರುತ್ತಿದ್ದಾರೆ ಎಂದು ಜಮಾತ್-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಹೇಳಿದ್ದಾರೆ.