ಪೊಲೀಸ್ ವರದಿ: ಕೇಜ್ರಿವಾಲ್ ಕಪಾಳಮೋಕ್ಷದ ಹಿಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನದ್ದೇ ಕಿತಾಪತಿ
ನವದೆಹಲಿ, ಮೇ 6: ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಪಾಳಮೋಕ್ಷದ ಮಾಡಿದ ಯುವಕ ಯಾರು ಎನ್ನುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೇಜ್ರಿವಾಲ್ ಅವರ ಮೇಲೆ, ಚಪ್ಪಲಿ ಎಸೆಯುವುದು, ಶಾಹಿ ಚೆಲ್ಲುವುದು, ಕಪಾಳಕ್ಕೆ ಹೊಡೆಯುವ ಇಂತಹ ತಲೆತಗ್ಗಿಸುವಂತಹ ಘಟನೆಗಳು ನಡೆಯುವುದು ಇದೇನು ಮೊದಲಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಘಟನೆಯನ್ನು ಕೇಜ್ರಿವಾಲ್ ಎದುರಿಸಿದ್ದರು.
ರೋಡ್ ಶೋ ವೇಳೆ ಕೇಜ್ರಿವಾಲ್ ಗೆ ಕಪಾಳಮೋಕ್ಷ: ಆಪ್ ಕಾರ್ಯಕರ್ತನಿಂದಲೇ ಹಲ್ಲೆ?
2014ರ ಸಾರ್ವತ್ರಿಕ ಚುನಾವಣೆಯ ವೇಳೆಯೂ ಕೇಜ್ರಿವಾಲ್ ಮೇಲೆ ವ್ಯಕ್ತಿಯೊರ್ವ ಕಪಾಳ ಮೋಕ್ಷ ಮಾಡಿದ್ದ ಘಟನೆ ದೆಹಲಿಯ ದಕ್ಷಿಣಪುರಿ ವ್ಯಾಪ್ತಿಯಲ್ಲಿ ನಡೆದಿತ್ತು. ಹಲ್ಲೆ ನಡೆಸಿದ್ದವನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಾಗಿದ್ದ, ಈ ವಿದ್ಯಮಾನ ಆಮ್ ಆದ್ಮಿ ಪಕ್ಷಕ್ಕೇ ತಿರುಗುಬಾಣವಾಗಿತ್ತು.
ಈ ಬಾರಿಯ ಚುನಾವಣಾ ಪ್ರಚಾರದ ವೇಳೆಯೂ ಅಂತದ್ದೇ ಘಟನೆ ಮರುಕಳಿಸಿದೆ. ಕೇಜ್ರಿವಾಲ್ ಇದ್ದ ಓಪನ್ ಜೀಪ್ ಹತ್ತಿದ ವ್ಯಕ್ತಿ, ಅವರಿಗೆ ಮುಖಕ್ಕೆ ಹೊಡೆದು ಪೊಲೀಸರಿಗೆ ಅತಿಥಿಯಾಗಿದ್ದ. ತೀವ್ರ ವಿಚಾರಣೆಯ ನಂತರ, ಈತ ಯಾರು, ಯಾತಕ್ಕಾಗಿ ಹೀಗೆ ಮಾಡಿದ ಎನ್ನುವ ವಿಚಾರ ಹೊರಬಂದಿದೆ.
ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿ ಕಾರನ್ನು ಏರಿ, ಕೇಜ್ರಿವಾಲ್ ಮುಖಕ್ಕೆ ಹೊಡೆದಿದ್ದ
ನವದೆಹಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೋತಿ ನಗರದಲ್ಲಿ ಶನಿವಾರ ( ಮೇ 4) ಪಕ್ಷದ ಅಭ್ಯರ್ಥಿ ಬೃಜೇಶ್ ಗೋಯಲ್ ಪರ ರೋಡ್ ಶೋ ನಡೆಸುತ್ತಿದ್ದ ವೇಳೆ, ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿ ಕಾರನ್ನು ಏರಿ, ಕೇಜ್ರಿವಾಲ್ ಮುಖಕ್ಕೆ ಹೊಡೆದಿದ್ದ. ಕೂಡಲೇ ಅವನನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ತೆರೆದ ವಾಹನದಲ್ಲಿ ಜನರತ್ತ ಕೈಬೀಸುತ್ತಾ ಸಾಗುತ್ತಿದ್ದ ಕೇಜ್ರಿವಾಲ್ ಈ ಘಟನೆಯಿಂದ ತೀವ್ರ ವಿಚಲಿತರಾದಂತೆ ಕಂಡು ಬಂದಿತ್ತು. (ಚಿತ್ರ: ಪಿಟಿಐ)
ಈತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಎನ್ನುವ ವಿಚಾರ ಹೊರಬಂದಿದೆ
ಪೊಲೀಸ್ ವಿಚಾರಣೆಯ ವೇಳೆ, ಹಲ್ಲೆ ನಡೆಸಿದವನನ್ನು ಸುರೇಶ್ ಎಂದು ಗುರುತಿಸಲಾಗಿ, 33ವರ್ಷದ ಈತ, ತಾನು ದೆಹಲಿಯ ಕೈಲಾಶ್ ಪಾರ್ಕ್ ನಿವಾಸಿ ಎನ್ನುವ ಮಾಹಿತಿಯನ್ನು ನೀಡಿದ್ದ. ತೀವ್ರ ವಿಚಾರಣೆಯ ನಂತರ, ಈಗ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಎನ್ನುವ ವಿಚಾರ ಹೊರಬಂದಿದೆ. ಪಕ್ಷದ ನಾಯಕರ ಉದ್ದಟತನ, ಕಾರ್ಯಕರ್ತರನ್ನು ಕಡೆಗಣಿಸುವುದು, ಇದರಿಂದ ಸಿಟ್ಟಿಗೆದ್ದು, ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಿದ್ದಾಗಿ ಈತ ಒಪ್ಪಿಕೊಂಡಿದ್ದಾನೆ. (ಚಿತ್ರ: ಪಿಟಿಐ)
ಚಿಂದಿ ವ್ಯಾಪಾರ ಮಾಡುವ ಸುರೇಶ್
ಚಿಂದಿ ವ್ಯಾಪಾರ ಮಾಡುವ ಸುರೇಶ್, ಹಿಂದಿನಿಂದಲೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಾಗಿದ್ದ. ಪಕ್ಷದ ಸಾರ್ವಜನಿಕ ಸಭೆಯಲ್ಲಿ ಈತ ಕೆಲಸ ನಿರ್ವಹಿಸುತ್ತಿದ್ದ. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದರು, ಅವಮಾನಿಸುತ್ತಿದ್ದರು, ನಮಗ್ಯಾರಿಗೂ ಬೆಲೆಯಿಲ್ಲ. ಹಾಗಾಗಿ, ಈ ಕೆಲಸ ಮಾಡಿದೆ ಎಂದು ಸುರೇಶ್ ತಪ್ಪೊಪ್ಪಿಕೊಂಡಿದ್ದಾನೆ. (ಚಿತ್ರ: ಪಿಟಿಐ)
ಕೇಜ್ರಿವಾಲ್ ಸಾಗುತ್ತಿದ್ದ ಓಪನ್ ಜಿಪ್ಸಿಯ ಜೊತೆಗೆ ಬರುತ್ತಿದ್ದ
ಘಟನೆ ನಡೆದ ಕೂಡಲೇ ಡಿಸಿಪಿ ಹಂತದ ವಿಚಾರಣೆಗೆ ದೆಹಲಿ ಪೊಲೀಸ್ ಆಯುಕ್ತರು ಆದೇಶಿಸಿದ್ದರು. ಘಟನೆಯ ಸಂಬಂಧ ಇದುವರೆಗೂ FIR ದಾಖಲಾಗಿಲ್ಲ ಮತ್ತು ಆಮ್ ಆದ್ಮಿ ಪಕ್ಷದಿಂದ ಲಿಖಿತ ದೂರು ಬಂದಿಲ್ಲ ಎಂದು ವರದಿಯಾಗಿದೆ. ಆಮ್ ಆದ್ಮಿ ಪಕ್ಷದ ಟೋಪಿಯನ್ನು ಧರಿಸಿದ್ದ ಸುರೇಶ್, ಕೇಜ್ರಿವಾಲ್ ಸಾಗುತ್ತಿದ್ದ ಓಪನ್ ಜಿಪ್ಸಿಯ ಬಲಭಾಗದಲ್ಲಿ ವಾಹನದ ಜೊತೆಗೆ ಬರುತ್ತಿದ್ದ. ಪಕ್ಷದ ಟೋಪಿ ಧರಿಸಿದ್ದರಿಂದ, ಇವನನ್ನು ಯಾರೂ ಪ್ರಶ್ನಿಸಿರಲಿಲ್ಲ. (ಚಿತ್ರ: ಪಿಟಿಐ)
ದೆಹಲಿಯ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳಿಗೆ ಮೇ ಹನ್ನೆರಡರಂದು ಚುನಾವಣೆ
ಸಂಜೆ ನಾಲ್ಕರಿಂದ, ರಾತ್ರಿ ಹತ್ತು ಗಂಟೆಯವರೆಗಿನ ಕೇಜ್ರಿವಾಲ್ ರೋಡ್ ಶೋಗೆ, ಸಂಘಟಕರ ಜೊತೆ ಮಾತುಕತೆ ನಡೆಸಿ ಬಿಗಿಭದ್ರತೆಯನ್ನು ದೆಹಲಿ ಪೊಲೀಸರು ಒದಗಿಸಿದ್ದರು. ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯೂ ಕೇಜ್ರಿವಾಲ್ ಮೇಲೆ ವ್ಯಕ್ತಿಯೊರ್ವ ಕಪಾಳ ಮೋಕ್ಷ ಮಾಡಿದ್ದ.ಆ ಘಟನೆ ದೆಹಲಿಯ ದಕ್ಷಿಣಪುರಿ ವ್ಯಾಪ್ತಿಯಲ್ಲಿ ನಡೆದಿತ್ತು. ದೆಹಲಿಯ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳಿಗೆ ಮೇ ಹನ್ನೆರಡರಂದು ಚುನಾವಣೆ ನಡೆಯಲಿದ್ದು, 23ಕ್ಕೆ ಫಲಿತಾಂಶ ಹೊರಬೀಳಲಿದೆ.