ಮೋದಿ ನನ್ನ ಪ್ರಧಾನಿ ಕೂಡ: ಪಾಕ್ ಸಚಿವನಿಗೆ ಕೇಜ್ರಿವಾಲ್ ತಿರುಗೇಟು
Recommended Video
ನವದೆಹಲಿ, ಜನವರಿ 31: ಭಾರತದ ಕುರಿತು ಹೇಳಿಕೆ ನೀಡಿದ ಪಾಕಿಸ್ತಾನದ ಸಚಿವ ಚೌಧರಿ ಫವಾದ್ ಹುಸೇನ್ ವಿರುದ್ಧ ಹರಿಹಾಯ್ದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ವಿಧಾನಸಭೆ ಚುನಾವಣೆ ದೇಶದ ಆತಂರಿಕ ವಿಚಾರವಾಗಿದೆ ಮತ್ತು ಪ್ರಧಾನಿ ವಿರುದ್ಧದ ಯಾವುದೇ ದಾಳಿಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದ ಪಾಕಿಸ್ತಾನದ ಸಚಿವ ಫವಾದ್ಗೆ ತಿರುಗೇಟು ನೀಡಿರುವ ಅರವಿಂದ್ ಕೇಜ್ರಿವಾಲ್, 'ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ. ಅವರು ನನ್ನ ಪ್ರಧಾನಿ ಕೂಡ. ದೆಹಲಿ ಚುನಾವಣೆಯು ಭಾರತದ ಆಂತರಿಕ ಸಂಗತಿ. ಭಯೋತ್ಪಾದನೆ ಅತಿದೊಡ್ಡ ಸಂಘಟಕರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ' ಎಂದು ಹೇಳಿದ್ದಾರೆ.
ಯುದ್ಧ ನಡೆದರೆ ಭಾರತವು ಒಂದು ವಾರದೊಳಗೇ ಪಾಕಿಸ್ತಾನವನ್ನು ಸೋಲಿಸುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಫವಾದ್ ಹುಸೇನ್, ದೆಹಲಿ ಚುನಾವಣೆಯಲ್ಲಿ ಅವರನ್ನು ಸೋಲಿಸುವಂತೆ ಹೇಳಿದ್ದರು.
ಬಿಜೆಪಿ ಪ್ರಣಾಳಿಕೆ: 2 ರುಗೆ ಗೋಧಿ ಹಿಟ್ಟು, 10 ಲಕ್ಷ ಉದ್ಯೋಗ ಸೃಷ್ಟಿ
'ಪಾಕಿಸ್ತಾನ ಯಾವ ರೀತಿಯೇ ಪ್ರಯತ್ನಿಸಿದರೂ ಭಾರತದ ಏಕತೆಗೆ ಧಕ್ಕೆ ತರಲು ಅವರಿಂದ ಸಾಧ್ಯವಿಲ್ಲ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಮೋದಿ ಸಮತೋಲನ ಕಳೆದುಕೊಂಡಿದ್ದಾರೆ
ಭಾರತದ ಜನರು ಮೋದಿ ಹುಚ್ಚುತನವನ್ನು ಸೋಲಿಸಬೇಕು. ಮತ್ತೊಂದು ರಾಜ್ಯ ಚುನಾವಣೆಯ ಸೋಲಿನ ಭೀತಿಯ ಒತ್ತಡದಲ್ಲಿರುವ ಅವರು, ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿ ಪ್ರಾದೇಶಿಕ ಬೆದರಿಕೆ ಒಡ್ಡುತ್ತಿದ್ದಾರೆ. ಕಾಶ್ಮೀರದ ಕುರಿತಾದ ಆಂತರಿಕ ಮತ್ತು ಬಾಹ್ಯ ಪ್ರತಿಕ್ರಿಯೆಗಳು, ಪೌರತ್ವ ಕಾಯ್ದೆ ಮತ್ತು ವಿಫಲ ಆರ್ಥಿಕತೆಯಿಂದಾಗಿ ಮೋದಿ ತಮ್ಮ ಸಮತೋಲನ ಕಳೆದುಕೊಂಡಿದ್ದಾರೆ' ಎಂದು ಫವಾದ್ ಹುಸೇನ್ ಟೀಕಿಸಿದ್ದರು.
ನಾವು ಪೆನ್ನು ಕೊಟ್ಟರೆ ಅವರು ಗನ್ ಕೊಡುತ್ತಿದ್ದಾರೆ
'ನಾವು ಮಕ್ಕಳ ಕೈಗೆ ಪೆನ್ ಮತ್ತು ಕಂಪ್ಯೂಟರ್ಗಳನ್ನು ಕೊಟ್ಟು, ಅವರ ಕಣ್ಣುಗಳಲ್ಲಿ ಸಾಹಸೋದ್ಯಮದ ಕನಸುಗಳನ್ನು ಬಿತ್ತಿದ್ದೇವೆ. ಆದರೆ ಅವರು ಬಂದೂಕುಗಳು ಮತ್ತು ದ್ವೇಷವನ್ನು ನೀಡುತ್ತಿದ್ದಾರೆ. ನಿಮ್ಮ ಮಕ್ಕಳಿಗೆ ಏನನ್ನು ಕೊಡುವುದನ್ನು ಬಯಸಿದ್ದೀರಿ? ಫೆ. 8ರಂದು ಹೇಳಿ' ಎಂದು ಕೇಜ್ರಿವಾಲ್ ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ದೆಹಲಿ ಚುನಾವಣೆ: ಕಾಂಗ್ರೆಸ್ ಬಗ್ಗೆ ದೇವೇಗೌಡ ಭವಿಷ್ಯ
ಕಠಿಣ ಶ್ರಮವಹಿಸಿದ್ದೇವೆ
'ನೀವು ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲಿಗರಾಗಿದ್ದರೆ, ನಿಮ್ಮ ಪಕ್ಷವನ್ನು ಬೆಂಬಲಿಸುವುದನ್ನು ಮುಂದುವರಿಸಿ. ಆದರೆ ದಯವಿಟ್ಟು ಎಎಪಿಗೆ ಮತ ಹಾಕಿ. ಯಾವುದೇ ಪಕ್ಷದ ವಿರುದ್ಧ ಕೆಟ್ಟದಾಗಿ ಮಾತನಾಡಲು ನಾನು ಬಯಸುವುದಿಲ್ಲ. ಆದರೆ ಕಳೆದ 70 ವರ್ಷಗಳಲ್ಲಿ ಯಾವುದೇ ಪಕ್ಷ ಶಾಲೆಗಳು, ಆಸ್ಪತ್ರೆ ಮತ್ತು ವಿದ್ಯುತ್ ಬಗ್ಗೆ ಕಾಳಜಿ ವಹಿಸಿರಲಿಲ್ಲ ಎನ್ನುವುದನ್ನು ನೀವು ಒಪ್ಪುತ್ತೀರಿ. ಇವೆಲ್ಲವನ್ನೂ ಸುಧಾರಿಸಲು ನಾವು ಕಠಿಣ ಶ್ರಮವಹಿಸಿದ್ದೇವೆ. ಬೇರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಶಿಕ್ಷಣ ಮತ್ತು ಆರೋಗ್ಯದ ಅಭಿವೃದ್ಧಿ ನಿಂತು ಹೋಗುತ್ತದೆ' ಎಂದು ಕೇಜ್ರಿವಾಲ್ ಮತದಾರರನ್ನು ಎಚ್ಚರಿಸಿದ್ದಾರೆ.
ನನ್ನ ಕುಟುಂಬದಂತೆ ಪರಿಗಣಿಸಿದ್ದೇನೆ
ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಹಾಗೂ ಪಂಜಾಬ್ನಲ್ಲಿನ ಕಾಂಗ್ರೆಸ್ ಸರ್ಕಾರಗಳ ವಿರುದ್ಧ ಹರಿಹಾಯ್ದ ಅವರು, ಅವರು ವಿದ್ಯುತ್ ದರ ಹೆಚ್ಚಿಸಿದ್ದಾರೆ. ಆದರೆ ನಾನು ನಿಮಗೆ ದರ ಕಡಿತಗೊಳಿಸಿದ್ದೇನೆ. ಕಳೆದ ಐದು ವರ್ಷಗಳಲ್ಲಿ ನಾನು ನಿಮ್ಮ ಸಹಾಯಕ್ಕೆ ಬಂದಿದ್ದೇನೆ. ಮುಂದಿನ ಐದು ವರ್ಷಗಳಲ್ಲಿಯೂ ನನ್ನ ಮೇಲೆ ನಂಬಿಕೆ ಇರಿಸಿ. ನಿಮ್ಮ ನೆರವಿಗೆ ಬರುತ್ತೇನೆ. ನಿಮ್ಮನ್ನು ನಾನು ನಿಮ್ಮ ರಾಜಕೀಯ ಆದ್ಯತೆಗಳಾಚೆಗೂ ಕುಟುಂಬದಂತೆ ಪರಿಗಣಿಸಿದ್ದೇನೆ ಎಂದಿದ್ದಾರೆ.