ದೆಹಲಿಯ ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಹತ್ಯೆಗೆ ಪ್ರಮುಖ ಕಾರಣಗಳು?
ನವದೆಹಲಿ, ಅಕ್ಟೋಬರ್ 15: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಸಿಂಘು ಗಡಿಯಲ್ಲಿ ಶುಕ್ರವಾರ ಅಮಾನುಷ ಘಟನೆಯೊಂದು ನಡೆದಿದೆ.
ದೆಹಲಿಯ ಹೊರಗಿನ ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಎಂಬ 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯ ದೇಹವು ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆ ಬಳಿ ಬ್ಯಾರಿಕೇಡ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೈಗಳನ್ನು ಕತ್ತರಿಸಲಾಗಿದೆ. ಚೂಪಾದ ಆಯುಧದಿಂದ ವ್ಯಕ್ತಿಯ ದೇಹದ ಮೇಲೆ ದಾಳಿ ಮಾಡಿದ ಗುರುತುಗಳು ಪತ್ತೆಯಾಗಿವೆ. ಘಟನಾ ಸ್ಥಳದಲ್ಲಿ ಪ್ರತಿಭಟನಾನಿರತರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸರಿಗೂ ಸಹ ಮೃತದೇಹದ ಬಳಿ ಹೋಗಲು ಆಗದಷ್ಟು ಜನ ಕಿಕ್ಕಿರಿದು ತುಂಬಿದ್ದರು.
ಸಿಂಘು ಗಡಿಯಲ್ಲಿ ಯುವಕನ ಹತ್ಯೆ ಮಾಡಿ ದೇಹ ಬ್ಯಾರಿಕೇಡ್ಗೆ ತೂಗುಹಾಕಿ ದುಷ್ಕೃತ್ಯ
ಸಂಯುಕ್ತ ಕಿಸಾನ್ ಮೋರ್ಚಾ ನಿಹಾಂಗ್ಗಳು ಹತ್ಯೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಲಖ್ಬೀರ್ ಅವರು 'ಸರ್ಬಲೋಹ್ ಗ್ರಂಥ'ದಲ್ಲಿ ತ್ಯಾಗ ಮಾಡಲು ಯತ್ನಿಸಿರುವ ಬಗ್ಗೆ ಹೇಳಿದ್ದರಿಂದ ಅವರನ್ನು ಕೊಂದಿದ್ದಾರೆ ಎಂದು ನಿಹಾಂಗ್ಸ್ ಹೇಳಿದೆ. ಹಾಗಿದ್ದರೆ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಸಿಂಘು ಗಡಿಯಲ್ಲಿ ಹತ್ಯೆಗಳ ಸರಪಳಿ ಹೇಗೆ ನಡೆದಿದೆ ಎಂಬುದನ್ನು ಮುಂದೆ ಓದಿ ತಿಳಿಯೋಣ.
ಸಿಂಘು ಗಡಿಯಲ್ಲಿ ಹತ್ಯೆಗೆ ಕಾರಣವಾದ ಘಟನೆಗಳ ಸರಪಳಿ:
* ಲಖಬೀರ್ ಸಿಂಗ್ ಮೂರು ದಿನಗಳ ಹಿಂದೆ ಸಿಂಗು ಗಡಿಗೆ ತೆರಳಿದ್ದು, ದೆಹಲಿ ಗಡಿಗೆ ಹತ್ತಿರವಿರುವ ಮೊದಲ ಹಂತದ ಬಳಿ ನಿಹಾಂಗ್ ಕ್ಯಾಂಪ್ನಲ್ಲಿ ತಂಗಿದ್ದರು.
* ಈ ಘಟನೆ ಮುಂಜಾನೆ 3 ಗಂಟೆಗೆ ನಡೆದಿದ್ದು, ಲಕ್ಬೀರ್ ಸರ್ಬಲೋಹ್ ಗ್ರಂಥ್ ಅನ್ನು ಹೊಂದಿದ್ದ ಎಂದು ತಿಳಿದುಬಂದಿದೆ.
* ಅಲ್ಲಿನ ನಿಹಾಂಗ್ ಸಿಖ್ಖರಲ್ಲಿ ಒಬ್ಬನು ಲಖ್ಬೀರ್ನನ್ನು ಗುರುತಿಸಿದನು ಮತ್ತು ಅವನೊಂದಿಗೆ ಏಕೆ ಸರ್ಬಲೋಹ್ ಗ್ರಂಥವನ್ನು ಹೊಂದಿದ್ದನೆಂದು ವಿಚಾರಿಸಿದನು.
* ಪವಿತ್ರ ಪುಸ್ತಕವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಲಖ್ಬೀರ್ ಮೇಲೆ ಆರೋಪಿಸಲಾಯಿತು.
* ಈ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಹಿಂಸಾತ್ಮಕ ರೂಪಕ್ಕೆ ತಿರುಗಿತು. ಲಕ್ಬೀರ್ ಕೈಯನ್ನು ಕತ್ತರಿಸಲಾಯಿತು ಮತ್ತು ಅವರಲ್ಲಿ ಅನೇಕರು ಅವರ ಕಾಲುಗಳನ್ನೂ ಕತ್ತರಿಸುವಂತೆ ಸಲಹೆ ನೀಡಿದ್ದರು.
* ಲಖಬೀರ್ ಸಿಂಗ್ ಪ್ರಜ್ಞೆ ಕಳೆದುಕೊಂಡಾಗ, ಅವನು ಸಾಯಲು ಬಿಟ್ಟರು. ನಂತರ, ಆತನ ದೇಹವನ್ನು ಬ್ಯಾರಿಕೇಡ್ಗೆ ಕಟ್ಟಲಾಯಿತು. ಮುಂಜಾನೆ 5 ಗಂಟೆ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ನಿಹಾಂಗ್ ಎಂದರೆ ಯಾರು?:
ನಿಹಾಂಗ್ ಎಂಬುದು ಸಿಖ್ ತೀವ್ರವಾದಿ ಹೋರಾಟಗಾರರ ಗುಂಪು. ನೀಲಿ ನಿಲುವಂಗಿ, ಉಕ್ಕಿನ ಕೋಟ್ ತೊಡುವ ಇವರು ಸದಾ ತಮ್ಮ ಬಳಿ ಕತ್ತಿ ಇಟ್ಟುಕೊಂಡಿರುತ್ತಾರೆ. ಅಲಂಕೃತ ಪೇಟಗಳನ್ನು ಧರಿಸಿರುತ್ತಾರೆ. ನಿಹಾಂಗ್ ಭಾರತದಲ್ಲಿ ಹುಟ್ಟಿಕೊಂಡ ಸಶಸ್ತ್ರ ಸಿಖ್ ಯೋಧರ ಪಡೆ. ಈ ನಿಹಾಂಗ್ಗಳು ಫತೇಹ್ ಸಿಂಗ್, ಗುರು ಹರಗೋಬಿಂದ್ ಆರಂಭಿಸಿದ "ಅಕಾಲಿ" ಯಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.
"ಬೆಳಿಗ್ಗೆ 5 ಗಂಟೆ ಸುಮಾರಿಗೆ, ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ (ಕುಂಡ್ಲಿ, ಸೋನಿಪತ್) ಕೈಗಳು, ಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ," ಎಂದು ಡಿಎಸ್ ಪಿ ಹನ್ಸ್ ರಾಜ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ದೆಹಲಿ ಮೂರು ಗಡಿಗಳಲ್ಲಿ ರೈತರ ಹೋರಾಟ:
ಕಳೆದ 2020ರ ನವೆಂಬರ್ 26 ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರ ರಾಜಧಾನಿಯ ಮೂರು ಗಡಿಗಳಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬಿಜೆಪಿ ನಾಯಕ ವರುಣ್ ಗಾಂಧಿ ಕೂಡ ಬೆಂಬಲ ವ್ಯಕ್ತಪಡಿಸಿದ್ದರು.