ಮಹಾರಾಷ್ಟ್ರ ಸರ್ಕಾರ ರಚನೆ: ಶಿವಸೇನೆಗೆ ತಿರುಗುತ್ತಾ 'ಶುಕ್ರ'ದೆಸೆ?
ನವದೆಹಲಿ, ನವೆಂಬರ್.21: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಸಾಲು ಸಾಲು ಸಭೆಗಳ ಬಳಿಕವೂ ಶಿವಸೇನೆಗೆ ಬೆಂಬಲ ನೀಡುವ ನಿರ್ಧಾರವನ್ನು ಇನ್ನೂ ಮಿತ್ರಪಕ್ಷಗಳು ಘೋಷಿಸಲು ಮನಸ್ಸು ಮಾಡುತ್ತಿಲ್ಲ.
ಹೌದು, ಕಳೆದ ಎರಡು ದಿನಗಳಿಂದಲೂ ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಕೈಜೋಡಿಸಬೇಕೇ ಬೇಡವೇ ಎಂಬ ಬಗ್ಗೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷದ ಮುಖಂಡರು ಚರ್ಚೆ ನಡೆಸುತ್ತಲೇ ಇದ್ದಾರೆ. ಇಂದು ಕೂಡಾ ದೆಹಲಿಯಲ್ಲಿ ಉಭಯ ಪಕ್ಷದ ನಾಯಕರು ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಿದರು.
'ಮಹಾ' ಸರ್ಕಾರ ರಚನೆ: ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ನೀಲನಕ್ಷೆ ಬಗ್ಗೆ ಚರ್ಚೆ
ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಬದಲು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲು ಶಿವಸೇನೆ ಮುಂದಾಗಿದೆ. ಅದಕ್ಕಾಗಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಜೊತೆಗೆ ಕೈ ಜೋಡಿಸಲು ಮಹಾರಾಷ್ಟ್ರದಲ್ಲಿ ಟೈಗರ್ಸ್ ಮುಂದಾಗಿದ್ದಾರೆ. ಆದರೆ, ಬಿಜೆಪಿ ಜೊತೆಗಿದ್ದ ಶಿವಸೇನೆ ಜೊತೆ ಹೇಗೆ ಕೈ ಜೋಡಿಸಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಹಾಗೂ ಎನ್ ಸಿಪಿ ನಾಯಕರು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಅದಕ್ಕಾಗಿ ಸಾಲು ಸಾಲು ಸಭೆ ನಡೆಸಿದ ಉಭಯ ಪಕ್ಷಗಳ ನಾಯಕರು ಇಂದು ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ.
ಶುಕ್ರವಾರ ಶಿವಸೇನೆಗೆ ಒಲಿಯುತ್ತಾ ಶುಕ್ರದೆಸೆ?
ದೆಹಲಿಯಲ್ಲಿ ನಡೆಯುತ್ತಿದ್ದ ಮ್ಯಾರಥಾನ್ ಮೀಟಿಂಗ್ ನವೆಂಬರ್.22ರಂದು ಮುಂಬೈಗೆ ಶಿಫ್ಟ್ ಆಗಲಿದೆ. ಶಿವಸೇನೆಗೆ ಬೆಂಬಲಿಸುವ ಬಗ್ಗೆ ಘೋಷಿಸುವ ಮೊದಲು ಮುಂಬೈನಲ್ಲಿ ಎನ್ ಸಿಪಿ ತಮ್ಮ ಮಿತ್ರಪಕ್ಷಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ.
ಮೈತ್ರಿ ಕುರಿತ ಎಲ್ಲ ವಿಚಾರಗಳು ಫೈನಲ್
ದೆಹಲಿಯಲ್ಲಿ ನಡೆದ ಸಾಲು ಸಾಲು ಸಭೆಯಲ್ಲಿ ಶಿವಸೇನೆಗೆ ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮೈತ್ರಿ ಸರ್ಕಾರ ರಚನೆಯಿಂದ ಮುಂದೆ ಆಗುವ ಪರಿಣಾಮಗಳ ಬಗ್ಗೆ ನಾಯಕರು ಎಲ್ಲ ಆಯಾಮಗಳಲ್ಲಿ ಚರ್ಚೆ ನಡೆಸಿದ್ದಾರೆ. ಮೈತ್ರಿ ಸರ್ಕಾರವನ್ನು ಬೆಂಬಲಿಸುವುದೋ ಬೇಡವೋ ಎಂಬುದು ಕೂಡಾ ಫೈನಲ್ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌವ್ಹಾಣ್ ತಿಳಿಸಿದ್ದಾರೆ.
ಶಿವಸೇನಾ ಜೊತೆ ಮೈತ್ರಿಗೆ ಸೋನಿಯಾ ಗಾಂಧಿ ಅಸ್ತು: ಬಿಜೆಪಿ ಬೆಸ್ತು
ಮುಂಬೈನಲ್ಲಿ ಹೊರ ಬೀಳುತ್ತಾ ಅಧಿಕೃತ ಘೋಷಣೆ
ದೆಹಲಿಯಲ್ಲೇ ಎಲ್ಲ ರೀತಿಯ ಚರ್ಚೆಗಳು ನಡೆಸಿದ್ದು ಆಗಿದೆ. ಇನ್ನು, ಮುಂಬೈನಲ್ಲಿ ಶಿವಸೇನೆಯೊಂದಿಗೆ ಸಾಮಾನ್ಯ ಕಾರ್ಯಕ್ರಮಗಳ ಪಟ್ಟಿ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ನಡೆಸಲಾಗುತ್ತದೆ. ಮೂರು ಪಕ್ಷಗಳ ನಡುವೆ ಈ ವಿಚಾರದಲ್ಲಿ ಒಮ್ಮತ ಮೂಡಬೇಕಿದೆ. ಅದಾದ ಬಳಿಕವಷ್ಟೇ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಪೃಥ್ವಿರಾಜ್ ಚೌವ್ಹಾಣ್ ತಿಳಿಸಿದ್ದಾರೆ.
ಮ್ಯಾರಥಾನ್ ಮೀಟಿಂಗ್ ನಲ್ಲಿ ಇದ್ದಿದ್ದು ಯಾರು?
ದೆಹಲಿಯಲ್ಲಿ ಇಷ್ಟುದಿನ ನಡೆದ ಮೀಟಿಂಗ್ ಮ್ಯಾರಥಾನ್ ನಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷದ ಹಿರಿಯ ಮುಖಂಡರೇ ಭಾಗಿಯಾಗಿದ್ದರು. ಈ ಪೈಕಿ ಕಾಂಗ್ರೆಸ್ ನ ಅಹ್ಮದ್ ಪಟೇಲ್, ಜೈರಾಮ್ ರಮೇಶ್, ಮಲ್ಲಿಕಾರ್ಜುನ್ ಖರ್ಗೆ, ಪೃಥ್ವಿರಾಜ್ ಚೌವ್ಹಾಣ್, ಬಾಳಾ ಸಾಹೇಬ್ ತೋರಟ್, ನಸೀಮ್ ಖಾನ್, ಹಾಗೂ ಎನ್ ಸಿಪಿ ಮುಖಂಡರಾದ ಪ್ರಫುಲ್ ಪಟೇಲ್, ಸುಪ್ರೀಯಾ ಸುಲೆ, ಅಜಿತ್ ಪವಾರ್, ಜಯಂತ್ ಪಾಟೀಲ್, ನವಾಬ್ ಮಲ್ಲಿಕ್ ಹಾಜರ್ ಇದ್ದರು.