ಉಗ್ರರ ನಿಗ್ರಹ ಕಾಯ್ದೆಯಡಿ ಮಹತ್ವದ ಘೋಷಣೆ ಮಾಡಿದ ಕೇಂದ್ರ
ನವದೆಹಲಿ, ಸೆಪ್ಟೆಂಬರ್ 4: ಮುಂಬೈ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಎ ತಯಬಾ ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್ ಮತ್ತು ಜೈಶ್ ಎ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ನೂತನ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿ ಭಯೋತ್ಪಾದಕರೆಂದು ಭಾರತ ಸರ್ಕಾರ ಬುಧವಾರ ಘೋಷಿಸಿದೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರರಾದ ದಾವೂದ್ ಇಬ್ರಾಹಿಂ ಮತ್ತು ಜಕೀರ್ ಉರ್ ರೆಹಮಾನ್ ಅವರನ್ನೂ ಭಯೋತ್ಪಾದಕರೆಂದು ಘೋಷಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆ ವಿರೋಧಿ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಅಂಗೀಕಾರ
1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದ ಒಂದು ತಿಂಗಳ ಬಳಿಕ ಮೊದಲ ಘೋಷಣೆ ಮಾಡಲಾಗಿದೆ. ಇದುವರೆಗೂ ಯಾವುದೇ ಭಯೋತ್ಪಾದಕನನ್ನು 'ಉಗ್ರ' ಎಂದು ಗುರುತಿಸಲು ಕಾನೂನಿನ ಅಡಿ ಅವಕಾಶವಿರಲಿಲ್ಲ. ಸಂಘಟನೆಗಳನ್ನು ಮಾತ್ರ ಭಯೋತ್ಪಾದನಾ ಸಂಘಟನೆಗಳೆಂದು ಗುರುತಿಸಲು ಅವಕಾಶವಿತ್ತು. ಮುಂಗಾರು ಅಧಿವೇಶನದಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಲು ಅವಕಾಶ ನೀಡಲಾಗಿತ್ತು.
ಎಮರ್ಜೆನ್ಸಿಯಲ್ಲಿ ಏನಾಗಿತ್ತು? ನೆನಪಿಸಿಕೊಳ್ಳಿ: ಕಾಂಗ್ರೆಸ್ಗೆ ಅಮಿತ್ ಶಾ ತಿರುಗೇಟು
ಮೌಲಾನಾ ಮಸೂದ್ ಅಜರ್ ಭಯೋತ್ಪಾದನೆಯಲ್ಲಿ ಪಾಲ್ಗೊಂಡಿದ್ದು, ಈ ಕಾಯ್ದೆಯ ಅಡಿಯಲ್ಲಿ ಆತನನ್ನು ಭಯೋತ್ಪಾದಕ ಎಂದು ಗುರುತಿಸಲಾಗಿದೆ. ಹಾಗೆಯೇ ಉಳಿದವರನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಎಲ್ಲ ನಾಲ್ವರು ಉಗ್ರರ ವಿರುದ್ಧ ರೆಡ್ ಕಾರ್ನರ್ ನೋಟಿಸ್ಗಳನ್ನು ಜಾರಿಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಪಟ್ಟಿಯಲ್ಲಿ ಇನ್ನಷ್ಟು ಹೆಸರುಗಳು ಸೇರ್ಪಡೆಯಾಗಲಿವೆ ಎಂದು ಸರ್ಕಾರ ತಿಳಿಸಿದೆ.