ದೆಹಲಿಯ ಅಪ್ರಾಪ್ತೆಯ ಮೇಲೆ ಇಬ್ಬರು ಬಾಲಾಪರಾಧಿಗಳಿಂದ ಅತ್ಯಾಚಾರ
೧೦ನೇ ತರಗತಿ ಓದುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರೂ ಬಾಲಾಪರಾಧಿಗಳಾಗಿದ್ದು, ಒಬ್ಬ ಆರೋಪಿಯನ್ನು ಇಲ್ಲಿನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ದೆಹಲಿ, ಮಾರ್ಚ್ 2: ಈಗಾಗಲೇ ರೇಪ್ ಕ್ಯಾಪಿಟಲ್ ಎಂಬ ಕುಖ್ಯಾತಿ ಪಡೆದಿರುವ ರಾಜಧಾನಿ ದೆಹಲಿ ನಿನ್ನೆ ಮತ್ತೊಂದು ಅತ್ಯಾಚಾರ ಪ್ರಕರಣಕ್ಕೆ ಮೌನಸಾಕ್ಷಿಯಾಗಿದೆ. 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸ್ನೇಹಿತರೇ ಅತ್ಯಾಚಾರ ಎಸಗಿದ ಘಟನೆ ನಿರ್ಭಯಾ ಪ್ರಕರಣವನ್ನು ಮತ್ತೊಮ್ಮೆ ನೆನಪಿಸಿದೆ.
೧೦ನೇ ತರಗತಿ ಓದುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರೂ ಬಾಲಾಪರಾಧಿಗಳಾಗಿದ್ದು, ಒಬ್ಬ ಆರೋಪಿಯನ್ನು ಇಲ್ಲಿನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ. ಆತನನ್ನು ಶೀಘ್ರವೇ ಬಂಧಿಸುವುದಾಗಿ ಡಿಸಿಪಿ ಸುರೇಂದ್ರ ಕುಮಾರ್ ಅಭಯ ನೀಡಿದ್ದಾರೆ. [ನಿರ್ಭಯಾ ದುರಂತ ನೆನಪಿಸುವ ಘಟನೆ, ಆರೋಪಿ ಬಂಧನ]
ಅಲ್ಲಿ ನಡೆದಿದ್ದೇನು?
ಬುಧವಾರ ರಾತ್ರಿ 8:30ರ ವೇಳೆಗೆ ಉತ್ತಮ ನಗರದಲ್ಲಿರುವ ತನ್ನ ಮನೆಗೆ ಹೊರಟಿದ್ದ ಬಾಲಕಿಗೆ ಆಕೆಯ ಸ್ನೇಹಿತ ತನ್ನ ಕಾರಿನಲ್ಲಿ ಡ್ರಾಪ್ ನೀಡುವುದಾಗಿ ಹೇಳಿದ್ದಾನೆ. ಪರಿಚಯವಿರುವ ಹುಡುಗ ಎಂಬ ನಂಬಿಕೆಯಲ್ಲಿ ಆಕೆಯೂ ಅವನೊಂದಿಗೆ ಬರುವುದಕ್ಕೆ ಒಪ್ಪಿದ್ದಾಳೆ. ಮಾರ್ಗ ಮಧ್ಯೆ ತನ್ನ ಸ್ನೇಹಿತನೊಬ್ಬನನ್ನೂ ಕಾರಿನಲ್ಲಿ ಕೂರಿಸಿಕೊಂಡ ಆತನ ಜಾಲಿರೈಡ್ ಎನ್ನುತ್ತ ಬಿಂದಾಪುರ್ ಎಂಬ ಪ್ರದೇಶದ ಕಡೆ ಹೋಗಿದ್ದಾನೆ. ಆ ಸಮಯದಲ್ಲಿ ಮಾದಕ ದ್ರವ್ಯ ಬೆರೆಸಿದ ಪಾನೀಯವನ್ನು ಬಾಲಕಿಗೆ ನೀಡಿ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. [ನಿರ್ಭಯಾ ಕೇಸಿನ ಅತ್ಯಾಚಾರಿ ವಿನಯ್ ಆತ್ಮಹತ್ಯೆಗೆ ಯತ್ನ]
ನಂತರ ಆಕೆಯನ್ನು ಕಾರಿನಲ್ಲೇ ಕರೆತಂದು, ಆಕೆಯ ಮನೆಯ ಬಳಿ ಕೆಡವಿ ಹೋಗಿದ್ದಾರೆ. ಮಾನಸಿಕ ಮತ್ತು ದೈಹಿಕ ಯಾತನೆಯಿಂದ ಬಳಲುತ್ತಿರುವ ಹುಡುಗಿಗೆ ಇಲ್ಲಿನ ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
೨೦೧೫ರಲ್ಲಿ ಬಾಲಾಪರಾಧಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, 16 ವರ್ಷ ಮೀರಿದವರನ್ನು ವಯಸ್ಕರೆಂದು ಪರಿಗಣಿಸಿ, ಶಿಕ್ಷೆಯ ಮಿತಿಯನ್ನೂ ಹೆಚ್ಚಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.