ನಮ್ಮ ಸರ್ಕಾರ ಬೀಳಿಸಲು ಇದು ಕರ್ನಾಟಕ ಅಲ್ಲ: ಕಮಲ್ ನಾಥ್
ನವದೆಹಲಿ, ಡಿಸೆಂಬರ್ 14: ತಮ್ಮ ಶಾಸಕರಿಗೆ ಆಮಿಷವೊಡ್ಡಿ ಅವರನ್ನು ಸೆಳೆದುಕೊಳ್ಳುವ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಅವರ ತಂತ್ರಗಳಿಗೆ ಬಲಿಯಾಗಲು ನಮ್ಮ ರಾಜ್ಯ ಕರ್ನಾಟಕವಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದರು.
ನವದೆಹಲಿಯಲ್ಲಿ ಶುಕ್ರವಾರ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯ ಮೊದಲ ಗುರಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವಾಗಿತ್ತೇ ಹೊರತು, ಕರ್ನಾಟಕವಲ್ಲ. ಆದರೆ ಮಧ್ಯಪ್ರದೇಶ ಕರ್ನಾಟಕವಲ್ಲ ಎಂದರು.
ಸಿಂದಿಯಾಗಾಗಿ ಅಧ್ಯಕ್ಷಪಟ್ಟ ಬಿಟ್ಟುಕೊಡಲು ಮುಂದಾದ ಕಮಲ್ ನಾಥ್
'ಮಧ್ಯಪ್ರದೇಶದಲ್ಲಿ ಏನನ್ನೂ ಮಾಡಲು ಸಾಧ್ಯವಾಗದ ಕಾರಣ ಬಿಜೆಪಿಯವರು ಕರ್ನಾಟಕಕ್ಕೆ ಹೋದರು' ಎಂದು ಕಮಲ್ ನಾಥ್ ವ್ಯಂಗ್ಯವಾಡಿದರು.
ಜ್ಯೋತಿರಾದಿತ್ಯ ಸಿಂಧಿಯಾ ಅವರಂತಹ ಹಿರಿಯ ನಾಯಕರು ಪಕ್ಷದ ಚಟುವಟಿಕೆಗಳಿಮದ ದೂರ ಸರಿಯುತ್ತಿರುವ ಸಂದರ್ಭದಲ್ಲಿ ಸರ್ಕಾರ ಎಷ್ಟು ದಿನಗಳವರೆಗೆ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
1984ರ ಸಿಖ್ ನರಮೇಧ; ಮಧ್ಯಪ್ರದೇಶ ಸಿಎಂ ವಿರುದ್ಧ ಕೇಸ್ ರೀ ಓಪನ್
'ಬಿಜೆಪಿ ಎಲ್ಲವನ್ನೂ ಪ್ರಯತ್ನಿಸಿತು. ನಮ್ಮ ಶಾಸಕರಿಗೆ ಆಮಿಷವೊಡ್ಡಿದರು. ನನ್ನ ಮೊದಲ ಸವಾಲು ಸ್ಪೀಕರ್ ಆಯ್ಕೆಯಾಗಿತ್ತು. ನನ್ನ ಪಕ್ಷ ಮತ್ತು ಶಾಸಕರಿಗೆ ಬಗ್ಗೆ ನನಗೆ ತಿಳಿದಿರುವುದರಿಂದ ಆತ್ಮವಿಶ್ವಾಸದಿಂದ ಇದ್ದೆ. ಬಳಿಕ ಉಪ ಸಭಾಧ್ಯಕ್ಷರ ಆಯ್ಕೆ ವಿಚಾರ ಬಂತು. ಈ ಹುದ್ದೆಗೂ ಚುನಾವಣೆ ನಡೆಯಲಿ ಎಂದು ಒತ್ತಾಯಿಸಿದೆ. ನಂತರ ಕೆಲವು ಮಸೂದೆಗಳನ್ನು ನಾವು ಅಂಗೀಕರಿಸಬೇಕಾಗಿತ್ತು. ಆಗ ಎಲ್ಲ ಶಾಸಕರೂ ನನ್ನ ಬಳಿ ಬಂದು ಬಿಜೆಪಿಯವರು ನಮಗೆ ಹಣ ನೀಡುವ ಆಮಿಷ ಒಡ್ಡುತ್ತಿದ್ದಾರೆ ಎಂದು ತಿಳಿಸಿದರು. ಹಾಗಾದರೆ ಹಣ ತೆಗೆದುಕೊಳ್ಳಿ ಎಂದೆ. ಎಲ್ಲ ಶಾಸಕರು ಮಾತ್ರವಲ್ಲ, ಬಿಜೆಪಿಯ ಇಬ್ಬರು ಶಾಸಕರ ಮತವೂ ನನಗೆ ಸಿಕ್ಕಿತು' ಎಂದು ಹೇಳಿದರು.