ರಾಕೇಶ್ ಅಸ್ತಾನಾ ದುಬೈನಲ್ಲಿ ನನಗೆ ಬೆದರಿಕೆ ಹಾಕಿದ್ದರು ಎಂದ ಮೈಖೇಲ್
ನವದೆಹಲಿ, ಮಾರ್ಚ್ 12: ಅಗಾಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಅವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದ ಎಂದು ಆರೋಪಿಸಲಾದ ಕ್ರಿಶ್ಚಿಯನ್ ಮೈಖೇಲ್ ಮಂಗಳವಾರ ದೆಹಲಿ ಹೈ ಕೋರ್ಟ್ ನಲ್ಲಿ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ಮಾತನಾಡಿದ್ದಾನೆ.
ದುಬೈನಲ್ಲಿ ನನ್ನನ್ನು ಭೇಟಿಯಾದ ಅಸ್ತಾನಾ, ವಿಚಾರಣೆ ವೇಳೆ ತನಿಖಾ ಸಂಸ್ಥೆಗೆ ಪೂರಕವಾಗಿ ನಡೆದುಕೊಳ್ಳದಿದ್ದರೆ ಜೈಲಿನೊಳಗೆ ನನ್ನ ಬದುಕನ್ನು ನರಕ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಅದೇ ಈಗ ಆಗುತ್ತಿದೆ. ಜೈಲಿನಲ್ಲಿ ನನ್ನ ಕೊಠಡಿ ಪಕ್ಕದಲ್ಲೇ ಭೂಗತ ಪಾತಕಿ ಚೋಟಾ ರಾಜನ್ ಇದ್ದಾನೆ. ಹಲವಾರು ಮಂದಿಯನ್ನು ಕೊಂದವರ ಜತೆಗೆ ನನ್ನನ್ನು ಇಲ್ಲಿ ಇರಿಸಿದ್ದಾರೆ. ನಾನು ಮಾಡಿದ ತಪ್ಪೇನು ಎಂದು ಅರ್ಥವಾಗುತ್ತಿಲ್ಲ ಎಂದು ಮೈಖೇಲ್ ಹೇಳಿದ್ದಾನೆ.
ಕ್ರಿಶ್ಚಿಯನ್ ಮೈಕಲ್ ನ ಮತ್ತಷ್ಟು ವಿಚಾರಣೆಗೆ ಸಿಬಿಐ ಕೋರ್ಟ್ ಅನುಮತಿ
ಹದಿನಾರು-ಹದಿನೇಳು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ಜತೆ ನನ್ನನ್ನು ಜೈಲಿನಲ್ಲಿ ಇರಿಸಿದ್ದಾರೆ ಎಂದು ಮೈಖೇಲ್ ಕೋರ್ಟ್ ಗೆ ಹೇಳಿದ್ದಾನೆ. ಮೈಖೇಲ್ ನನ್ನು ದೆಹಲಿಯ ತಿಹಾರ್ ಜೈಲಿನ ಒಳಭಾಗ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ವಿಶೇಷ ನ್ಯಾ.ಅರವಿಂದ್ ಕುಮಾರ್ ಅನುಮತಿ ನೀಡಿದ್ದಾರೆ.
ಜಾರಿ ನಿರ್ದೇಶನಾಲಯವು ಬುಧವಾರ ಹಾಗೂ ಗುರುವಾರ ಆತನನ್ನು ಪ್ರಶ್ನೆ ಮಾಡಲಿದೆ. ಆ ಸಂದರ್ಭದಲ್ಲಿ ಜೈಲು ಅಧಿಕಾರಿಗಳು ಇರುತ್ತಾರೆ. ಈ ಮಧ್ಯೆ ಮೈಖೇಲ್ ಪರ ವಕೀಲರಿಗೆ ಬೆಳಗ್ಗೆ ಹಾಗೂ ಸಂಜೆ ತಲಾ ಅರ್ಧ ಗಂಟೆ ಭೇಟಿ ಮಾಡಲು ಅನುಮತಿ ಸಿಕ್ಕಿದೆ.
ಕಾಶ್ಮೀರಿ ಉಗ್ರರೊಂದಿಗೆ ಅಗಸ್ಟಾ ಆರೋಪಿ : ನ್ಯಾಯಾಧೀಶರಿಗೆ ಮೈಕಲ್ ಪತ್ರ
ಜೈಲಿನೊಳಗೆ ತನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಮೈಖೇಲ್ ಕೋರ್ಟ್ ಗೆ ಹೇಳಿದ್ದಾನೆ. ಗುರುವಾರದೊಳಗೆ ಸಿಸಿಟಿವಿ ಫೂಟೇಜ್ ಹಾಗೂ ವರದಿ ನೀಡುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ. ಅದರ ಆಧಾರದಲ್ಲಿ ಹೆಚ್ಚಿನ ಭದ್ರತೆ ಇರುವ ಕಡೆಗೆ ಆತನನ್ನು ಸ್ಥಳಾಂತರಿಸಲಾಗುತ್ತದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ದುಬೈನಲ್ಲಿ ಕ್ರಿಶ್ಚಿಯನ್ ಮೈಖೇಲ್ ನನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು.