ಪ್ರತಿಭಟನೆ ಹತ್ತಿಕ್ಕಲು ದೆಹಲಿಯಲ್ಲಿ ಮೊಬೈಲ್ ಸೇವೆ ಸ್ಥಗಿತಗೊಳಿಸಿದ ಕೇಂದ್ರ
ನವದೆಹಲಿ, ಡಿಸೆಂಬರ್ 19: ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಏರ್ಟೆಲ್, ಐಡಿಯಾ-ವೊಡಾಫೋನ್, ಬಿಎಸ್ಎನ್ಎಲ್ ಸೇರಿದಂತೆ ಹಲವು ನೆಟ್ವರ್ಕ್ ಸಂಸ್ಥೆಗಳು, ಕರೆ, ಎಸ್ಎಂಎಸ್ ಮತ್ತು ಡಾಟಾ ಸೇವೆಯನ್ನು ಸ್ಥಗಿತಗೊಳಿಸಿವೆ.
ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಎದುರಿನಲ್ಲೇ ನಮಾಜ್
ಈ ಬಗ್ಗೆ ಏರ್ಟೆಲ್ ಟ್ವೀಟ್ ಸಹ ಮಾಡಿದ್ದು, ದೆಹಲಿಯ ಕೆಲವು ಭಾಗಗಳಲ್ಲಿ ದ್ವನಿ ಕರೆ, ಎಸ್ಎಂಎಸ್, ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಇಂದಷ್ಟೆ ದೇಹಲಿಯಾದ್ಯಂತ ಉಚಿತ ವೈ-ಫೈ ಸೇವೆಗೆ ಚಾಲನೆ ನೀಡಿದರು. ಆದರೆ ಇದೇ ದಿನವೇ ಕೇಂದ್ರ ಸರ್ಕಾರವು ಇಂಟರ್ನೆಟ್ ಸ್ಥಗಿತಗೊಳಿಸಿದೆ.
ಪ್ರತಿಭಟನೆ ಹಿನ್ನಲೆಯಲ್ಲಿ ದೆಹಲಿಯ 14 ಮೆಟ್ರೋ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇಂಡಿಗೋ ವಿಮಾನವು ಹಾರಾಟವನ್ನು ಸ್ಥಗಿತಗೊಳಿಸಿದೆ. ದೆಹಲಿಯಲ್ಲಿ ಜನಜೀವನ ಅಸ್ಥವ್ಯಸ್ಥಗೊಂಡಿದೆ.
ಬೆಳಿಗ್ಗೆಯಿಂದಲೇ ದೆಹಲಿಯಲ್ಲಿ ಪ್ರತಿಭಟನೆ ಜೋರಾಗಿದ್ದು, ದೆಹಲಿ-ಗುರುಗ್ರಾಮ ಎಕ್ಸ್ಪ್ರೆಸ್ ಹೈವೆ ನಲ್ಲಿ ಸುಮಾರು 10 ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇತಿಹಾಸಕಾರ ರಾಮಚಂದ್ರ ಗುಹಾ, ಖ್ಯಾತ ವಕೀಲ ಪ್ರಶಾಂತ್ ಭೂಷಣ್, ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಹರ್ಷ ಮಂದಿರ್ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.