ಎಕ್ಸಿಟ್ ಪೋಲ್ ಪರಿಣಾಮ ಮಾಯಾವತಿ ಸೋನಿಯಾ ಭೇಟಿ ರದ್ದು
Recommended Video
ನವದೆಹಲಿ, ಮೇ 20: ಚುನಾವಣೋತ್ತರ ಸಮೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಮಾಯಾವತಿ, ಸೋನಿಯಾ, ರಾಹುಲ್ ಗಾಂಧಿ ಬೇಟಿ ರದ್ದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಸೋಮವಾರ ಸಭೆ ನಡೆಸಬೇಕಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಧ್ಯಸ್ಥಿಕೆ ಬಳಿಕ ಕಾಂಗ್ರೆಸ್ ಮೇಲಿನ ಕೋಪವನ್ನು ತಣ್ಣಗಾಗಿಸಿಕೊಂಡು ಸಭೆಗೆ ಮಾಯಾವತಿ ಒಪ್ಪಿದ್ದರು ಎನ್ನಲಾಗಿದೆ. ಇದಲ್ಲದೆ ಮೋದಿಯೇತರ ಸರ್ಕಾರ ರಚನೆಗೆ ಪ್ರತಿಪಕ್ಷಗಳು ಒಗ್ಗಟ್ಟಾಗಿರಬೇಕೆಂಬ ಮಂತ್ರಕ್ಕೆ ಬದ್ಧರಾಗಿರಲು ಮಾಯಾವತಿ ಒಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಚಂದ್ರಬಾಬು ನಾಯ್ಡು ಕಿಂಗ್ ಆಗ್ತಾರಾ, ಕಿಂಗ್ ಮೇಕರ್ ಆಗ್ತಾರಾ?
ದೆಹಲಿಯಲ್ಲಿ ಮಾಯಾವತಿ ಯಾವುದೇ ಪೂರ್ವ ನಿಗಧಿತ ಸಮಯವನ್ನು ಹೊಂದಿಲ್ಲ, ಲಕ್ನೋದಲ್ಲಿಯೇ ಇರಲಿದ್ದಾರೆ ಎಂದು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ ತಿಳಿಸಿದ್ದು, ಮಾಯಾವತಿ, ಸೋನಿಯಾ ಭೇಟಿಯಲ್ಲಿ ಪರೋಕ್ಷವಾಗಿ ಅಲ್ಲಗಳೆದಿದ್ದಾರೆ.
17ನೇ ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಲೇ ಇದ್ದ ಮಾಯಾವತಿ ಈಗ ಅದೇ ಪಕ್ಷದ ನಾಯಕರನ್ನು ಭೇಟಿಯಾಗಲು ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ. ಚುನಾವಣೋತ್ತರ ಸಮೀಕ್ಷೆ ಹೊರಬಂದ ಬಳಿಕ ಈ ಭೇಟಿ ಕುತೂಹಲ ಮೂಡಿಸಿತ್ತು.
ಶನಿವಾರವಷ್ಟೇ ಮಾಯಾವತಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಯಾವತಿಯವರನ್ನು ಭೇಟಿಯಾಗಿ ಕಾಂಗ್ರೆಸ್ ಹಾಗೂ ಬಿಎಸ್ಪಿ ನಡುವಿನ ಹಳಸಿದ ಸಂಬಂಧವನ್ನು ಸರಿಪಡಿಸಲು ಯತ್ನಿಸಿದ್ದರು ಎನ್ನಲಾಗಿದೆ. ಒಂದೊಮ್ಮೆ ಅತಂತ್ರಲೋಕಸಭೆ ಸೃಷ್ಟಿಯಾದರೆ ಎಲ್ಲಾ ಪ್ರತಿಪಕ್ಷಗಳೂ ಒಗ್ಗೂಡಿ ಹೋಗುವ ಕಾಂಗ್ರೆಸ್ನ ನಿರ್ಧಾರಕ್ಕೆ ಮಾಯಾವತಿ ಕೂಡ ಬೆಂಬಲಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಕ್ಸಿಟ್ ಪೋಲ್ : ಉತ್ತರಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಬಿಜೆಪಿ ಸಾಧನೆ
ಆದಾಗ್ಯೂ ಮೇ 23ರ ಫಲಿತಾಂಶದಲ್ಲಿ ಎನ್ಡಿಎಗೆ ಪೂರ್ಣ ಬಹುಮತ ಸಿಗದಿದ್ದರೆ ಮಾತ್ರ ಈ ಎಲ್ಲಾ ಭೇಟಿಗಳಿಗೆ ಅರ್ಥ ಬರಲಿದೆ, ಇಲ್ಲವಾದಲ್ಲಿ ಬಿಜೆಪಿ ಟೀಕಿಸಿರುವಂತೆ ಈ ಎಲ್ಲಾ ಸಭೆಗಳು ಪ್ರತಿಪಕ್ಷ ನಾಯಕರ ಆಯ್ಕೆಗೆ ಸೀಮಿತವಾಗಲಿದೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿದ್ದು, ಹಾಲಿ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೊರಗಿಟ್ಟು ತನ್ನ ಸಾಂಪ್ರದಾಯಿಕ ಎದುರಾಳಿಯಾಗಿದ್ದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಇದೀಗ ಮತ್ತೆ ಕಾಂಗ್ರೆಸ್ ನತ್ತ ಸ್ನೇಹ ಹಸ್ತ ಚಾಚಲು ಮುಂದಾಗಿದ್ದಾರೆ ಎನ್ನಲಾಗಿದೆ.