ನಮಗೆ ವಿನಾಯಿತಿ ಕೊಡಿ ಪ್ಲೀಸ್ ಎಂದ ಮೇಘಾಲಯ ಸಿಎಂ
ದೆಹಲಿ, ಡಿಸೆಂಬರ್.12: ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಈಶಾನ್ಯ ರಾಜ್ಯಗಳಲ್ಲಿ ಹೋರಾಟದ ಬೆಂಕಿ ಹೊತ್ತಿಕೊಂಡಿದೆ. ಇದರ ಮಧ್ಯೆ ನಮಗೆ ವಿನಾಯಿತಿ ಕೊಡಿ ಸ್ವಾಮಿ ಎಂದು ಮೇಘಾಲಯದ ಮುಖ್ಯಮಂತ್ರಿ ಸೇರಿದಂತೆ ಸಂಪುಟ ಸಚಿವರೆಲ್ಲ ದೆಹಲಿಯತ್ತ ಧಾವಿಸಿದ್ದಾರೆ.
ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ರಾಜ್ಯ ಮೇಘಾಲಯಕ್ಕೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಳ್ಳಲು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹಾಗೂ ಸಚಿವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಮುಂದಾಗಿದ್ದಾರೆ.
ಭಾರತದಲ್ಲಿ ಮುಸ್ಲಿಂರ ವಿರುದ್ಧ ಹುನ್ನಾರ: ಇದು ಅಮೆರಿಕನ್ನರ ಮಾತು
ಕಳೆದ ಡಿಸೆಂಬರ್.09ರಂದು ಲೋಕಸಭೆಯಲ್ಲಿ ಪೌರತ್ವ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಮೇಘಾಲಯದಲ್ಲಿ ಹೋರಾಟದ ಕಿಚ್ಚು ಹೊತ್ತಿಗೊಂಡಿದೆ. ಅಂದಿನಿಂದ ಮೇಘಾಲಯದಲ್ಲಿ ಜನರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಮೇಘಾಲಯ ರಾಜ್ಯಕ್ಕೆ ಸಂಪೂರ್ಣವಾಗಿ ವಿನಾಯಿತಿ ನೀಡಬೇಕು. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಳ್ಳುತ್ತೇವೆ. ಮೇಘಾಲಯದ ಮೂಲ ಪ್ರಜೆಗಳ ರಕ್ಷಣೆ ಹಕ್ಕುಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಂಗ್ಮಾ ಹೇಳಿದ್ದಾರೆ.
ರಾಜ್ಯ ಸರ್ಕಾರವು ಕೂಡಾ ಈಗಾಗಲೇ ಮೇಘಾಲಯ ಮೂಲ ನಿವಾಸಿಗಳ ಸುರಕ್ಷತೆ ಹಾಗೂ ರಕ್ಷಣಾ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆಂತರಿಕ ಗಡಿ ರೇಖೆ ನಿರ್ಮಾಣಕ್ಕೆ ಅನುಮತಿ ನೀಡುವ ಬಗ್ಗೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುವುದಾಗಿ ಸಂಗ್ಮಾ ತಿಳಿಸಿದ್ದಾರೆ.