ಬಿಜೆಪಿ ಗೆಲ್ಲಬಹುದೆಂಬ ಹತಾಶೆಯಲ್ಲಿ ಮಮತಾ ನಾಟಕವಾಡುತ್ತಿದ್ದಾರೆ: ರಾಜನಾಥ್ ಸಿಂಗ್
ನವದೆಹಲಿ, ಮಾರ್ಚ್ 16: ಮುಂಬರಲಿರುವ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಗೆಲ್ಲಬಹುದೆಂಬ ಹತಾಶೆಯಿಂದ ಸಿಎಂ ಮಮತಾ ಬ್ಯಾನರ್ಜಿ ಇಂತಹ ನಾಟಕವಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ಸಿಂಗ್ ಹೇಳಿದ್ದಾರೆ.
ಈ ಹತಾಶೆಯಲ್ಲಿಯೇ ಅವರು ತಮ್ಮ ಕಾಲಿಗೆ ಆಗಿರುವ ಗಾಯದ ಕುರಿತು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗಿಲ್ಲ ಅದೃಷ್ಟ; ಎಬಿಪಿ-ಸಿ ವೋಟರ್ ಸಮೀಕ್ಷೆ
ಮಮತಾ ದೀದಿ ಬಿಟ್ಟರೆ, ಈ ರೀತಿ ಯಾರೂ ಆರೋಪಗಳನ್ನು ಮಾಡಿಲ್ಲ. ತನಿಖಾ ಸಂಸ್ಥೆಗಳು ಮತ್ತು ಪ್ರತ್ಯಕ್ಷದರ್ಶಿಗಳೇ ಭದ್ರತಾ ಕೊರತೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಆದರೆ, ಮಮತಾ ಅವರು ಮಾತ್ರ ಹತಾಶೆಯಲ್ಲಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮಮತಾ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಖಚಿತ
ಇದೇ ವೇಳೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಖಚಿತ ಎಂದಿರುವ ಅವರು, ಬಹುಮತದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
2014 ರಿಂದ ದೇಶದಲ್ಲಿ ಮೋದಿ ಸರ್ಕಾರವಿದೆ
ಪ್ರಧಾನಮಂತ್ರಿ ದೇಶವನ್ನು ಮುನ್ನಡೆಸಲು ಅಸಮರ್ಥರಾಗಿದ್ದಾರೆ ಎಂಬ ಮಮತಾ ಅವರ ಆರೋಪ ಕುರಿತು ಮಾತನಾಡಿ, ಈ ಆರೋಪಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. 2014 ರಿಂದ ಇಲ್ಲಿಯವರೆಗೆ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರವನ್ನು ನಡೆಸುತ್ತಿದ್ದೇವೆ. ಜನರು ನಮಗೆ ಬೆಂಬಲ ನೀಡಿದ್ದಾರೆಂದು ಹೇಳಿದ್ದಾರೆ.
2019ರಲ್ಲೇ ಸುಳಿವು ಸಿಕ್ಕಿತ್ತು
2019ರ ಲೋಕಸಭಾ ಚುನಾವಣೆಯ ಫಲಿತಾಂಶ ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಏನಾಗಲಿದೆ ಎಂಬ ಸುಳಿವನ್ನು ನೀಡಿತ್ತು ಎಂದಿದ್ದಾರೆ.
ನಮ್ಮದು ಪ್ರಜಾಪ್ರಭುತ್ವ ಪಕ್ಷ
ಇದೇ ವೇಳೆ ಮುಖ್ಯಮಂತ್ರಿ ಅಭ್ಯರ್ಥಿಗಳಿಲ್ಲ ಕಾಲ ಬಿಜೆಪಿಗೆ ಹಿನ್ನಡೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಪ್ರಜಾಪ್ರಭುತ್ವ ಪಕ್ಷ. ಗೆಲುವು ಸಾಧಿಸಿದ ಶಾಸಕರೇ ಅವರ ನಾಯಕರನ್ನು ಆಯ್ಕೆ ಮಾಡಲಿದ್ದಾರೆಂದು ಹೇಳಿದ್ದಾರೆ.