ಮತ್ತೆ ವಿವಾದದ ಕಿಡಿ ಹೊತ್ತಿಸಿದ ಗಾಂಧಿ ಕುಟುಂಬದ ಮುಕುಟ'ಮಣಿ' ಶಂಕರ್ ಅಯ್ಯರ್!
ನವದೆಹಲಿ, ಮೇ 14 : ಪ್ರಧಾನಿ ನರೇಂದ್ರ ಮೋದಿಯವರ ಜಾತಿಯ ಬಗ್ಗೆ ಪ್ರಸ್ತಾಪಿಸುತ್ತ, ಅವರನ್ನು 'ನೀಚ್ ಆದ್ಮಿ' ಎಂದು ಜರಿದು ಪಕ್ಷದಿಂದಲೇ ಉಚ್ಚಾಟನೆಯಾಗಿದ್ದ 78 ವರ್ಷದ ಕಾಂಗ್ರೆಸ್ ನ ಹಿರಿಯ ನಾಯಕ ಮಣಿ ಶಂಕರ್ ಅವರು, ತಾವು ಅಂದು ಆಡಿದ್ದ ಮಾತನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
"ನಾನು ನನ್ನ ಲೇಖನದಲ್ಲಿ ಏನು ಹೇಳಬೇಕೆಂದುಕೊಂಡಿದ್ದೆನೋ ಅದನ್ನೇ ಹೇಳಿದ್ದೆ. ಲೇಖನದಲ್ಲಿನ ಪ್ರತಿ ಪದವನ್ನೂ ನಾನು ಸಮರ್ಥಿಸಿಕೊಳ್ಳುತ್ತೇನೆ. ಯಾವುದೇ ವಾಗ್ವಾದದಲ್ಲಿ ಭಾಗಿಯಾಗುವ ಉದ್ದೇಶ ನನಗೆ ಇಲ್ಲವೇ ಇಲ್ಲ" ಎಂದು ಅಯ್ಯರ್ ಅವರು ಮಂಗಳವಾರ ಎಎನ್ಐ ಜೊತೆ ಹೇಳಿದ್ದಾರೆ.
ಅಯ್ಯರ್ 'ನೀಚ' ಹೇಳಿಕೆ: ಕೆರಳಿದ ಜನರಿಂದ ಛೀಮಾರಿಯ ಸುರಿಮಳೆ!
2017ರ ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 'ನೀಚ ಕುಲದವರು' ಎಂದು ಮಣಿ ಶಂಕರ್ ಅಯ್ಯರ್ ಅವರು ಹೀಯಾಳಿಸಿದ್ದು, ಭಾರತದ ರಾಜಕೀಯದಲ್ಲಿ ಮಾತ್ರವಲ್ಲ ಕಾಂಗ್ರೆಸ್ ಪಾಳಯದಲ್ಲಿಯೂ ಭಾರೀ ಬಿರುಗಾಳಿ ಎಬ್ಬಿಸಿತ್ತು. ಈ ಹೇಳಿಕೆ ನೀಡಿದ್ದಕ್ಕೆ ಅವರನ್ನು ಪಕ್ಷದಿಂದಲೇ ಕಿತ್ತುಹಾಕಲಾಗಿತ್ತು. ಆದರೆ, ಮತ್ತೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ನರೇಂದ್ರ ಮೋದಿಯವರು 'ಹೊಲಸು ಬಾಯಿಯವರು' ಎಂದು ಮತ್ತೆ ಅವಹೇಳನದ ಮಾತನ್ನು ಅಯ್ಯರ್ ಆಡಿದ್ದು, ಹುತಾತ್ಮರ ತ್ಯಾಗವನ್ನು ದುರ್ಬಳಸಿಕೊಂಡು ದೇಶ ವಿರೋಧಿ ಚಟುವಟಿಕೆಯಲ್ಲಿ ಮೋದಿ ತೊಡಗಿದ್ದಾರೆ. ಮೇ 23ರ ನಂತರ ಅವರು ಪ್ರಧಾನಿ ಪಟ್ಟ ತ್ಯಾಗ ಮಾಡುವುದು ಖಚಿತ ಎಂದು ಮಣಿ ಶಂಕರ್ ಅಯ್ಯರ್ ಅವರು ಭವಿಷ್ಯ ನುಡಿದಿದ್ದಾರೆ.
ಅಂದೇ ಭವಿಷ್ಯ ನುಡಿದಿದ್ದೆ
ಗುಜರಾತ್ ಚುನಾವಣೆಯ ಸಂದರ್ಭದಲ್ಲಿ 2017ರ ಡಿಸೆಂಬರ್ ನಲ್ಲಿ ನಾನು ಮೋದಿಯನ್ನು ಹೇಗೆ ಬಣ್ಣಿಸಿದ್ದೆ ನೆನಪಿಸಿಕೊಳ್ಳಿ. ನರೇಂದ್ರ ಮೋದಿ ಅವರನ್ನು 'ನೀಚಿ ಆದ್ಮಿ' ಎಂದು ಹೇಳಿ ನಾನು ಆಗಲೇ ಭವಿಷ್ಯ ನುಡಿದಿರಲಿಲ್ಲವೆ? ಮೇ 23ರ ನಂತರ ನರೇಂದ್ರ ಮೋದಿಯವರನ್ನು ಜನ ಹೊರಹಾಕುವುದು ಖಚಿತ. ಈ ದೇಶದ ಅತ್ಯಂತ ಹೊಲಸು ಬಾಯಿಯ ಮೋದಿಗೆ ದೇಶದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ದಿಪ್ರಿಂಟ್ ನಲ್ಲಿ ಮಣಿ ಶಂಕರ್ ಅಯ್ಯರ್ ಅವರು ಬರೆದಿದ್ದಾರೆ.
ಅಯ್ಯರ್ ಕ್ಷಮೆ ಕೇಳಬೇಕೆಂದಿದ್ದ ರಾಹುಲ್
ಈ ವ್ಯಕ್ತಿ 'ನೀಚ್ ಆದ್ಮಿ'. ಅವರು ನಾಗರಿಕರಲ್ಲ. ಇಂದಿನ ಪರಿಸ್ಥಿತಿಯಲ್ಲಿ ಅಷ್ಟು ಕೆಟ್ಟದಾದ ರಾಜಕೀಯವನ್ನು ಮಾಡುವ ಅಗತ್ಯವಿರಲಿಲ್ಲ ಎಂದು ಮಣಿಶಂಕರ್ ಅಯ್ಯರ್ ಅವರು ಗುಜರಾತ್ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಮಾತುಗಳು ದೇಶದಾದ್ಯಂತ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿದ್ದಂತೆ, ಅಯ್ಯರ್ ಅವರು ದೇಶದ ಕ್ಷಮೆ ಕೋರಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು. ನಂತರ ಸಾಂಕೇತಿಕವಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ನನ್ನನ್ನು ಇಲ್ಲವಾಗಿಸುವುದಕ್ಕೆ ಪಾಕ್ ನಲ್ಲಿ ಅಯ್ಯರ್ ಸುಪಾರಿ: ಮೋದಿ
'ಸೇನೆಯನ್ನು ಮೂರ್ಖರಂತೆ ಬಿಂಬಿಸಿದ್ದಾರೆ'
ಚುನಾವಣಾ ಪ್ರಚಾರದಲ್ಲಿ ಸಿಆರ್ಪಿಎಫ್ ಜವಾನರ ತ್ಯಾಗವನ್ನು ದುರ್ಬಳಸಿಕೊಂಡು ನರೇಂದ್ರ ಮೋದಿಯವರು ದೇಶ ವಿದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಅವರನ್ನು ಎಚ್ಚರಿಸಬೇಕು. ಬಾಲಕೋಟ್ ದಾಳಿಗೆ ಸಂಬಂಧಿಸಿದಂತೆ ತಮ್ಮ ವೈಜ್ಞಾನಿಕ ವ್ಯಾಖ್ಯಾನದಲ್ಲಿ ಭಾರತೀಯ ವಾಯು ಸೇನೆಯನ್ನು ಮೂರ್ಖರಂತೆ ಬಿಂಬಿಸಿ ಸೇನೆಯನ್ನು ಅವಮಾನ ಮಾಡಿದ್ದಾರೆ ಎಂದು ಅಯ್ಯರ್ ವಾಗ್ದಾಳಿ ಮಾಡಿದ್ದಾರೆ. ಕೆನಡಾದ ನಾಗರಿಕನೆಂದು ಹೇಳಿರುವ ನಟ ಅಕ್ಷಯ್ ಕುಮಾರ್ ಅವರಿಗೆ ಐಎನ್ಎಸ್ ಸುಮಿತ್ರಾ ಸೇನಾ ಹಡಗಿನಲ್ಲಿ ಪ್ರಯಾಣಿಸಲು ಅವಕಾಶವನ್ನು ಮೋದಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದೂ ಟೀಕಾಪ್ರಹಾರ ಮಾಡಿದ್ದಾರೆ.
ಬೇಜವಾಬ್ದಾರಿ ರಾಜಕಾರಣಿ ಮಣಿ
ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ಹೇಳಿಕೆ ನೀಡಿ ಸ್ಯಾಮ್ ಪಿತ್ರೋಡಾ ಅವರು ಎಲ್ಲರ ಗಮನ ಸೆಳೆಯುತ್ತಿರುವುದರಿಂದ ತೀವ್ರ ವಿಚಲಿತರಾಗಿರುವ ಬೇಜವಾಬ್ದಾರಿ ರಾಜಕಾರಣಿ ಮಣಿ ಶಂಕರ್ ಅಯ್ಯರ್ ಅವರು, ಸ್ಯಾಮ್ ಪಿತ್ರೋಡಾ ಬಾಯಲ್ಲಿದ್ದ ಪಾದರಕ್ಷೆಯನ್ನು ಕಿತ್ತುಕೊಂಡು ತಮ್ಮ ಬಾಯಲ್ಲಿ ಅಯ್ಯರ್ ಅವರು ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರಧಾನಿ ಬಗ್ಗೆ ಎಂಥ ನೀಚತನದ ಮಾತುಗಳನ್ನಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು
ಗಾಂಧಿ ಕುಟುಂಬದ ಮುಕುಟ'ಮಣಿ'
ಬಿಜೆಪಿಯ ರಾಷ್ಟ್ರೀಯ ವಕ್ತಾರ, ಲೋಕಸಭೆ ಚುನಾವಣೆಯಲ್ಲಿ ಪುರಿ ಕ್ಷೇತ್ರದಿಂದ ಸ್ಪರ್ಧಿಸಿರುವ ಸಂಬಿತ್ ಪಾತ್ರಾ ಅವರು ಕೂಡ, ಮಣಿ ಶಂಕರ್ ಅಯ್ಯರ್ ಅವರನ್ನು ಗಾಂಧಿ ಕುಟುಂಬದ ಮುಕುಟ'ಮಣಿ' ಎಂದು ವ್ಯಂಗ್ಯವಾಗಿ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದ್ವೇಷದ ಮತ್ತು ಕೀಳುಮಟ್ಟದ ಮಾತುಗಳನ್ನಾಡುತ್ತ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 'ಪ್ರೀತಿ ಪ್ರೇಮ' ಹರಡುವ ರಾಜಕಾರಣಕ್ಕೆ ತಮ್ಮ ಕಾಣಿಕೆಯನ್ನೂ ಈ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದಾರೆ ಎಂದು ಚಾಟಿಯೇಟು ನೀಡಿದ್ದಾರೆ.
ಅಯ್ಯರ್ ಅವರಿಗೆ ಹೊಸದೇನಲ್ಲ
ಚುನಾವಣೆಯ ಸಂದರ್ಭದಲ್ಲಿ ಕೀಳು ಮಟ್ಟದ ಮಾತುಗಳನ್ನಾಡುವುದು ಮಣಿ ಶಂಕರ್ ಅಯ್ಯರ್ ಅವರಿಗೆ ಹೊಸದೇನಲ್ಲ. 2014ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ, ನರೇಂದ್ರ ಮೋದಿಯವರು ತಮ್ಮನ್ನು ತಾವು ಚಾಯ್ ವಾಲಾ ಎಂದು ಹೇಳಿಕೊಂಡಿದ್ದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ 'ಚಾಯ್ ವಾಲಾ' ನರೇಂದ್ರ ಮೋದಿಯವರು ಚಹಾವನ್ನು ವಿತರಿಸಲು ಬರಬಹುದು ಎಂದು ವ್ಯಂಗ್ಯವಾಡಿದ್ದು ಕೂಡ ವಿವಾದ ಸೃಷ್ಟಿಸಿತ್ತು. ನಂತರ ಆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 282 ಸೀಟು ಗಳಿಸಿ, ಕಾಂಗ್ರೆಸ್ 44 ಪಡೆದು ಹೀನಾಯ ಸೋಲು ಅನುಭವಿಸಿತ್ತು ಇತಿಹಾಸ.
ಮಲ್ಲಿಕಾರ್ಜುನ ಖರ್ಗೆ ವಿವಾದದ ಮಾತು
ಇದೇ ರೀತಿಯ ಹೇಳಿಕೆಯನ್ನು ಕರ್ನಾಟಕ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿ ವಿವಾದಕ್ಕೆ ಈಡಾಗಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಕಳೆದ ಬಾರಿಗಿಂತ, ಅಂದರೆ 44 ಸೀಟುಗಳಿಗಿಂತ ಹೆಚ್ಚಿನ ಸೀಟುಗಳನ್ನು ಗೆದ್ದರೆ ನರೇಂದ್ರ ಮೋದಿಯವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ, ಅವರ ಮಗ ಪ್ರಿಯಾಂಕ್ ಖರ್ಗೆ ಅವರು ಕೂಡ, ಒಂದು ವೇಳೆ ಮೋದಿಯವರು ಆತ್ಮಹತ್ಯೆ ಮಾಡಿಕೊಳ್ಳಲು ರೆಡಿಯಾದರೆ, ರಸ್ತೆಯನ್ನು ಸಿದ್ಧಪಡಿಸುವುದಾಗಿ ಹೇಳಿ ವಿವಾದದ ಕಿಡಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಸದ್ಯಕ್ಕೆ ಪ್ರಧಾನಿಯ ಹುದ್ದೆಯ ಕನಸಿನಲ್ಲಿರುವ ರಾಹುಲ್ ಗಾಂಧಿ ಅವರು, ತಮ್ಮ ರಾಜಕೀಯ ಜೀವನಕ್ಕೇ ಹೊಡೆತ ನೀಡುತ್ತಿರುವ, ಈ ಸಲ್ಲದ ಮಾತುಗಳನ್ನಾಡುತ್ತಿರುವ ನಾಯಕರ ವಿರುದ್ಧ ಕ್ರಮ ಜರುಗಿಸುವರೆ?
ಮಣಿ ವಿರುದ್ಧವೇ ಹಬ್ಬಿದ್ದ ಗಾಳಿಸುದ್ದಿ
ಕೆಲ ದಿನಗಳ ಹಿಂದೆ ಮಣಿ ಶಂಕರ್ ಅಯ್ಯರ್ ಅವರೇ ವಿವಾದದ ವಸ್ತುವಾಗಿದ್ದರು. ಹಲವಾರು ದಿನಗಳ ಕಾಲ ಅವರ ಪತ್ತೆಯೇ ಇಲ್ಲದಿದ್ದರಿಂದ ನಾನಾ ರೀತಿಯ ಮಾತುಗಳು ಕೇಳಿಬಂದಿದ್ದವು, ಊಹಾಪೋಹಗಳು ಹರಿದಾಡುತ್ತಿದ್ದವು. ಮಣಿ ಅವರು ಪಾಕಿಸ್ತಾನದ ಉಗ್ರರಿಗೆ ಸಹಾಯ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕೋಟ್ ಮೇಲೆ ನಡೆದ ಏರ್ ಸ್ಟ್ರೈಕ್ ನಲ್ಲಿ ಅವರು ಹತರಾಗಿದ್ದಾರೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ನಂತರ ಅವರೇ ಸ್ವತಃ ಟ್ವಿಟ್ಟರಿಗೆ ಬಂದು ಸ್ಪಷ್ಟೀಕರಣ ನೀಡಿದ್ದರು.