ದೋಸ್ತಿ ದೋಸ್ತಿ ಎನ್ನುತ್ತಲೇ ದೋಖಾ ಮಾಡಿತಾ ಶಿವಸೇನೆ?
ದೆಹಲಿ, ನವೆಂಬರ್.27: ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಸರ್ಕಾರ ರಚಿಸಿದ್ದು ಆಗಿದೆ. ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಯ್ಕೆಯಾಗಿದ್ದು, ಹಳೆಯ ಕಥೆ. ಆದರೆ, ದೋಸ್ತಿ ದೋಸ್ತಿ ಎನ್ನುತ್ತಲೇ ದೋಖಾ ಮಾಡಿದ ಟೈಗರ್ಸ್ ವಿರುದ್ಧ ಬಿಜೆಪಿ ಚಾಣಕ್ಯ ಗುಡುಗಿದ್ದಾರೆ.
ಹೌದು, ಒಂದೆಡೆ ನವೆಂಬರ್.27ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇದರ ಮಧ್ಯೆ ಮೂರು ಪಕ್ಷಗಳ ಮೈತ್ರಿ ಕೇಸರಿ ಪಡೆಯನ್ನು ಕೆರಳಿಸಿದಂತೆ ಕಾಣುತ್ತಿದೆ.
ಡಿಸೆಂಬರ್.01 ಅಲ್ಲ, ನವೆಂಬರ್.28 ಮಹಾ ಸಿಎಂ ಪಟ್ಟಾಭಿಷೇಕ
ಮಹಾರಾಷ್ಟ್ರದಲ್ಲಿ ಬಹುಮತವಿಲ್ಲದೇ ಸರ್ಕಾರ ರಚಿಸಲು ಹೋದ ಬಿಜೆಪಿ ಕೈ ಸುಟ್ಟುಕೊಂಡಿದೆ. ಕಳೆದ 18 ದಿನಗಳಲ್ಲಿ ದೇವೇಂದ್ರ ಫಡ್ನವೀಸ್ ಎರಡು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿ, ನಂತರ ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿ ಪಾಲಿಗೆ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಹೀಗಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಶಿವಸೇನೆ ವಿರುದ್ಧ ಟ್ವೀಟ್ ಏಟು ಕೊಟ್ಟಿದ್ದಾರೆ.
ದುರಾಸೆಯಿಂದ ದೂರವಾಯಿತಾ ಶಿವಸೇನೆ?
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಶಿವಸೇನೆ ದುರಾಸೆ ಹೆಚ್ಚಿದೆ. ಶಿವಸೇನೆ ನಾಯಕರು ದ್ರೋಹ ಮಾಡಿದ್ದು ಕೇವಲ ಭಾರತೀಯ ಜನತಾ ಪಕ್ಷಕ್ಕೆ ಅಲ್ಲ. ಬದಲಿಗೆ ತಮ್ಮನ್ನೇ ನಂಬಿಕೊಂಡಿದ್ದ ಮಹಾರಾಷ್ಟ್ರದ ಜನತೆಗೆ ಅವರು ಮೋಸ ಮಾಡಿದ್ದಾರೆ. ಕೇವಲ ಮುಖ್ಯಮಂತ್ರಿ ಸ್ಥಾನದ ಆಸೆಗಾಗಿ ಬಿಜೆಪಿ ಸಖ್ಯ ತೊರೆದು ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಸಿಎಂ ಸ್ಥಾನ ಕೊಡುತ್ತೀವಿ ಎಂದು ಯಾವತ್ತೂ ಹೇಳಿಲ್ಲ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮೊದಲೇ ಬಿಜೆಪಿ ಹಾಗೂ ಶಿವಸೇನೆ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಅಂದಿನಿಂದಲೂ ಬಿಜೆಪಿ ಹೇಳುತ್ತಲೇ ಬಂದಿದೆ. ಶಿವಸೇನೆ ನಮ್ಮ ಮಿತ್ರಪಕ್ಷವೇ ಆಗಿದ್ದರೂ ಕೂಡಾ ಎಂದೂ ನಾವು ಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿರಲಿಲ್ಲ ಎಂದು ಅಮಿತ್ ಶಾ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಕಳೆದುಕೊಂಡ ನಂತರ ಬಿಜೆಪಿ ಆಡಳಿತದ ರಾಜ್ಯಗಳು
ಅವತ್ತು ಸೈಲೆಂಟ್, ಇವತ್ತು ಯಾಕೆ ವೈಲೆಂಟ್?
ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭಗಳಲ್ಲಿ ಬಿಜೆಪಿ ಜೊತೆ ಜೊತೆಗೇ ಪ್ರಚಾರ ಮಾಡಲಾಯಿತು. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪೋಸ್ಟರ್ ಬ್ಯಾನರ್ ಗಳನ್ನು ಹಿಡಿದುಕೊಂಡೇ ಶಿವಸೇನೆಯ ಅಭ್ಯರ್ಥಿಗಳು ಪ್ರಚಾರ ಮಾಡಿದ್ದರು. ಆಗ ಉದ್ಧವ್ ಠಾಕ್ರೆ ಹಾಗೂ ಅವರ ಪುತ್ರ ಆದಿತ್ಯ ಠಾಕ್ರೆ ವೇದಿಕೆ ಮೇಲೆ ಇದ್ದಾಗಲೂ ಕೂಡಾ ಬಿಜೆಪಿ ಸಿಎಂ ಸ್ಥಾನದ ಬಗ್ಗೆ ಸ್ಪಷ್ಟವಾಗಿ ಹೇಳಿತ್ತು. ದೇವೇಂದ್ರ ಫಡ್ನವೀಸ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಿದ್ದೆವು ಎಂದು ಶಾ ತಿಳಿಸಿದ್ದಾರೆ.
ಮಿತ್ರಪಕ್ಷಗಳ ವಿರುದ್ಧ ಕುದುರೆ ವ್ಯಾಪಾರದ ಆರೋಪ
ಮಹಾರಾಷ್ಟ್ರದಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಸೋನಿಯಾ ಗಾಂಧಿ ಹಾಗೂ ಶರದ್ ಪವಾರ್ ಅವರು ಆರೋಪಿಸಿದ್ದರು. ಆದರೆ, ಅಸಲಿ ಕಥೆ ಬೇರೆಯೇ ಇದೆ. 100 ಸ್ಥಾನಗಳನ್ನು ಹೊಂದಿರುವ ಎರಡು ಪಕ್ಷಗಳು ಸೇರಿಕೊಂಡು 56 ಸ್ಥಾನಗಳಿರುವ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲು ಹೊರಟಿದ್ದೀರಿ. ಇದು ನಿಜವಾದ ಕುದುರೆ ವ್ಯಾಪಾರ ಅಲ್ಲವೇ ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.