ಗಾಂಧಿ ಹಂತಕ ಗೋಡ್ಸೆ ಬಿಟ್ಟು ಮತ್ತೊಬ್ಬನಿದ್ದಾನೆ: 'ಸುಪ್ರೀಂ'ನಲ್ಲಿ ದಾವೆ
ನವದೆಹಲಿ, ಮೇ 29: ಗಾಂಧಿಯನ್ನು ಹತ್ಯೆ ಮಾಡಿದ ವ್ಯಕ್ತಿ ಯಾರು ಅಂದರೆ, ಛಕ್ಕನೆ ನಾಥೂರಾಂ ಗೋಡ್ಸೆ ಎಬ ಹೆಸರನ್ನು ಹೇಳ್ತೀವಿ ಅಲ್ವಾ? ಆದರೆ ಆ ಹತ್ಯೆಯಲ್ಲಿ ಮತ್ತೊಬ್ಬ ಭಾಗಿಯಾಗಿದ್ದ ಎಂಬ ವಾದವೊಂದು ಹುಟ್ಟಿಕೊಂಡಿದೆ. ಗಾಂಧೀಜಿ ದೇಹದಲ್ಲಿ ಗೋಡ್ಸೆ ಹಾರಿಸಿದ ಮೂರು ಗುಂಡುಗಳ ಹೊರತಾಗಿ ನಾಲ್ಕನೇ ಗುಂಡು ಪತ್ತೆಯಾಗಿತ್ತಂತೆ.
ಆ ಗುಂಡನ್ನು ಗೋಡ್ಸೆ ಹೊರತಾಗಿ ಮತ್ತೊಬ್ಬ ಹಾರಿಸಿದ್ದಾನೆ. ಇಂಥ ಹಲವು ಪ್ರಶ್ನೆಗಳನ್ನು ಒಳಗೊಂಡ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಹಾಕಲಾಗಿದ್ದು, ಗಾಂಧಿ ಸಾವಿನ ಸುತ್ತ ಹಬ್ಬಿರುವ ಅನುಮಾನವನ್ನು ಬಗೆಹರಿಸಲು, ಆ ಬಗ್ಗೆ ತನಿಖೆಯನ್ನು ನಡೆಸಲು ಹೊಸ ಆಯೋಗವೊಂದನ್ನು ನೇಮಿಸಬೇಕು ಎಂದು ಆಗ್ರಹಿಸಲಾಗಿದೆ.[ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರಿಂದ ದೇಶಭಕ್ತಿ ಕಲಿಯಬೇಕಿಲ್ಲ: ಕೇರಳ ಸಿಎಂ]
ಗಾಂಧಿ ಹತ್ಯೆಯ ತನಿಖೆ ಬಗ್ಗೆ ಹಲವು ಪ್ರಶ್ನೆಗಳನ್ನು ಸಹ ಮಾಡಲಾಗಿದೆ. ಜತೆಗೆ ಹತ್ಯೆಯ ವಿಚಾರವಾಗಿ ವಿನಾಯಕ್ ದಾಮೋದರ್ ಸಾವರ್ಕರ್ ರನ್ನು ದೂಷಿಸುವುದಕ್ಕೆ ಏನಾದರೂ ಆಧಾರವಿದೆಯೇ ಎಂದು ಪ್ರಶ್ನಿಸಲಾಗಿದೆ. ಮುಂಬೈನ ಅಭಿನವ್ ಭಾರತ್ ನ ಟ್ರಸ್ಟಿ ಹಾಗೂ ಸಂಶೋಧಕ ಪಂಕಜ್ ಫಡ್ನಿಸ್ ಈ ಅರ್ಜಿ ಸಲ್ಲಿಸಿದ್ದಾರೆ.
1966ರಲ್ಲಿ ರಚಿಸಿದ ಜಸ್ಟಿಸ್ ಜೆ.ಎಲ್.ಕಪೂರ್ ಆಯೋಗವು ಗಾಂಧಿ ಹತ್ಯೆಯ ಸಂಪೂರ್ಣ ಮಾಹಿತಿ ಹೊರಹಾಕಿಲ್ಲ. ಮೂರು ಗುಂಡು ಹಾರಿಸಿ ಗಾಂಧೀಜಿಯನ್ನು ಕೊಂದ ಆರೋಪದಲ್ಲಿ ನಾಥೂರಾಂ ಗೋಡ್ಸೆ ಹಾಗೂ ನಾರಾಯಣ್ ಆಪ್ಟೆಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಸಾಕ್ಷ್ಯಾಧಾರದ ಕೊರತೆ ಕಾರಣಕ್ಕೆ ಸಾವರ್ಕರ್ ರನ್ನು ಖುಲಾಸೆ ಮಾಡಲಾಗಿತ್ತು.[ಗಾಂಧಿ ಮತ್ತು ಕಿಂಗ್ ಅಹಿಂಸಾ ಪ್ರಿಯರಿಗೆ ಪ್ರಾತ:ಸ್ಮರಣೀಯರು]
ಸಾವರ್ಕರ್ ರ ಸಿದ್ಧಾಂತಗಳಿಂದ ಸ್ಫೂರ್ತಿಗೊಂಡು 2001ರಲ್ಲಿ ಸ್ಥಾಪನೆಯಾಗಿದೆ ಅಭಿನವ್ ಭಾರತ್. ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲರಾದವರ ಪರವಾಗಿ ಇದು ಕೆಲಸ ಮಾಡುತ್ತದೆ. ತಮ್ಮ ಸಂಶೋಧನೆ ಬಗ್ಗೆ ಹೇಳಿರುವ ಫಡ್ನಿಸ್, ಆಗಿನ ಮಾಧ್ಯಮಗಳ ವರದಿ ಪ್ರಕಾರ ಗಾಂಧಿ ದೇಹದೊಳಗೆ ನಾಲ್ಕು ಗುಂಡುಗಳು ಹೊಕ್ಕಿವೆ. ಈ ಅನುಮಾನ ಬಗೆಹರಿಯಬೇಕಿದೆ.