#MeToo ಆರೋಪ ಆಧಾರರಹಿತ, ಕಾನೂನು ಕ್ರಮ ಕೈಗೊಳ್ಳುವೆ: ಎಂ.ಜೆ. ಅಕ್ಬರ್
ನವದೆಹಲಿ, ಅಕ್ಟೋಬರ್ 14: 'ನನ್ನ ವಿರುದ್ಧದ ಅನುಚಿತ ವರ್ತನೆಯ ಆರೋಪಗಳು ಸುಳ್ಳು ಮತ್ತು ಹೆಣೆದಿರುವಂತಹವು. ಹಗೆತನ ಮತ್ತು ದ್ವೇಷವುಳ್ಳವರು ಸೃಷ್ಟಿಸಿದ ಕಥೆ. ಈ ಮುಂಚೆ ನಾನು ಅಧಿಕೃತ ಪ್ರವಾಸದಲ್ಲಿದ್ದ ಕಾರಣ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿರಲಿಲ್ಲ' ಎಂದು ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ
ಸಾಕ್ಷ್ಯಗಳಿಲ್ಲದೆಯೇ ಆರೋಪ ಮಾಡುವ ಅಭ್ಯಾಸ ಕೆಲವು ವರ್ಗಗಳಲ್ಲಿ ವೈರಲ್ ಜ್ವರದಂತೆ ಹರಡಿದೆ. ಪ್ರಕರಣ ಏನೇ ಇರಲಿ, ನಾನು ಈಗ ಮರಳಿದ್ದೇನೆ. ನನ್ನ ವಕೀಲರು ಈ ಕಟುವಾದ ಮತ್ತು ಆಧಾರರಹಿತ ಆರೋಪಗಳ ಕುರಿತು ನೋಡಿಕೊಳ್ಳಲಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿಯೂ ನಿರ್ಧರಿಸಲಿದ್ದೇವೆ ಎಂದಿದ್ದಾರೆ.
ಪ್ರಿಯಾ ರಮಣಿ, ಪ್ರೇರಣಾ ಸಿಂಗ್ ಬಿಂದ್ರಾ, ಸುಜಾತಾ ಆನಂದನ್, ಶುಮಾ ರಹಾ, ಹರಿಂದರ್ ಬವೇಜಾ, ಮಜಲಿ ಡೇ ಪುಯ್ ಕಂಪ್ ಸೇರಿದಂತೆ ಅನೇಕ ಪತ್ರಕರ್ತೆಯರು, ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರು ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು.
'ಅಕ್ಬರ್ ತುಟಿಗೆ ತುಟಿಯೊತ್ತಿ ಗಂಟಲೊಳಗೆ ನಾಲಿಗೆ ತುರುಕಿದ್ದರು!'
ಆಫ್ರಿಕಾ ಪ್ರವಾಸದಲ್ಲಿದ್ದ ಅಕ್ಬರ್, ಭಾನುವಾರ ಸ್ವದೇಶಕ್ಕೆ ಮರಳಿದ್ದಾರೆ. ತಮ್ಮ ವಿರುದ್ಧದ ಆರೋಪಗಳ ಕುರಿತು ಮೌನ ಮುರಿದಿರುವ ಅವರು, ಇವೆಲ್ಲವೂ ಕಟ್ಟುಕಥೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಸಂದರ್ಭ ಏಕೆ?
ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಇರುವ ಮುನ್ನವಷ್ಟೇ ಈ ವಿವಾದ ಏಕೆ ಎದ್ದಿದೆ? ಇದೊಂದು ಅಜೆಂಡಾವೇ? ನೀವೇ ನ್ಯಾಯಾಧೀಶರು. ಈ ಸುಳ್ಳು, ಆಧಾರರಹಿತ ಮತ್ತು ಘೋರವಾದ ಆರೋಪಗಳು ನನ್ನ ಗೌರವ ಮತ್ತು ಪ್ರತಿಷ್ಠೆಗೆ ಸರಿಪಡಿಸಲಾಗದ ಹಾನಿ ಉಂಟುಮಾಡಿದೆ ಎಂದು ಅಕ್ಬರ್ ದೂರಿದ್ದಾರೆ.
ಸುಳ್ಳುಗಳಿಗೆ ಕಾಲುಗಳಿಲ್ಲ. ಆದರೆ, ಅವು ವಿಷಯವನ್ನು ಹೊತ್ತುಕೊಂಡಿರುತ್ತವೆ. ಇದು ತೀವ್ರವಾಗಿ ಸಂಕಷ್ಟಮಯವಾದುದು.
'ಏನನ್ನೂ' ಮಾಡಿರಲಿಲ್ಲವಲ್ಲ!
ವರ್ಷದ ಹಿಂದೆ ನಿಯತಕಾಲಿಕೆಯೊಂದರ ಲೇಖನ ಮೂಲಕ ಪ್ರಿಯಾ ರಮಣಿ ಈ ಆಂದೋಲನವನ್ನು ಆರಂಭಿಸಿದ್ದರು. ಆದರೆ, ಅವರು ನನ್ನ ಹೆಸರು ಬರೆದಿರಲಿಲ್ಲ. ಏಕೆಂದರೆ ಅವರು ಸತ್ಯವಲ್ಲದ ಕಥೆ ಎನ್ನುವುದು ಅವರಿಗೆ ತಿಳಿದಿತ್ತು. ನನ್ನ ಹೆಸರು ಏಕೆ ಬರೆದಿರಲಿಲ್ಲ ಎಂದು ಇತ್ತೀಚೆಗೆ ಅವರನ್ನು ಕೇಳಿದಾಗ ಅವರು, 'ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ಏಕೆಂದರೆ ಅವರು 'ಏನನ್ನೂ' ಮಾಡಿರಲಿಲ್ಲ' ಎಂದು ಆಕೆ ಪ್ರತಿಕ್ರಿಯೆ ನೀಡಿದ್ದರು.
ನಾನು ಏನನ್ನೂ ಮಾಡಿರದೆ ಇದ್ದ ಮೇಲೆ ಕಥೆ ಏನು ಮತ್ತು ಎಲ್ಲಿದೆ? ಅಲ್ಲಿ ಯಾವ ಕಥೆಯೂ ಇಲ್ಲ. ಆದರೆ, ವ್ಯಂಗ್ಯ, ಊಹೆ ಮತ್ತು ನಿಂದನೆಗಳ ಸಾಗರವನ್ನೇ ಸಂಭವಿಸದೆ ಇರುವುದರ ಸುತ್ತ ನಿರ್ಮಿಸಲಾಗಿದೆ. ಈ ಸಂಪೂರ್ಣ ನಂಬಲನರ್ಹವಾದ ವರ್ತಮಾನಗಳು ಸತ್ಯವಲ್ಲ ಎಂಬುದನ್ನು ನಾನು ಏನನ್ನೂ ಮಾಡಿಲ್ಲ ಎಂಬುದರ ಮೂಲಕ ಇತರರು ಖಚಿತಪಡಿಸುತ್ತಿದ್ದಾರೆ.
ಅಕ್ಬರ್ ಮೇಲಿನ ಆರೋಪದ ಬಗ್ಗೆ ಮೋದಿ ಮೌನ ಮುರಿಯಲಿ: ಕಾಂಗ್ರೆಸ್
ಈಜುವುದಕ್ಕೇ ಬರುವುದಿಲ್ಲ
'ಈ ಮನುಷ್ಯ ನನ್ನ ಮೇಲೆ ಕೈ ಹಾಕಿದ್ದರು' ಎಂದು ಶತುಪಾ ಪಾಲ್ ಹೇಳಿದ್ದರು. ಶುಮಾ ರಹಾ ಹೇಳುತ್ತಾರೆ, ಆದರೆ ಅವರು ವಾಸ್ತವವಾಗಿ ಏನನ್ನೂ ಮಾಡಿರಲಿಲ್ಲ. ಇನ್ನೊಬ್ಬ ಮಹಿಳೆ ಅಂಜು ಭಾರತಿ, ನಾನು ಈಜುಕೊಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಾಗಿ ಇನ್ನೊಂದು ಹಂತದ ಆರೋಪ ಮಾಡುತ್ತಾರೆ. ನನಗೆ ಈಜುವುದಕ್ಕೇ ಬರುವುದಿಲ್ಲ.
ಘಜಾಲಾ ವಹಾಬ್ ಪ್ರಸಂಗ
ಮತ್ತೊಂದು ನಿರಂತರವಾಗಿ ಕೇಳಿಬಂದ ಆರೋಪವೆಂದರೆ ಘಜಾಲಾ ವಹಾಬ್ ಅವರದ್ದು. ಅದು ನನ್ನ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ. 21 ವರ್ಷದ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆಕೆ ಆರೋಪಿಸಿದ್ದಾರೆ.
ಇದು ನಾನು ಸಾರ್ವಜನಿಕ ಜೀವನಕ್ಕೆ ಕಾಲಿಡುವ 16 ವರ್ಷ ಮೊದಲು, ಮಾಧ್ಯಮದಲ್ಲಿ ಇದ್ದಾಗ. ನಾನು ಘಜಾಲಾ ವಹಾಬ್ ಅವರೊಂದಿಗೆ ಕೆಲಸ ಮಾಡಿದ್ದು 'ದಿ ಏಷ್ಯನ್ ಏಜ್'ನಲ್ಲಿ ಇದ್ದಾಗ ಮಾತ್ರ. ಸಣ್ಣ ಹಾಲ್ನಲ್ಲಿ ನಮ್ಮ ಸಂಪಾದಕೀಯ ತಂಡ ಕೆಲಸ ಮಾಡುತ್ತಿತ್ತು. ಆಗ ನನಗೆ ಹಾಲ್ಗೆ ಅಂಟಿಕೊಂಡಂತೆ ಇದ್ದ ಪ್ಲೈವುಡ್ ಮತ್ತು ಗ್ಲಾಸ್ನಿಂದ ಮಾಡಿದ ಪುಟ್ಟದೊಂದು ಕ್ಯಾಬಿನ್ ನೀಡಲಾಗಿತ್ತು. ಉಳಿದವರಿಗೆ ಎರಡು ಅಡಿ ದೂರದಲ್ಲಿ ಟೇಬಲ್ ಮತ್ತು ಚೇರ್ ನೀಡಲಾಗಿತ್ತು.
ಆ ಚಿಕ್ಕ ಜಾಗದಲ್ಲಿ ಹೀಗೆಲ್ಲ ಆಗಬಹುದು ಎನ್ನುವುದನ್ನು ನಂಬುವುದು ಮತ್ತು ಕೆಲಸದ ಅವಧಿಯಲ್ಲಿ ಆ ಜಾಗದಲ್ಲಿ ಇದ್ದ ಯಾರಿಗೂ ಅದು ತಿಳಿದಿರಲಿಲ್ಲ ಎನ್ನುವುದು ತೀರಾ ವಿಲಕ್ಷಣ ಎನಿಸುತ್ತದೆ. ಈ ಎಲ್ಲ ಆರೋಪಗಳೂ ಸುಳ್ಳು, ಪ್ರಚೋದಿತ ಮತ್ತು ಆಧಾರರಹಿತ.
ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಶೋಷಣೆ ಆರೋಪ, ಅಂತರ ಕಾಯ್ದುಕೊಂಡ ಸರಕಾರ
ದಶಕಗಳ ಬಳಿಕ ಆರೋಪವೇಕೆ?
ಮುಖ್ಯವಾಗಿ ಗಮನಿಸಬೇಕಾಗಿದ್ದು ಎಂದರೆ ರಮಣಿ ಮತ್ತು ವಹಾಬ್ ಅವರಿಬ್ಬರೂ ಈ ಆರೋಪ ಮಾಡಿರುವಂತಹ ಘಟನೆಗಳು ನಡೆದ ಬಳಿಕವೂ ನನ್ನ ಜತೆ ಕೆಲಸ ಮಾಡಿದ್ದರು ಎನ್ನುವುದನ್ನು. ಇದು ಅವರಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಸುತ್ತದೆ. ದಶಕಗಳವರೆಗೂ ಅವರು ಮೌನವಾಗಿರಲು ಕಾರಣವೇನು?