ಚಿದಂಬರಂ ಬಂಧನ ಮುಂದುವರಿಕೆ: ಮನಮೋಹನ್ ಸಿಂಗ್ ಕಳವಳ
ನವದೆಹಲಿ, ಸೆಪ್ಟೆಂಬರ್ 23: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಪಿ. ಚಿದಂಬರಂ ಅವರ ಬಂಧನ ಅವಧಿ ಮುಂದುವರಿಯುತ್ತಲೇ ಇರುವುದರ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.
ತಿಹಾರ್ ಜೈಲಿನಲ್ಲಿರುವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ತೆರಳಿದ್ದ ಡಾ. ಮನಮೋಹನ್ ಸಿಂಗ್, ಚಿದಂಬರಂ ಅವರ ಬಂಧನಕ್ಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆರ್ಥಿಕ ಕುಸಿತ ಎದುರಿಸುವುದು ಹೇಗೆ?: ಮೋದಿಗೆ ಆರು ಸಲಹೆ ನೀಡಿದ ಮನಮೋಹನ್ ಸಿಂಗ್
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಲ್ಲಿ (ಎಫ್ಐಪಿಬಿ) ಭ್ರಷ್ಟಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪಿ. ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಬಳಿಕ ಹಲವು ಬಾರಿ ವಿಚಾರಣೆ ಎದುರಿಸಿದ್ದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹೀಗಾಗಿ ಚಿದಂಬರಂ ಅವರು ತಿಹಾರ್ ಜೈಲಿನಲ್ಲಿದ್ದಾರೆ. ಚಿದಂಬರಂ ಅವರ ಪ್ರಕರಣದಲ್ಲಿ ನ್ಯಾಯಾಲಯವು ನ್ಯಾಯ ಒದಗಿಸಲಿದೆ ಎಂದು ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.
ಶಿಫಾರಸಿಗೆ ಒಪ್ಪಿಗೆ ಕೊಟ್ಟಿದ್ದೇ ಅಪರಾಧವೇ?
'ನಮ್ಮ ದೇಶದ ಸರ್ಕಾರದ ವ್ಯವಸ್ಥೆಯಲ್ಲಿ ಯಾವುದೇ ತೀರ್ಮಾನವನ್ನು ಒಬ್ಬ ವ್ಯಕ್ತಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ನಿರ್ಧಾರವೂ ಕಡತದಲ್ಲಿ ದಾಖಲಾಗುವ ಪ್ರತಿಯೊಬ್ಬರ ನಿರ್ಧಾರವಾಗಿರುತ್ತದೆ. ಒಬ್ಬ ಸಚಿವ ಒಪ್ಪಂದವೊಂದರ ಶಿಫಾರಸುಗಳಿಗೆ ಅನುಮೋದನೆ ನೀಡಿದ ಮಾತ್ರಕ್ಕೆ ಅಪರಾಧ ಎಸಗಿದ ಆರೋಪ ಎದುರಿಸಲು ಹೇಗೆ ಸಾಧ್ಯ' ಎಂದು ಅವರು ಅಚ್ಚರಿಯಿಂದ ಪ್ರಶ್ನಿಸಿದರು.
ಸೋನಿಯಾ ಭೇಟಿ ಬಳಿಕ ಚಿದಂಬರಂ ಹೇಳಿದ್ದೇನು?
ವ್ಯವಸ್ಥೆಯೇ ಕುಸಿದು ಬೀಳುತ್ತದೆ
ಯೋಜನೆಯೊಂದರ ಶಿಫಾರಸಿಗೆ ಅನುಮತಿ ನೀಡಿದ್ದಕ್ಕೆ ಸಚಿವ ಹೊಣೆಗಾರನಾದರೆ ಇಡೀ ಸರ್ಕಾರದ ವ್ಯವಸ್ಥೆಯೇ ಕುಸಿದು ಬೀಳುವ ಅಪಾಯವಿರುತ್ತದೆ ಎಂದು ಮನಮೋಹನ್ ಸಿಂಗ್ ಅವರು ಚಿದಂಬರಂ ಅವರ ಬಂಧನಕ್ಕೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬಂಧನ ಮುಂದುವರಿಕೆಗೆ ಆತಂಕ
'ನಮ್ಮ ಸಹೋದ್ಯೋಗಿ ಪಿ. ಚಿದಂಬರಂ ಅವರನ್ನು ಬಂಧನದ ವಶದಲ್ಲಿ ಮುಂದುವರಿಸಿರುವುದರ ಬಗ್ಗೆ ನಮಗೆ ಕಳವಳವಿದೆ' ಎಂದು ಚಿದಂಬರಂ ಅವರ ಭೇಟಿಯ ಬಳಿಕ ಹೊರಡಿಸಿರುವ ಹೇಳಿಕೆಯಲ್ಲಿ ಸಿಂಗ್ ತಿಳಿಸಿದ್ದಾರೆ. ವಿಚಾರಣೆ ಬಳಿಕ ಚಿದಂಬರಂ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನ ಎದುರಿಸುತ್ತಿದ್ದಾರೆ.
ಡಿಕೆ ಶಿವಕುಮಾರ್ ಭೇಟಿ ಮಾಡದೆ ಹೊರಟ ಸೋನಿಯಾ: ಕಾರಣಗಳು
ಅಧಿಕಾರಿಗಳಿಂದ ಶಿಫಾರಸು ಆಗಿರುವುದು
'ಒಂದು ಪ್ರಸ್ತಾಪವನ್ನು ಡಜನ್ಗಟ್ಟಲೆ ಅಧಿಕಾರಿಗಳು ಪರಿಶೀಲಿಸಿ ಶಿಫಾರಸು ಮಾಡಿರುತ್ತಾರೆ. ಸರ್ವಸಮ್ಮತ ಶಿಫಾರಸಿಗೆ ಸಚಿವರಾಗಿದ್ದ ಪಿ ಚಿದಂಬರಂ ಅನುಮೋದನೆ ನೀಡಿದ್ದಾರೆ. ಈ ವಿಚಾರದಲ್ಲಿ ಅಧಿಕಾರಿಗಳದ್ದು ತಪ್ಪಾಗಿಲ್ಲದೆ ಹೋಗಿದ್ದರೆ ಆ ಶಿಫಾರಸುಗಳಿಗೆ ಅನುಮೋದನೆಯನ್ನಷ್ಟೇ ನೀಡಿದ ಸಚಿವರು ಹೇಗೆ ಅಪರಾಧ ಎಸಗಿದ ಆರೋಪಕ್ಕೆ ಒಳಗಾಗುತ್ತಾರೆ?' ಎಂದು ಕೇಳಿದ್ದಾರೆ.