ಮಹಾತ್ಮ ಗಾಂಧಿ ಹಂತಕನೇ ದೇಶಭಕ್ತ: ಬಿಜೆಪಿ ಸಂಸದರೇ ಏನು ಇದೆಲ್ಲ?
ದೆಹಲಿ, ನವೆಂಬರ್.27: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಹೊರಟಿರುವ ಬಿಜೆಪಿಗೆ ಮೇಲಿಂದ ಮೇಲೆ ಪಟ್ಟುಗಳು ಬೀಳುತ್ತಲೇ ಇವೆ. ಇಂದು ಬಿಜೆಪಿ ಸಂಸದರೇ ನೀಡಿರುವ ಮತ್ತೊಂದು ಹೇಳಿಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಆಡಬಾರದ ಮಾತನ್ನು ಆಡಿದ ತಪ್ಪಿಗೆ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಅವರನ್ನು ಲೋಕಸಭೆಯಿಂದಲೇ ಹೊರ ಕಳುಹಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಅಂಥದ್ದೇನು ಮಾತನಾಡಿದರು ಎಂದು ಎಲ್ಲರಿಗೂ ಅಚ್ಚರಿ ಆಗಬಹುದು.
ಕೇಂದ್ರದ ವಿರುದ್ಧ ಬೆಂಕಿ ಉಗುಳಿದ ಕಾಂಗ್ರೆಸ್; ಹೀಗೆ ಮಾಡುವುದೇ ಮೋದಿ?
ಹೌದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾಗೆ ವಿಶೇಷ ಭದ್ರತಾ ಪಡೆ ಸೌಲಭ್ಯವನ್ನು ವಾಪಸ್ ಪಡೆದಿರುವ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಆಗುತ್ತಿತ್ತು. ಈ ವೇಳೆ ಮಹಾತ್ಮ ಗಾಂಧಿಯವರನ್ನು ಗೋಡ್ಸೆ ಏಕೆ ಕೊಂದರು ಎಂದು ಡಿಎಂಕೆ ಸಂಸದ ಎ.ರಾಜ ಪ್ರಶ್ನೆ ಎತ್ತಿದರು.
ದೇಶಭಕ್ತನ ಬಗ್ಗೆ ಹೀಗೆಲ್ಲ ಮಾತನಾಡಬೇಡಿ!
ನಾಥುರಾಮ್ ಗೋಡ್ಸೆ ಮಹಾತ್ಮ ಗಾಂಧಿಯನ್ನು ಕೊಂದಿದ್ದೇಕೆ ಎಂದು ಡಿಎಂಕೆ ಸದಸ್ಯ ಎ ರಾಜ ಪ್ರಶ್ನೆ ಎತ್ತಿದರು. ಈ ವೇಳೆ ಎದ್ದು ನಿಂತ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಗೋಡ್ಸೆಯೊಬ್ಬ ದೇಶಭಕ್ತರಾಗಿದ್ದು, ಅವರ ಬಗ್ಗೆ ಹೀಗೆಲ್ಲ ಮಾತನಾಡಬಾರದು ಎಂದರು. ಅಲ್ಲದೇ ಹತ್ಯೆ ವಿಚಾರದಲ್ಲಿ ದೇಶಭಕ್ತನನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.
ಬಿಜೆಪಿ ಸಂಸದೆ ಮಾತಿನಿಂದ ಕೆರಳಿದ ವಿಪಕ್ಷ ಸದಸ್ಯರು ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದ ಸಾಧ್ವಿ ಪ್ರಗ್ಯಾ ಅವರನ್ನು ಸದನದಿಂದ ಹೊರ ಕಳಿಸುವಂತೆ ಪಟ್ಟು ಹಿಡಿದವು. ಕೊನೆಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾವರನ್ನು ಸದನದಿಂದ ಹೊರ ಕಳುಹಿಸಿದರು.