ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರೇ ಅಮೆರಿಕ ವಿದೇಶಾಂಗ ಕಾರ್ಯದರ್ಶಿ?
ನವದೆಹಲಿ, ಜೂನ್ 27: ಭಾರತ ಪ್ರವಾಸದಲ್ಲಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರು ಧಾರ್ಮಿಕ ಸ್ವಾತಂತ್ರ್ಯದ ಕುರಿತಂತೆ ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡುವ ಧಾಟಿಯಲ್ಲಿ ಮಾತನಾಡಿದ್ದಾರೆ.
ದೆಹಲಿಯ ಇಂಡಿಯಾ ಇಂಟರ್ನ್ಯಾಶ್ನಲ್ ಸೆಂಟರ್ ನಲ್ಲಿ ನೀಡಿದ ಭಾಷಣದಲ್ಲಿ ಅವರು, ಇತ್ತೀಚೆಗೆ ಭಾರತದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದೆ ಎನ್ನಲಾದ ಹಿಂಸಾಚಾರವನ್ನು ಪರೋಕ್ಷವಾಗಿ ನಿಂದಿಸಿದರು.
ಪೊಂಪಿಯೋ-ಮೋದಿ ಭೇಟಿ: ಮಹತ್ವದ ವಿಷಯಗಳ ಕುರಿತು ಚರ್ಚೆ
ಗೋಕಳ್ಳತನದ ಆರೋಪದ ಮೇಲೆ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಘಟನೆ, ಇತ್ತೀಚೆಗೆ ಜಾರ್ಖಂಡ್ ನಲ್ಲಿ ಬೈಕ್ ಕದ್ದಿದ್ದಾನೆಮದು ಆರೋಪಿಸಿ ವ್ಯಕ್ತಿಯನ್ನು ಹೊಡೆದು ಕೊಂಡ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಪೊಂಪಿಯೋ ಈ ಮಾತುಗಳನ್ನು ಹೇಳಿದರು ಎನ್ನಲಾಗಿದೆ.
"ಭಾರತ ನಾಲ್ಕು ಪ್ರಮುಖ ಧರ್ಮಗಳಿಗೆ ಹುಟ್ಟು ನೀಡಿದ ದೇಶ. ಆದ್ದರಿಂದ ಎಲ್ಲರ ಧರ್ಮಗಳಿಗೂ ಗೌರವ ನೀಡಲು ನಾವೆಲ್ಲ ಒಟ್ಟಾಗಿ ಕೈಜೋಡಿಸೋಣ. ಧಾರ್ಮಿಕ ಸ್ವಾತಂತ್ರ್ಯವನ್ನು ವಿರೋಧಿಸುವವರನ್ನು ಕಠಿಣವಾಗಿ ವಿರೋಧಿಸೋಣ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ನೀಡದಿದ್ದರೆ ಈ ವಿಶ್ವ ದುರಂತ ಎದುರಿಸಬೇಕಾಗುತ್ತದೆ" ಎಂದು ಅವರು ಹೇಳಿದರು.
ಮ್ಮನ್ನು ಎಲ್ಲರೂ ದರೋಡೆ ಮಾಡ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ ಮತ್ತೆ ಕಿಡಿ
ಇದರೊಟ್ಟಿಗೆ ಭಯೋತ್ಪಾದನೆಯನ್ನೂ ಕಟು ಶಬ್ದಗಳಿಂದ ನಿಂದಿಸಿದ ಅವರು, ವಿಶ್ವಸಂಸ್ಥೆಯು ಜೈಶ್ ಮುಖಂಡ ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ಕರೆದಿದ್ದನ್ನು ಅಮೆರಿಕ ಸ್ವಾಗತಿಸಿದೆ. ಆತನನ್ನು ಜಾಗತಿಗ ಉಗ್ರ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ಅಮೆರಿಕವೂ ಒತ್ತಡ ಹೇರಿತ್ತು ಎಂದರು. ಇತ್ತೀಚೆಗೆ ಭಯೋತ್ಪಾದನೆಯನ್ನು ಬೆಂಬಲಿಸುವ ಪ್ಯಾಲೆಸ್ತೇನ್ ನ ಎನ್ ಜಿಒ ವೊಂದರ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಮತಹಾಕಿದ್ದನ್ನು ಅವರು ಸ್ವಾಗತಿಸಿದರು.
ಭಾರತ ವಿಶ್ವಮಟ್ಟದಲ್ಲಿ ಉತ್ತಮ ಹೆಸರು ಪಡೆದಿದೆ ಎಂದ ಪೊಂಪಿಯೋ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಆದ್ದರಿಂದ ಉಭಯ ದೇಶಗಳೂ ಒಂದಾಗಿ ಕೆಲಸ ಮಾಡಬೇಕು ಎಂದರು.
ಜಾರ್ಖಂಡ್ ನಲ್ಲಿ ಇತ್ತೀಚೆಗೆ ಮೋಟಾರ್ ಸೈಕಲ್ ಕದ್ದಿದ್ದಾನೆ ಎಂದು ಆರೋಪಿಸಿ ಬ್ರೇಝ್ ಎಂಬ 24 ವರ್ಷ ವಯಸ್ಸಿನ ಯುವಕನನ್ನು ಕೆಲವರು ಗಂಟೆಗಟ್ಟಲೆ ಹೊಡೆದು, ಹಿಂಸಿಸಿದ್ದರು ಕೆಲವು ಮೂಲಗಳ ಪ್ರಕಾರ 'ಜೈ ಶ್ರೀರಾಮ್', 'ಜೈ ಹನುಮಾನ್' ಎಂದು ಹೇಳುವಂತೆ ಅವನನ್ನು ಒತ್ತಾಯಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಘಟನೆಗೆ ಸಾಕ್ಷ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿತ್ತು.
ಈ ಘಟನೆಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಘಟನೆಯ ಬಗ್ಗೆ ನನಗೆ ತೀವ್ರವಾಗಿ ನೋವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದರು.