ಬಿಜೆಪಿಯವರು 'ಕೊಲೆಗಡುಕರು': ಮಣಿಶಂಕರ್ ಅಯ್ಯರ್ ಮತ್ತೊಂದು ವಿವಾದ
ನವದೆಹಲಿ, ಜನವರಿ 15: ವಿವಾದಾತ್ಮಕ ಹೇಳಿಕೆ ಮತ್ತು ನಡೆಗಳಿಂದ ಸುದ್ದಿಯಲ್ಲಿರುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೆಹಲಿಯ ಶಹೀನ್ ಬಾಘ್ನಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ರಾತ್ರಿ 9.30ರಿಂದ ಬೆಳಗಿನವರೆಗೂ ನಡುಗುವ ಚಳಿಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಗುಂಪಿಗೆ ಬೆಂಬಲ ಸೂಚಿಸಲು ತೆರಳಿದ್ದ ಮಣಿಶಂಕರ್ ಅಯ್ಯರ್, ಬಿಜೆಪಿಯನ್ನು 'ಕೊಲೆಗಡುಕರು' ಎಂದು ಕರೆಯುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸಿಎಎ ಕುರಿತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದೇನು?
'ದೇಶಕ್ಕಾಗಿ ಏನೇನು ತ್ಯಾಗದ ಅಗತ್ಯವಿದೆಯೋ ಅದನ್ನು ಮಾಡಲು ನಾನು ಸಿದ್ಧನಿದ್ದೇನೆ. ಯಾರ ಕೈ ಶಕ್ತಿಯುತವಾಗಿದೆ ಎಂದು ನಾವು ನೋಡೇ ಬಿಡುತ್ತೇವೆ. ನಮ್ಮದೋ ಅಥವಾ ಆ ಕೊಲೆಗಡುಕರದ್ದೋ' ಎಂದು ಮಂಗಳವಾರ ಪ್ರತಿಭಟನಾ ಸ್ಥಳದಲ್ಲಿ ಅವರು ಹೇಳಿದರು.
ಬಿಜೆಪಿ ಸರ್ಕಾರವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೆ ಅದೀಗ 'ಸಬ್ ಕಾ ಸಾಥ್ ಸಬ್ ಕಾ ವಿನಾಶ್' ಮಾಡುವುದರತ್ತ ಸಾಗುತ್ತಿದೆ ಎಂದು ಆರೋಪಿಸಿದರು.
'ಆರ್ಥಿಕತೆಯ ಕುಸಿತವನ್ನು ತಡೆದು ಸುಧಾರಣೆ ಮಾಡುವಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರವು ಸಿಎಎ ಮತ್ತು ಎನ್ಆರ್ಸಿಯನ್ನು ಜಾರಿಗೆ ತಂದಿದೆ. ಆದರೆ ಅವರು ಜನರನ್ನು ಮತ್ತೆ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂಬುದನ್ನು ಶಹೀನ್ ಬಾಘ್ನಲ್ಲಿನ ಧೈರ್ಯಶಾಲಿ ಮಹಿಳೆಯರು ಅವರಿಗೆ ಮನವರಿಕೆ ಮಾಡಿದ್ದಾರೆ' ಎಂದು ಹೇಳಿದರು.
ಸಿಎಎ; ಯುಪಿಯಲ್ಲಿ 40 ಸಾವಿರ ಹಿಂದೂ ವಲಸಿಗರು
ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆಯೇ ಪ್ರತಿಭಟನೆ ನಡೆಸುತ್ತಿರುವ ನೂರಾರು ಮಹಿಳೆಯರನ್ನು ಅಯ್ಯರ್ ಶ್ಲಾಘಿಸಿದರು. 'ನೀವು ಹೇಳಿದ್ದೀರಿ, ನಿಮಗೆ ಯಾವುದೇ ರಾಜಕಾರಣಿ ಬೇಕಿಲ್ಲ ಎಂದು. ನೀವು ಇಲ್ಲಿ ಕಳೆದ ಮೂವತ್ತು ದಿನಗಳಿಂದ ಮನೆ ಮತ್ತು ಒಲೆಯನ್ನು ಬಿಟ್ಟು ಬಂದು ಕೂರುತ್ತಿದ್ದೀರಿ' ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಣಿಶಂಕರ್ ಅಯ್ಯರ್, ದೇಶದ ನೈಜ ನಾಗರಿಕರು ದಾಖಲೆಗಳ ಪುರಾವೆಗಳನ್ನು ನೀಡಬೇಕು ಎಂದು ಒತ್ತಾಯಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಹೇಳಿದರು.