ಭಾರತದ ಭಾಗ ಚೀನಾ ಪಾಲಾಗಿದೆ; ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ
ನವದೆಹಲಿ, ಫೆಬ್ರುವರಿ 11: ಲಡಾಖ್ ಗಡಿ ಪರಿಸ್ಥಿತಿ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಕುರಿತು ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರ ಭಾರತದ ಭಾಗವನ್ನು ಚೀನಾಗೆ ಹಸ್ತಾಂತರಿಸುತ್ತಿದೆ ಹಾಗೂ ಅದನ್ನು ಪ್ರಶ್ನಿಸಲು ವಿರೋಧ ಪಕ್ಷಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಗುರುವಾರ ರಕ್ಷಣಾ ಸಚಿವರು ರಾಜ್ಯ ಸಭೆಯಲ್ಲಿ ಲಡಾಖ್ ಗಡಿ ಪರಿಸ್ಥಿತಿ ಕುರಿತು ಪ್ರಸ್ತಾಪ ಮಾಡಿದ್ದು, ಲಡಾಖ್ನ ಪ್ಯಾಂಗಾಂಗ್ ತ್ಸೊ ಸರೋವರದ ಪ್ರದೇಶದಿಂದ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿವೆ ಎಂದು ತಿಳಿಸಿದ್ದರು.
ಪ್ಯಾಂಗಾಂಗ್ ತ್ಸೊದಿಂದ ಭಾರತ-ಚೀನಾ ಸೇನಾ ವಾಪಸ್: ಒಪ್ಪಂದದ 5 ಪ್ರಮುಖ ಅಂಶಗಳು
ಉಭಯ ರಾಷ್ಟ್ರಗಳ ಸಂಧಾನ ಮಾತುಕತೆ ಬಳಿಕ ಗಡಿಯಲ್ಲಿ ಸೇನಾ ಶಿಬಿರಗಳ ಪುನಾರಚನೆ ಮಾಡಿಕೊಳ್ಳಲಾಗುತ್ತಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ದಂಡೆಯ ಫಿಂಗರ್ 8ರ ಪೂರ್ವದಲ್ಲಿ ಚೀನಾ ಸೇನೆ ಇರಿಸಲಿದೆ. ಭಾರತವು ಅದೇ ಪ್ಯಾಂಗಾಂಗ್ ತ್ಸೋ ಸರೋವರದ ಫಿಂಗರ್ 3ರ ಬಳಿ ಶಾಶ್ವತ ನೆಲೆಗಳನ್ನು ಸ್ಥಾಪಿಸಲಿದೆ ಎಂದು ಹೇಳಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಫಿಂಗರ್ 3ರ ಬಳಿ ಶಾಶ್ವತ ನೆಲೆಗಳನ್ನು ಸ್ಥಾಪಿಸಲಿರುವುದಾಗಿ ರಕ್ಷಣಾ ಸಚಿವರು ತಿಳಿಸಿದ್ದಾರೆ. ಆದರೆ ಫಿಂಗರ್ 4 ನಮ್ಮ ನೆಲೆ. ನಾವು ಅಲ್ಲಿರಬೇಕು. ಫಿಂಗರ್ 4ಇಂದ ಫಿಂಗರ್ 3ಗೆ ಸರಿಯಲಾಗಿದೆ. ನಮ್ಮ ಜಾಗವನ್ನು ಮೋದಿ ಸರ್ಕಾರ ಚೀನಾಗೆ ಬಿಟ್ಟುಕೊಟ್ಟಿದೆ ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ಪಡೆಗಳನ್ನು ಏಕೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ? ಪ್ರಧಾನಿ ನರೇಂದ್ರ ಮೋದಿ ಭಾರತದ ಭಾಗವನ್ನು ಚೀನಾಗೆ ನೀಡುತ್ತಿದ್ದಾರೆ ಎಂದು ಮೋದಿ ಸರ್ಕಾರವನ್ನು ಟೀಕಿಸಿ ಮಾತನಾಡಿದರು.
ಚೀನೀಯರ ವಿರುದ್ಧ ನಿಲಲ್ಲು ಸಾಧ್ಯವಾಗದೇ ಪ್ರಧಾನಿ ಹೇಡಿಯಂತಾಗಿದ್ದಾರೆ. ಪ್ರಧಾನಿ ನಮ್ಮ ಸೇನೆಯ ತ್ಯಾಗಕ್ಕೆ ಬೆಲೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಉಭಯ ದೇಶಗಳ ಪಡೆಗಳು ದೈನಂದಿನ ಗಸ್ತು ಚಟುವಟಿಕೆಗಳಿಂದ ದೂರ ಇರುವುದು ಸೇರಿದಂತೆ ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ತೀರದಲ್ಲಿ ಯಾವುದೇ ಸೇನಾ ಚಟುವಟಿಕೆಗಳನ್ನು ನಡೆಸದಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದೆಂದು ಒಪ್ಪಂದಕ್ಕೆ ಬರಲಾಗಿದೆ ಎಂದು ಕೂಡ ರಾಜನಾಥ್ ಸಿಂಗ್ ತಿಳಿಸಿದ್ದರು.